ಅದೇನು ವಿಮಾನ ನಿಲ್ದಾಣನೋ, ದೇವಾಲಯವೋ: ಮುಗಿಲು ಮುಟ್ಟಿದ ಅಯ್ಯಪ್ಪನ ಭಜನೆ
Recommended Video

ಕೊಚ್ಚಿನ್, ನ 16: ಎರಡು ತಿಂಗಳ ಮಕರವಿಳಕ್ಕು ಋತುವಿನ ಪೂಜೆಗಾಗಿ ಶಬರಿಮಲೆ, ಅಯ್ಯಪ್ಪಸ್ವಾಮಿ ದೇವಾಲಯದ ಬಾಗಿಲು ಇಂದು ಸಂಜೆ ತೆರೆಯಲಿದ್ದು, ನಾಳೆಯಿಂದ (ನ 17) ಭಕ್ತರು ದೇವಾಲಯ ಪ್ರವೇಶಿಸಬಹುದಾಗಿದೆ.
ಈ ನಡುವೆ, ಅಯ್ಯಪ್ಪನ ದರ್ಶನಕ್ಕೆ ಪುಣೆಯಿಂದ ಶುಕ್ರವಾರ ಬೆಳ್ಳಂಬೆಳ್ಳಿಗೆನೇ ಕೊಚ್ಚಿನ್ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಭೂಮಾತಾ ಬ್ರಿಗೇಡಿನ ತೃಪ್ತಿ ದೇಸಾಯಿಗೆ ಅಯ್ಯಪ್ಪ ಭಕ್ತರು ದಿಗ್ಬಂಧನ ಹಾಕಿದ್ದಾರೆ.
ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ಭಾರೀ ಸಂಖ್ಯೆಯಲ್ಲಿ ಅಯ್ಯಪ್ಪ ಭಕ್ತರು ಜಮಾಯಿಸಿದ್ದು, ಏರ್ಪೋರ್ಟ್ ನಲ್ಲೇ ಅಯ್ಯಪ್ಪನ ಭಜನೆಯನ್ನು ಮಾಡುತ್ತಿದ್ದಾರೆ. ಕೊಚ್ಚಿನ ವಿಮಾನ ನಿಲ್ದಾಣ ಅಕ್ಷರಸಃ ಭಜನಾ ಮಂದಿರದಂತಾಗಿದೆ. ಅಯ್ಯಪ್ಪದಿನಕ ತೋಂತೋಂ, ವೀರಮಣಿ ಕಂಠನೇ, ಸ್ವಾಮಿ ಶರಣಂ ಅಯ್ಯಪ್ಪನೇ ಎಂದು ಮಹಿಳೆಯರೂ ಸೇರಿ ವಿಮಾನ ನಿಲ್ದಾಣದಲ್ಲಿ ಅಯ್ಯಪ್ಪ ಭಕ್ತರು ಭಜನೆ ಮಾಡುತ್ತಿದ್ದಾರೆ.

ವಿಮಾನ ನಿಲ್ದಾಣದಿಂದ ಹೊರಹೋಗುವ ಎಲ್ಲಾ ಗೇಟಿನಲ್ಲಿ ಅಯ್ಯಪ್ಪ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವುದರಿಂದ, ಪೊಲೀಸರೂ ಸದ್ಯದ ಮಟ್ಟಿಗೆ ಕೈಕಟ್ಟಿ ಕುಳಿತಿದ್ದಾರೆ. ಪ್ರಯಾಣಿಕರಂತೆ, ಪೊಲೀಸರು ಕೂಡಾ ಅಯ್ಯಪ್ಪ ಭಕ್ತರು ಭಜನೆ ಮಾಡುವುದನ್ನು ನೋಡುತ್ತಿದ್ದಾರೆ.
ತೃಪ್ತಿ ದೇಸಾಯಿ ಎಲ್ಲಿಂದ ಬಂದರೋ, ಅಲ್ಲಿಗೆ ವಾಪಸ್ ಹೋಗಲಿ. ಶಬರಿಮಲೆ ದೇವಾಲಯಕ್ಕೆ ಹೋಗಲೇ ಬೇಕು ಎನ್ನುವುದು ಅವರ ಹಠವಾದರೆ, ನಮ್ಮ ಎದೆಯ ಮೇಲೆ ನಡೆದುಕೊಂಡು ಹೋಗಲಿ ಎಂದು ಹೋರಾಟಗಾರ ರಾಹುಲ್ ಈಶ್ವರ್ ಎಚ್ಚರಿಕೆ ನೀಡಿದ್ದಾರೆ.
ಕೊಚ್ಚಿ ವಿಮಾನ ನಿಲ್ದಾಣದಲ್ಲಿ ತ್ವೇಷಮಯ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಭಟನಾಕಾರರು ಸದ್ಯ, ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದಾರಾದರೂ, ಪೊಲೀಸರು ಬಲವಂತವಾಗಿ ತೃಪ್ತಿಯನ್ನು ಕರೆದೊಯ್ಯಲು ಯತ್ನಿಸಿದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ಪ್ರತಿಭಟನಾಕಾರರು ನಮ್ಮನ್ನು ಹೆದರಿಸುತ್ತಿದ್ದಾರೆಯೆ? ಅಥವಾ ನಾವು ಹೇಗೆ ಶಬರಿಮಲೆಗೆ ಹೋಗುತ್ತೇವೆ ಎಂದು ಅವರೇ ಹೆದರಿದ್ದಾರೆಯೇ? ನಾವು ಅಯ್ಯಪ್ಪನ ದರ್ಶನ ಪಡೆಯದೆ ಮಹಾರಾಷ್ಟ್ರಕ್ಕೆ ಹಿಂದಿರುಗುವುದಿಲ್ಲ ಎಂದು ತೃಪ್ತಿ ದೇಸಾಯಿ ಪ್ರತಿಭಟನಾಕಾರರಿಗೆ ಸವಾಲು ಹಾಕಿದ್ದಾರೆ.












Click it and Unblock the Notifications