Property: ಬೆಂಗಳೂರಿನ ಹೃದಯ ಭಾಗದಲ್ಲಿ ಒತ್ತುವರಿಯಾದ 2 ಕೋಟಿ ಮೌಲ್ಯದ ಜಾಗ ಜಿಬಿಎ ವಶಕ್ಕೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒತ್ತುವರಿ ಆಗಿದ್ದ ರಾಜಕಾಲುವೆ ತೆರವು, ಹೂಳೆತ್ತುವ ಕಾರ್ಯಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಂದಾಗಿದೆ. ಇದರ ಬೆನ್ನಲ್ಲೇ ಬೆಂಗಳೂರಿನ ಹೃದಯ ಭಾಗದಲ್ಲಿ ಒತ್ತುವರಿಯಾಗಿದ್ದ ಬರೋಬ್ಬರಿ 2 ಕೋಟಿ ಮೌಲ್ಯದ ಜಾಗವನ್ನು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳು ಮಂಗಳವಾರ ಮರಳಿ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಸ್ಥಳೀಯರಿಂದ ಸಾಕಷ್ಟು ದೂರುಗಳು ಬಂದ ಬೆನಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.
ಜಯನಗರ ವಿಧಾನಸಭಾ ಕ್ಷೇತ್ರದ ಜೆ.ಪಿ.ನಗರ 2ನೇ ಹಂತ, ಕೆ.ಎಸ್.ಆರ್.ಟಿ.ಸಿ ಲೇಔಟ್ 5ನೇ ಅಡ್ಡರಸ್ತೆಯ ಹೆಚ್.ಟಿ.ಲೈನ್ ಕೆಳಭಾಗದಲ್ಲಿ ಸರ್ಕಾರಿ ಜಾಗವು ಒತ್ತುವರಿಯಾಗಿತ್ತು. ಇತ್ತೀಚೆಗೆ ಒತ್ತುವರಿ ಜಾಗ ಗುರುತಿಸಲು ಸೂಚನೆ ನೀಡಿದ್ದ ಪಾಲಿಕೆ ಇದೀಗ ಆ ಜಾಗವನ್ನು ಮರಳಿ ಸುಪರ್ದಿಗೆ ಪಡೆದಿದೆ.

ಜೆಪಿ ನಗರದ ಕೆ.ಎಸ್.ಆರ್.ಟಿ.ಸಿ. ಬಡಾವಣೆಯ ಸಾರ್ವಜನಿಕ ಉದ್ಯಾನವನಕ್ಕಾಗಿ ಜಾಗವನ್ನು ಮೀಸಲಿಡಲಾಗಿತ್ತು. ಈ ಪ್ರದೇಶವನ್ನು ಅನಾಮದ್ಯಯ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವುದಾಗಿ ಸಾರ್ವಜನಿಕ ದೂರುಗಳು ಬಂದಿದ್ದ ಹಿನ್ನಲೆಯಲ್ಲಿ ಪಾಲಿಕೆಯ ಆಯುಕ್ತ ಕೆ.ಎನ್.ರಮೇಶ್ ರವರ ನಿರ್ದೇಶನದ ಮೇರೆಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಒತ್ತುವರಿ ತೆರವುಗೊಳಿಸಿದರು.
ಬಹುಕೋಟಿ ಮೌಲ್ಯದ ಉದ್ಯಾನ ಜಾಗ ಪಾಲಿಕೆ ಸುಪರ್ದಿಗೆ
ಕೆ.ಎಸ್.ಆರ್.ಟಿ.ಸಿ. ಬಡಾವಣೆಯ ಹೆಚ್.ಟಿ.ಲೈನ್ ಕೆಳಭಾಗದಲ್ಲಿ ಪಾಲಿಕೆಯಿಂದ ಉದ್ಯಾನವನಕ್ಕಾಗಿ ಮೀಸಲಿಡಲಾಗಿದ್ದ ಒಟ್ಟು 1495 ಚದರ ಅಡಿ ವಿಸ್ತೀರ್ಣದ ಅಂದಾಜು 2 ಕೋಟಿ ರೂಪಾಯಿ ಮೌಲ್ಯದ ಜಾಗದಲ್ಲಿ ಕೆಲವು ವ್ಯಕ್ತಿಗಳು ಅನಧಿಕೃತವಾಗಿ ಶೆಡ್ಗಳನ್ನು ನಿರ್ಮಿಸಿಕೊಂಡಿದ್ದರು. ಇಂದು ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಈ ಜಾಗದಲ್ಲಿದ್ದ ಅನಧಿಕೃತ ಶೆಡ್ಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಮುಂದೆ ಮತ್ತೆಪಾಲಿಕೆ ಜಾಗವನ್ನು ಒತ್ತುವರಿಯಾಗದಂತೆ ಅಗತ್ಯ ಕ್ರಮ ವಹಿಸುವುದಾಗಿ ಪಾಲಿಕೆ ಅಧಿಕಾರಿಗಳು ತಿಳಿಸಿದರು.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕ್ರಮ
ಬೆಂಗಳೂರು ಪಶ್ಚಿಮ ವಲಯದ ಆರ್.ಆರ್ ನಗರ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳು ಮತ್ತು ಹಲಗೆವಡೇರಹಳ್ಳಿ ಕೆರೆ ಪರಿಶೀಲಿಸಿದ ಎಫ್.ಇ.ಸಿ.ಸಿ ವಿಶೇಷ ಆಯುಕ್ತರಾದ ಸುಷಮಾ ಗೋಡಬೋಲೆ ಅವರು, ಸದರಿ ಕೆರೆಗೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ವಾಕ್ವೇಗೆ ಗ್ರಾವೆಲ್ ಅಳವಡಿಸಬೇಕು. ಕೊಳಚೆ ನೀರು ಸೇರದಂತೆ ನಿರ್ಮಿಸುತ್ತಿರುವ ತಿರುವು ಗಾಲುವೆ ಕಾಮಗಾರಿಯನ್ನು ಮುಂದಿನ 15 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ಕೆರೆಗೆ ಕೊಳಚೆ ನೀರು ಸೇರದಂತೆ ತಿರುವು ಗಾಲುವೆ ನಿರ್ಮಾಣ ಕಾಮಗಾರಿ ಶೇ. 60ರಷ್ಟು ಪೂರ್ಣಗೊಂಡಿದೆ. ಉಳಿದ ಕಾಮಗಾರಿಗೆ ವೇಗ ನೀಡಬೇಕಕಿದೆ. ತೋಟಗಾರಿಕಾ ವಿಭಾಗದೊಂದಿಗೆ ಸಮನ್ವಯ ಸಾಧಿಸಿ, ಕೆರೆಯ ಸುತ್ತಮುತ್ತ ಅಲಂಕಾರಿಕ ಹೂಬಿಡುವ ಸಸಿಗಳು ಹಾಗೂ ಹಣ್ಣಿನ ಸಸಿಗಳನ್ನು ನೆಡಬೇಕೆಂದರು.
ಬಾವಿ ಪುನಶ್ಚೇತನಕ್ಕೆ ಪ್ರಸ್ತಾವನೆ
ಹಲಗೆವಡೇರಹಳ್ಳಿ ಕೆರೆ ಸಮೀಪದಲ್ಲಿರುವ ಹಳೆಯ ಬಾವಿಯ ಪುನಶ್ಚೇತನ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು. ಭಾರಿ ಮಳೆಯ ಸಂದರ್ಭದಲ್ಲಿ ರಾಜರಾಜೇಶ್ವರಿ ನಗರ ಆರ್ಚ್ ಸಮೀಪದ ರಾಜಕಾಲುವೆಯಿಂದ ಹೆಚ್ಚುವರಿ ನೀರು ಮುಖ್ಯ ರಸ್ತೆಗೆ ಹರಿದು ಪ್ರವಾಹ ಉಂಟು ಮಾಡುತ್ತದೆ. ತಡೆಗಟ್ಟಲು ರಸ್ತೆಯ ಪಕ್ಕದಲ್ಲಿರುವ ರಾಜಕಾಲುವೆಯ ತಡೆಗೋಡೆಯ ಎತ್ತರ ಹೆಚ್ಚಿಸುವಂತೆ ಸಲಹೆ ನೀಡಿದರು. ಇದರೊಂದಿಗೆ ನಾಗರಬಾವಿ, ಮೈಸೂರು ರಸ್ತೆ, ನಾಯಂಡಹಳ್ಳಿ ಪೆಟ್ರೋಲ್ ಬಂಕ್ ಬಳಿಯ ಪ್ರವಾಹ ಪ್ರದೇಶಗಳನ್ನು ಭೇಟಿ ನೀಡಿ ಅಗತ್ಯ ಸೂಚನೆ ಕೊಟ್ಟರು.













Click it and Unblock the Notifications