ಪಿಣರಾಯಿ 2.0 ಸರ್ಕಾರದಲ್ಲಿ ಕೆ. ಕೆ. ಶೈಲಜಾಗೆ ಸಚಿವ ಸ್ಥಾನವಿಲ್ಲ?
ತಿರುವನಂತಪುರಂ, ಮೇ 18; ಕೇರಳ ವಿಧಾನಸಭೆ ಚುನಾವಣೆ ಪ್ರಕಟವಾಗಿದ್ದು ಎಲ್ಡಿಎಫ್ ಮತ್ತೊಮ್ಮೆ ಸರ್ಕಾರ ರಚನೆ ಮಾಡಲಿದೆ. ಮೇ 20ರಂದು ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. 21 ಸಚಿವರು ಪಿಣರಾಯಿ ವಿಜಯನ್ ಸಂಪುಟ ಸೇರಲಿದ್ದಾರೆ.
ರಾಜ್ಯದಲ್ಲಿ ಕೋವಿಡ್ ನಿಯಂತ್ರಣದ ವಿಚಾರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದವರು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ. ಆದರೆ ಪಿಣರಾಯಿ ವಿಜಯನ್ 2ನೇ ಅವಧಿಯಲ್ಲಿ ಕೆ. ಕೆ. ಶೈಲಜಾ ಸಚಿವರಾಗಿ ಇರುವುದಿಲ್ಲ ಎಂಬ ಮಾಹಿತಿ ಸಿಕ್ಕಿದೆ.
2021ರ ವಿಧಾನಸಭಾ ಚುನಾವಣೆಯಲ್ಲಿ ಕಣ್ಣೂರು ಜಿಲ್ಲೆಯ ಮಟ್ಟನ್ನೂರು ಕ್ಷೇತ್ರದಿಂದ ಕೆ. ಕೆ. ಶೈಲಜಾ 60,963 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅತಿ ಹೆಚ್ಚಿನ ಮತಗಳ ಅಂತರದಿಂದ ಗೆದ್ದ ಶಾಸಕರು ಎಂಬ ದಾಖಲೆಯನ್ನು ಬರೆದಿದ್ದಾರೆ.

ಗುರುವಾರ ಪಿಣರಾಯಿ ವಿಜಯನ್ ಸಂಪುಟಕ್ಕೆ ಹೊಸ ಸಚಿವರು ಸೇರ್ಪಡೆಯಾಗಲಿದ್ದಾರೆ. ಸ್ಪೀಕರ್ ಆಗಿ ಎಂ. ಬಿ. ರಾಜೇಶ್ ಆಯ್ಕೆಯಾಗಲಿದ್ದಾರೆ. ಆದರೆ ಸಂಪುಟಕ್ಕೆ ಕೆ. ಕೆ. ಶೈಲಜಾ ಅವರು ಸೇರ್ಪಡೆಗೊಳ್ಳುತ್ತಿಲ್ಲ ಎಂಬ ಸುದ್ದಿಗಳು ಹಬ್ಬಿವೆ.
ಕೋವಿಡ್ ನಿಯಂತ್ರಣದ ವಿಚಾರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆಗಳಿಸಿದ ಕೆ. ಕೆ. ಶೈಲಜಾ ಸಂಪುಟಕ್ಕೆ ಏಕೆ ಸೇರುತ್ತಿಲ್ಲ? ಎಂಬುದು ಸದ್ಯದ ಪ್ರಶ್ನೆಯಾಗಿದೆ. ರಾಜ್ಯದ ಆರೋಗ್ಯ ಖಾತೆ ಯಾರ ಪಾಲಾಗಲಿದೆ? ಎಂಬುದು ಕುತೂಹಲ ಮೂಡಿಸಿದೆ.
ಶೈಲಜಾ ಟೀಚರ್ ಎಂದೇ ಖ್ಯಾತಿ ಪಡೆದಿರುವ 64 ವರ್ಷದ ಕೆ. ಕೆ. ಶೈಲಜಾ 23 ವರ್ಷಗಳ ಕಾಲ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ. 2004ರಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. 2016ರಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿದ ಅವರು ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಸರ್ಕಾರದಲ್ಲಿ ಆರೋಗ್ಯ ಸಚಿವರಾದರು.












Click it and Unblock the Notifications