ನೌಕರರ ವೇತನ ಬಾಕಿ; ಕೆಎಸ್ಆರ್ಟಿಸಿಗೆ ಹೈಕೋರ್ಟ್ ತರಾಟೆ
ತಿರುವನಂತಪುರಂ, ಆಗಸ್ಟ್ 19: ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ)ಯು ತನ್ನ ಉದ್ಯೋಗಿಗಳ ಬಾಕಿ ಇರುವ ವೇತನವನ್ನು ಪಾವತಿ ಮಾಡಿಲ್ಲ. ಈ ವಿಚಾರದಲ್ಲಿ ಕೇರಳ ಹೈಕೋರ್ಟ್ ಸಂಸ್ಥೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಅರ್ಜಿಯೊಂದರ ವಿಚಾರಣೆ ವೇಳೆ ನ್ಯಾಯಾಲಯವು ಮೌಖಿಕವಾಗಿ ಟೀಕಿಸಿದ್ದು, ಸರ್ಕಾರ ಹಣ ನೀಡಲು ನಿರಾಕರಿಸಿದರೆ ಅದು ಕೇವಲ ವಿಳಂಬದ ವಿಷಯವಲ್ಲ. ಇದು ಸಂಪೂರ್ಣ ವೈಫಲ್ಯದ ವಿಷಯವಾಗಿದೆ ಎಂದಿತು. ಮುಂದಿನ ತಿಂಗಳು ಓಣಂ ಹಬ್ಬವನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರಿದ್ದ ಏಕ ಸದಸ್ಯ ಪೀಠ, ಜಗತ್ತೇ ಓಣಂ ಅನ್ನು ಆಚರಿಸುತ್ತಿರುವಾಗ ಈ ಜನರು ಹಸಿದಿರಬೇಕಾ? ಎಂದು ಪ್ರಶ್ನಿಸಿತು.
ಕೂಡಲೇ ವೇತನ ನೀಡುತ್ತಿಲ್ಲ ಎಂದು ಕೆಎಸ್ಆರ್ಟಿಸಿ ನೌಕರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಕೆಎಸ್ಆರ್ಟಿಸಿಯ ಆಸ್ತಿಯನ್ನು ನೌಕರರ ಸಂಬಳ ವಿತರಣೆಗೆ ಬಳಸಿಕೊಳ್ಳಬೇಕು. ಇನ್ನೂ ಸಂಬಳ ನೀಡದ ಕಾರಣ ಸಿಂಗಲ್ ಡ್ಯೂಟಿ ವಿಷಯ ಇನ್ನೂ ನಿರ್ಧಾರವಾಗಿಲ್ಲ. ನೌಕರರಿಗೆ ಕೆಎಸ್ಆರ್ಟಿಸಿ ಸಂಬಳ ನೀಡದಿರುವಾಗ 12 ಗಂಟೆಗಳ ಕಾಲ ಕೆಲಸ ಮಾಡಲು ಹೇಗೆ ಹೇಳುತ್ತದೆ? ಎಂದು ಕೇಳಿತು.

ಕೆಎಸ್ಆರ್ಟಿಸಿ ತನ್ನ ಉದ್ಯೋಗಿಗಳಿಗೆ ಜೂನ್ ಮತ್ತು ಜುಲೈ ತಿಂಗಳ ವೇತನವನ್ನು ಆಗಸ್ಟ್ 10 ರ ಮೊದಲು ವಿತರಿಸುವಂತೆ ನ್ಯಾಯಾಲಯ ಸೂಚನೆ ನೀಡಿತು. ಅರ್ಜಿ ವಿಚಾರಣೆ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಹಣದ ಕೊರತೆಯಿಂದ ಜುಲೈ ತಿಂಗಳ ವೇತನ ವಿತರಣೆಯಲ್ಲಿ ವಿಳಂಬವಾಗಿದೆ ಎಂದು ಹೇಳಿತು.

ಏತನ್ಮಧ್ಯೆ, ವೇತನದ ಬಗ್ಗೆ ಉನ್ನತ ಮಟ್ಟದ ಸಭೆ ಕರೆಯಲಾಗುತ್ತಿದೆ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು. ಇದಕ್ಕೆ ನ್ಯಾಯಾಲಯವು ವೇತನವನ್ನು ಪಾವತಿಸುವ ಬಗ್ಗೆ ಸರ್ಕಾರವು ಪ್ರಾಮಾಣಿಕವಾಗಿದ್ದರೆ, ಅವರು ಮೊದಲೇ ಸಭೆ ನಡೆಸಬೇಕಿತ್ತು ಎಂದು ಹೇಳಿತು. ಆಗಸ್ಟ್ 24 ರಂದು ಹೈಕೋರ್ಟ್ ಈ ಕುರಿತ ಅರ್ಜಿಯ ವಿಚಾರಣೆಯನ್ನು ಮತ್ತೆ ನಡೆಸಲಿದೆ.












Click it and Unblock the Notifications