ಕೇರಳದಲ್ಲಿ ಕರ್ನಾಟಕದ ಖಡಕ್ ಐಪಿಎಸ್ ಯತೀಶ್ ಮತ್ತೆ ಟ್ರೆಂಡಿಂಗ್
ನೀಲಕಲ್ (ಕೇರಳ), ನವೆಂಬರ್ 22: ಕರ್ನಾಟಕದ ಮೂಲದ ಐಪಿಎಸ್ ಅಧಿಕಾರಿ ಯತೀಶ್ ಚಂದ್ರ ಅವರು ಕೇರಳದಲ್ಲಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಶಬರಿಮಲೆಗೆ ತೆರಳಲು ಸಿದ್ಧವಾಗಿದ್ದ ಕೇಂದ್ರ ಸಚಿವ ಪೊನ್ ರಾಧಾಕೃಷ್ಣ ಅವರ ಜತೆ ನಡೆಸಿದ ಮಾತಿನ ಚಕಮಕಿ ಬಗ್ಗೆ ಪರ ವಿರೋಧ ಚರ್ಚೆ ಆರಂಭವಾಗಿದೆ.
ಈ ನಡುವೆ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದ ಅಧಿಕಾರಿಗೆ ಶಬ್ಬಾಷ್ ಎನ್ನದೆ, ಅವರ ವಿರುದ್ಧವೇ ಬಿಜೆಪಿ ಕಿಡಿ ಕಾರಿದೆ.
ಕೇಂದ್ರ ಹಡುಗು ಮತ್ತು ಹಣಕಾಸು ಖಾತೆ ರಾಜ್ಯ ಸಚಿವ ಪೊನ್ ರಾಧಾಕೃಷ್ಣ ಅವರು ಶಬರಿಮಲೆಯ ಬೇಸ್ ಕ್ಯಾಂಪ್ ನಿಲಕಲ್ ಗೆ ಬಂದಿದ್ದರು. ಅಲ್ಲಿಂದ ಪಂಪಾಗೆ ತಮ್ಮ ಖಾಸಗಿ ವಾಹನದಲ್ಲಿ ಬೆಂಬಲಿಗರ ಜತೆ ತೆರಳಲು ಸಿದ್ಧವಾಗಿದ್ದರು.
ಆದರೆ, ಇದಕ್ಕೆ ಅಲ್ಲಿನ ಪೊಲೀಸರು ಅವಕಾಶ ನೀಡಿರಲಿಲ್ಲ. ತಮ್ಮ ಬೆಂಬಲಿಗರ ವಾಹನಗಳನ್ನೂ ಬಿಡಬೇಕು ಎಂದು ಪಟ್ಟು ಹಿಡಿದು ನಿಂತಿದ್ದ ಪೊನ್ ರಾಧಾಕೃಷ್ಣ ಅವರಿಗೆ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ ಐಪಿಎಸ್ ಅಧಿಕಾರಿ ಯತೀಶ್ ಚಂದ್ರ ಅವರ ಕ್ರಮಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಂದು ಕಾಲ ಕಾಲದಲ್ಲಿ ಆರೆಸ್ಸೆಸ್, ಮೋದಿ, ಬಿಜೆಪಿ ಭಕ್ತರು ಇದೇ ಯತೀಶ್ ಚಂದ್ರ ಅವರನ್ನು' ಹೀರೋ' ಎಂದು ಹಾಡಿ ಹೊಗಳಿದ್ದರು. ಈಗ ಯತೀಶ್ ವಿರುದ್ಧ ತಿರುಗಿಬಿದ್ದಿದ್ದಾರೆ.

ಟ್ರಾಫಿಕ್ ಜಾಮ್ ಆದರೆ ಏನ್ಮಾಡ್ತೀರಾ?
ಶಬರಿಮಲೆಗೆ ಹೋಗಲೆಂದು ಕೇಂದ್ರ ಸಚಿವ ಪೊನ್ ರಾಧಾಕೃಷ್ಣ ಅವರು ಬುಧವಾರದಂದು ಬೇಸ್ ಕ್ಯಾಂಪ್ ನೀಲಕ್ಕಲ್ಗೆ ಆಗಮಿಸಿದ್ದರು. ಅಲ್ಲಿಂದ 20 ಕಿ.ಮೀ ದೂರದ ಪಂಪಾಕ್ಕೆ ತಮ್ಮ ಖಾಸಗಿ ವಾಹನದಲ್ಲಿ ತೆರಳಿ, ನಂತರ ಅಯ್ಯಪ್ಪ ದೇಗುಲ ದರ್ಶನದ ಯೋಜನೆ ಹಾಕಿಕೊಂಡಿದ್ದರು. ಭದ್ರತೆ ಮತ್ತು ಪ್ರತಿಕೂಲ ಹವಾಮಾನದ ಕಾರಣ ನೀಲಕ್ಕಲ್ನಿಂದ ಪಂಪಾಕ್ಕೆ ಸರ್ಕಾರಿ ಬಸ್ಗಳನ್ನು ಮಾತ್ರವೇ ಬಿಡಲಾಗುತ್ತಿದೆ. ವಿಐಪಿ ಕೆಟಗರಿಯಲ್ಲಿ ನಿಮ್ಮ ವಾಹನ ಮಾತ್ರ ಕಳಿಸಬಲ್ಲೆ, ಬೆಂಬಲಿಗರು ಹೋಗುವಂತಿಲ್ಲ ಎಂದು ಯತೀಶ್ ವಾದಿಸಿದ್ದರು.

ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ?
ಆಗಸ್ಟ್ನಲ್ಲಿ ಬಂದಿದ್ದ ಪ್ರವಾಹದಿಂದಾಗಿ ಪಂಪಾದಲ್ಲಿನ ವಾಹನ ನಿಲುಗಡೆ ನಿಲ್ದಾಣ ಕೊಚ್ಚಿ ಹೋಗಿದೆ. ಅಲ್ಲದೆ ನೀಲಕಲ್ ನಿಂದ ಪಂಪಾ ತನಕ ಕಿರಿದಾದ ಘಾಟ್ ರಸ್ತೆ ಇದ್ದು, ಹೆಚ್ಚು ವಾಹನಗಳು ಒಮ್ಮೆಗೆ ಓಡಾಡುವ ಪರಿಸ್ಥಿತಿ ಇಲ್ಲದ ಕಾರಣ ಖಾಸಗಿ ವಾಹನಗಳಿಗೆ ಅವಕಾಶ ನೀಡಲಾಗದು, ಟ್ರಾಫಿಕ್ ಜಾಮ್ ಆದರೆ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಎಲ್ಲಾ ಭಕ್ತರ ಹೊಣೆ ಯಾರು ಹೊರಲು ನೀವು ಸಿದ್ಧವೇ ಎಂದು ಯತೀಶ್ ಅವರು ಸಚಿವರಿಗೆ ಪ್ರಶ್ನಿಸಿದ್ದಾರೆ.
ಕೇಂದ್ರ ಸಚಿವರಿಗೆ ಖಡಕ್ ಉತ್ತರಗಳನ್ನು ನೀಡಿ ಕೊನೆಗೆ ಕೇಂದ್ರ ಸಚಿವರು ರಾಜ್ಯ ರಸ್ತೆ ಸಾರಿಗೆ ಬಸ್ನಲ್ಲಿ ಪಂಪಾಕ್ಕೆ ತೆರಳುವಂತೆ ಮಾಡಿದ್ದಾರೆ.

ಯತೀಶ್ ಹೊಗಳಿದ್ದ ಆರೆಸ್ಸೆಸ್, ಬಿಜೆಪಿ ಭಕ್ತರು
2015ರಲ್ಲಿ ಪ್ರಧಾನಿ ಮೋದಿ ಅವರು ಕೇರಳಕ್ಕೆ ಭೇಟಿ ನೀಡುವಾಗ ಎಡ ಪಂಥೀಯರ ವಿರೋಧ, ಪ್ರತಿಭಟನೆಗಳನ್ನು ಹತ್ತಿಕ್ಕಿ, ಪ್ರಧಾನಿಯವರ ಪ್ರವಾಸ ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡಿದ್ದರು. ಇದರಿಂದ ಎಲ್ ಡಿಎಫ್ ರಾಜಕಾರಣಿಗಳ ವಿರೋಧ ಕಟ್ಟಿಕೊಳ್ಳಬೇಕಾಯಿತು. ಆದರೆ, ಸಾಮಾಜಿಕ ಜಾಲ ತಾಣಗಳಲ್ಲಿ ಯತೀಶ್ ಚಂದ್ರ ಪರ ಅಭಿಯಾನ ನಡೆಯಿತು. ಇಂದು ಕೇರಳದ ಯುವ ಪೀಳಿಗೆಗೆ ಮಾದರಿ ಅಧಿಕಾರಿ ಎನಿಸಿಕೊಂಡಿದ್ದಾರೆ.
|
ಟೆಕ್ಕಿಯಾಗಿದ್ದ ಯತೀಶ್ ಇಂದು ಖಡಕ್ ಅಧಿಕಾರಿ
ಟೆಕ್ಕಿಯಾಗಿ ಲಕ್ಷಾಂತರ ಸಂಪಾದಿಸುವ ಉದ್ಯೋಗ ತೊರೆದು, ಜನಸೇವೆ ಮಾಡಲು ಸಿವಿಎಲ್ ಸರ್ವೀಸ್ ಸೇರಿ, ಈಗ ಕೇರಳದಲ್ಲಿ ಸಮರ್ಥ ಐಪಿಎಸ್ ಅಧಿಕಾರಿ ಎನಿಸಿಕೊಂಡಿದ್ದಾರೆ. ಕೇರಳದ ಪ್ರವಾಹ ಪರಿಸ್ಥಿತಿಯಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ ರೀತಿಗೆ ಶ್ಲಾಘನೆ ವ್ಯಕ್ತವಾಗಿದೆ.
ಇತ್ತೀಚೆಗೆ ಜನಪ್ರಿಯಗೊಂಡಿದ್ದ ಫಿಟ್ನೆಸ್ ಚಾಲೆಂಜ್ ನಲ್ಲಿ ಪ್ರಧಾನಿ ಮೋದಿ ಅವರಿಂದ ಸವಾಲು ಸ್ವೀಕರಿಸಿ, ವರ್ಕೌಟ್ ಮಾಡುವ ವಿಡಿಯೋ ಹಾಕಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ಜನಪ್ರಿಯಗೊಂಡಿತ್ತು.
|
ಅಧಿಕಾರಿಯದ್ದು ಏನು ತಪ್ಪಿಲ್ಲ ಎಂದ ಜನತೆ
ಐಪಿಎಸ್ ಯತೀಶ್ ಚಂದ್ರ ಅವರು ಶಬರಿಮಲೆಯ ಪರಿಸ್ಥಿತಿಗೆ ಅನುಗುಣವಾಗಿ ವರ್ತಿಸಿದ್ದಾರೆ. ಅವರು ಸಾರ್ವಜನಿಕರು, ಭಕ್ತರ ಹಿತ ಕಾಯ್ದಿದ್ದಾರೆ. ಸಚಿವರಿಗೆ ತಲೆ ಬಾಗಬೇಕಾಗಿಲ್ಲ, ಸಂಘ ಪರಿವಾರದವರು ಸುಮ್ಮನೆ ಅಧಿಕಾರಿ ವಿರುದ್ಧ ಕಿಡಿಕಾರುವುದನ್ನು ಬಿಡಲಿ
|
ಯತೀಶ್ ವಿರುದ್ಧ ಕಿಡಿಕಾರಿದ ಕೇರಳ ಬಿಜೆಪಿ
ಎಸ್ ಪಿ ಯತೀಶ್ ವಿರುದ್ಧ ಕಿಡಿಕಾರಿದ ಕೇರಳ ಬಿಜೆಪಿ, ಇದೊಂದು ಆಘಾತಕಾರಿ ಘಟನೆ, ಕೇರಳ ಪೊಲೀಸರ ದ್ವಂದ್ವ ನೀತಿ, ನಡೆ ಬಹಿರಂಗವಾಗಿದೆ. ಕೇಂದ್ರ ಸಚಿವರಿಗೆ ಅಗೌರವ ನೀಡಲಾಗಿದೆ ಎಂದು ಟ್ವೀಟ್ ಮಾಡಿದೆ












Click it and Unblock the Notifications