ನ.6ಕ್ಕೆ ಶಬರಿಮಲೆಯಲ್ಲಿ ವಿಶೇಷ ಪೂಜೆ, 1200 ಪೊಲೀಸರ ನಿಯೋಜನೆ
ತಿರುವನಂತಪುರಂ, ನವೆಂಬರ್ 2: ಇದೇ ತಿಂಗಳ 6ನೇ ತಾರೀಕು ಚಿತ್ತಿರ ಆಟ್ಟ ವಿಶೇಷದ ಅಂಗವಾಗಿ ಅಯ್ಯಪ್ಪನ ಧರ್ಮಶಾಸ್ತ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ. ಆದ್ದರಿಂದ ಕೇರಳದ ಶಬರಿಮಲೆ ಬೆಟ್ಟದಲ್ಲಿ ಹಾಗೂ ಅಲ್ಲಿಗೆ ತೆರಳುವ ಮಾರ್ಗದಲ್ಲಿ ವಿಶೇಷ ಪೊಲೀಸ್ ಭದ್ರತೆ ಮಾಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ನಾರಾಯಣನ್ ಮಾತನಾಡಿ, ವಾರ್ಷಿಕ ಮಹೋತ್ಸವ ನಡೆಯುವ ನವೆಂಬರ್ 3 ಹಾಗೂ 6ನೇ ತಾರೀಕಿನ ಮಧ್ಯೆ ಶಬರಿಮಲೆ, ಪಂಪಾ, ನಿಲಕ್ಕಲ್ ಹಾಗೂ ವಡಸ್ಸೆರಿಕ್ಕರದಲ್ಲಿ 1200 ಪೊಲೀಸರನ್ನು ನಿಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.
ಚಿತ್ತಿರ ಆಟ್ಟ ವಿಶೇಷದ ಅಂಗವಾಗಿ ನವೆಂಬರ್ 5ನೇ ತಾರೀಕಿನ ಮಧ್ಯಾಹ್ನ ಅಯ್ಯಪ್ಪನ ದೇಗುಲ ತೆರೆಯಲಾಗುತ್ತದೆ. ಮರುದಿನ ವಿಶೇಷ ಕಾರ್ಯಕ್ರಮ ನಡೆಯಲಿದೆ. ಎಲ್ಲ ವಯಸ್ಸಿನ ಮಹಿಳೆಯರು ಸಹ ಶಬರಿಮಲೆ ದೇಗುಲ ಪ್ರವೇಶಿಸಬಹುದು ಎಂಬ ತೀರ್ಪು ಸುಪ್ರೀಂ ಕೋರ್ಟ್ ನಿಂದ ಬಂದ ನಂತರ ಹಿಂದೂಪರ ಸಂಘಟನೆಗಳಿಂದ ಭಾರಿ ಪ್ರತಿಭಟನೆ ನಡೆಯುತ್ತಿದೆ. ಆ ಹಿನ್ನೆಲೆಯಲ್ಲಿ ಡಿಜಿಪಿ ಸೂಚನೆ ಮೇರೆಗೆ ಭಾರೀ ಭದ್ರತೆ ಒದಗಿಸಲಾಗಿದೆ.

ಎಡಿಜಿಪಿ ಅನಿಲ್ ಕಾಂತ್ ಪೊಲೀಸ್ ಪಡೆಯ ನೇತೃತ್ವ ವಹಿಸಲಿದ್ದಾರೆ. ಇಬ್ಬರು ಐಜಿ, ಐವರು ಎಸ್ ಪಿ ಹಾಗೂ ಹತ್ತು ಡಿವೈಎಸ್ ಪಿಗಳು ಭದ್ರತಾ ಜವಾಬ್ದಾರಿ ವಹಿಸುವ ತಂಡದಲ್ಲಿ ಇರುತ್ತಾರೆ. ಶಬರಿಮಲೆ ಹಾಗೂ ಸುತ್ತಮುತ್ತಲ ಪ್ರದೇಶವನ್ನು ವಿಶೇಷ ಭದ್ರತಾ ವಲಯ ಎಂದು ಘೋಷಿಸಲಾಗಿದೆ.
ನವೆಂಬರ್ 5ರಂದು ನಿಲಕ್ಕಲ್ ನಿಂದ ಪಂಪಾ ಹಾಗೂ ಅಯ್ಯಪ್ಪ ಸನ್ನಿಧಾನ ಪ್ರವೇಶಿಸುವವರನ್ನು ಸಂಪೂರ್ಣ ಪರಿಶೀಲಿಸಿದ ನಂತರವೇ ಬಿಡಲಾಗುತ್ತದೆ. ಪೊಲೀಸರು ಹಾಗೂ ಜಿಲ್ಲಾಡಳಿತದ ಸೂಚನೆ ಮೀರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ವಿಶೇಷ ಪೂಜೆ ಮುಗಿದ ನಂತರ ನವೆಂಬರ್ 6ನೇ ತಾರೀಕಿನ ಸಂಜೆ ದೇವಸ್ಥಾನದ ಬಾಗಿಲು ಹಾಕಲಾಗುತ್ತದೆ.












Click it and Unblock the Notifications