ಶಬರಿಮಲೆ ಭಕ್ತರ ಸಂಖ್ಯೆ ಏರಿಕೆ ಆದೇಶ ವಿರೋಧಿಸಿ ಸುಪ್ರೀಂಕೋರ್ಟ್ಗೆ ಕೇರಳ ಸರ್ಕಾರ ಅರ್ಜಿ
ತಿರುವನಂತಪುರಂ, ಡಿಸೆಂಬರ್ 24: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯ ಮಿತಿಯನ್ನು ಪ್ರತಿ ದಿನ 5,000ಕ್ಕೆ ಹೆಚ್ಚಿಸುವಂತೆ ಕೇರಳ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಕೇರಳ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವೆ ಈ ಆದೇಶವು ಪೊಲೀಸ್ ಸಿಬ್ಬಂದಿ ಮತ್ತು ಆರೋಗ್ಯ ಅಧಿಕಾರಿಗಳಿಗೆ ದೊಡ್ಡ ಹೊರೆಯಾಗಲಿದೆ ಎಂದು ಸರ್ಕಾರ ಹೇಳಿದೆ.
ಕೇರಳ ಹೈಕೋರ್ಟ್ ಡಿ. 18ರಂದು ನೀಡಿದ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿರುವ ರಾಜ್ಯ ಸರ್ಕಾರ, ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು. ಅದು ವಾರದ ದಿನಗಳಲ್ಲಿ ಭಕ್ತರ ಸಂಖ್ಯೆಯ ಮಿತಿಯನ್ನು 2,000ಕ್ಕೆ ಮತ್ತು ವಾರಾಂತ್ಯಗಳಲ್ಲಿ 3,000ಕ್ಕೆ ಹೆಚ್ಚಿಸಿತ್ತು ಎಂದು ಮಾಹಿತಿ ನೀಡಿದೆ.
ಶಬರಿಮಲೆ ದೇವಸ್ಥಾನಕ್ಕೆ ಕೇರಳ ಸರ್ಕಾರದಿಂದ 20 ಕೋಟಿ ರೂ ಅನುದಾನ
ಡಿಸೆಂಬರ್ 20 ರಿಂದ ಮುಂದಿನ ವರ್ಷದ ಜನವರಿ 14ರವರೆಗೆ ಶಬರಿಮಲೆ ದೇವಸ್ಥಾನದ ಉತ್ಸವದ ಅವಧಿಯಲ್ಲಿ ಕೋವಿಡ್ 19 ಸೋಂಕು ಹರಡದಂತೆ ನೋಡಿಕೊಳ್ಳಲು ಸರ್ಕಾರವು ಉನ್ನತ ಮಟ್ಟದ ಸಮಿತಿ ರಚಿಸಿದ್ದು, ಅದು ಎಲ್ಲ ಅಂಶಗಳನ್ನೂ ಪರಿಗಣಿಸಿ, ದೈನಂದಿನ ಭಕ್ತರ ಸಂಖ್ಯೆಯನ್ನು ನಿಗದಿಗೊಳಿಸಲಿದೆ ಎಂದು ತಿಳಿಸಿದೆ.
ದೈನಂದಿನ ಭಕ್ತರ ಸಂಖ್ಯೆಯ ಮಿತಿಯನ್ನು 5,000ಕ್ಕೆ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದ್ದ ಹೈಕೋರ್ಟ್, ಅದರ ವಿರುದ್ಧ ಸಲ್ಲಿಸಲಾಗಿದ್ದ ಎಲ್ಲ ರಿಟ್ ಅರ್ಜಿಗಳನ್ನು ವಜಾಗೊಳಿಸಿತ್ತು. ಯಾವುದೇ ಸೂಕ್ತ ವರದಿ ಅಥವಾ ದಾಖಲೆಗಳನ್ನು ಪರಿಗಣಿಸಿದೆಯೇ ಹೈಕೋರ್ಟ್ ಏಕಾಏಕಿ ಭಕ್ತರ ಸಂಖ್ಯೆಯನ್ನು ಹೆಚ್ಚಳ ಮಾಡಿದೆ. ಶಬರಿಮಲೆ ದೇವಸ್ಥಾನದ ಬಳಿ ಕರ್ತವ್ಯ ನಿಯೋಜನೆಗೆ ತೆರಳಿರುವ ಅನೇಕ ಪೊಲೀಸ್ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು ಮತ್ತು ಭಕ್ತರಲ್ಲಿ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಹೀಗಿರುವಾಗ ಭಕ್ತರ ಸಂಖ್ಯೆಯನ್ನು ಹೆಚ್ಚಿಸಿದರೆ ಅಪಾಯ ಹೆಚ್ಚಲಿದೆ ಎಂದು ವಕೀಲ ಜಿ. ಪ್ರಕಾಶ್ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ಕೇರಳ ಸರ್ಕಾರ ಹೇಳಿದೆ.