ಕೇರಳದಲ್ಲಿ ರೆಡ್ ಅಲರ್ಟ್; 5 ದಿನ ಭಾರೀ ಮಳೆ ನಿರೀಕ್ಷೆ
ಕೇರಳ ಜುಲೈ 08: ಕೇರಳ ರಾಜ್ಯದಲ್ಲಿ ಮುಂದಿನ ಐದು ದಿನಗಳ (ಜು.13ರವರೆಗೆ) ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದಾಗಿ ಕೇಳರದ ಮುಖ್ಯಮಂತ್ರಿ ಕಚೇರಿ ಮಾಹಿತಿ ನೀಡಿದೆ.
ಕೇರಳ ರಾಜ್ಯದ ಕೊಲ್ಲಂ ಹಾಗೂ ತಿರುವನಂತಪುರಂ ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲೂ ಗುಡುಗು ಸಹಿತ ಭಾರೀ ಮಳೆ ಅಬ್ಬರಿಸಲಿರುವ ಕಾರಣಕ್ಕೆ ಶುಕ್ರವಾರ ಹಾಗೂ ಶನಿವಾರ 'ಯೆಲ್ಲೋ ಅಲರ್ಟ್' ಎಚ್ಚರಿಕೆ ನೀಡಲಾಗಿದೆ.
ಈಗಾಗಲೇ ಕೆಲವು ದಿನಗಳಿಂದ ವಿವಿಧ ಪ್ರದೇಶಗಳಲ್ಲಿ ಮಳೆ ಮುಂದುವರಿದಿದೆ. ಅದಲ್ಲದೇ ಗುಡ್ಡಗಾಡು ಪ್ರದೇಶಗಳಲ್ಲಿ ಮಳೆ ಮುಂದುವರಿಯುವ ನಿರೀಕ್ಷೆ ಇದ್ದು, ಎಲ್ಲೆಡೆ ಎಚ್ಚರಿಕೆ ವಹಿಸುವುದು ಅಗತ್ಯವಿದೆ ಎಂದು ಸರ್ಕಾರ ತಿಳಿಸಿದೆ.
ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ; ನಿರಂತರ ಮಳೆಯಿಂದಾಗಿ ಕೇರಳದ ಉತ್ತರ ಭಾಗದ ಕಡಲುಂಡಿ (ಮಲಪುರಂ), ಭರತ ಪುಳ (ಪಾಲಕಾಡು), ಶಿರಿಯಾ (ಕಾಸರಗೋಡು), ಕರವನ್ನೂರ್ (ತ್ರಿಶೂರ್) ಹಾಗೂ ಗಾಯತ್ರಿ (ತ್ರಿಶೂರ್) ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಒಳಹರಿವು ತನ್ನ ವೇಗ ಹೆಚ್ಚಿಸಿಕೊಂಡಿದೆ ಇನ್ನು ಕೇರಳರ ದಕ್ಷಿಣ ಭಾಗದ ವಾಮನಪುರಂ (ತಿರುವನಂತಪುರಂ), ನೆಯ್ಯರ್ (ತಿರುವನಂತಪುರಂ), ಕರಮಾನ (ತಿರುವನಂತಪುರಂ), ಕಲ್ಲಡ (ಕೊಲ್ಲಂ), ಮಣಿಮಾಲಾ (ಇಡಕ್ಕಿ), ಮೀನಚಿಲ್ (ಕೋಟ್ಟಾಯಂ) ಮತ್ತು ಕೊತ್ತಮಂಗಲಂ (ಎರ್ನಾಕುಲಂ) ನದಿಗಳಲ್ಲಿ ಸಹ ನೀರಿನ ಪ್ರಮಾಣದಲ್ಲಿ ಏರಿಕೆ ಆಗಿದೆ.
20 ಸೆಂ. ಮೀ.ಗೂ ಹೆಚ್ಚು ಮಳೆ ನಿರೀಕ್ಷೆ; ಮಾಹಿತಿಯೊಂದರ ಪ್ರಕಾರ, ಕೇರಳ ರಾಜ್ಯದ ವಿದ್ಯುತ್ ಮಂಡಳಿಯ ಅಧೀನದಲ್ಲಿರುವ ಅಣೆಕಟ್ಟುಗಳಲ್ಲಿ ಇಡುಕ್ಕಿ ಜಿಲ್ಲೆಯ ಲೋವರ್ ಪೆರಿಯಾರ್ ಮತ್ತು ಕಲ್ಲರ್ ಕುಟ್ಟಿ ಅಣೆಕಟ್ಟುಗಳ ಭಾಗದಲ್ಲಿ ಅತ್ಯಧಿಕ ಮಳೆ ಆಗುವುದರಿಂದ ಇಲ್ಲಿ 'ರೆಡ್ ಅಲರ್ಟ್' ಘೋಷಿಸಲಾಗಿದೆ. ಅಂದರೆ ಇಲ್ಲಿ 20 ಸೆಂ. ಮೀ. ಗೂ ಹೆಚ್ಚು ಮಳೆ ನಿರೀಕ್ಷೆ ಇದೆ.
ಅಲ್ಲದೇ ತ್ರಿಶೂರ್ ಜಿಲ್ಲೆಯ ಪೆರಿಂಗಲ್ಕುತ್ ಅಣೆಕಟ್ಟಿನ ಸುತ್ತಮುತ್ತಲಿನ ಭಾಗದಲ್ಲಿ ಗುಡುಗು ಸಹಿತ ಭಾರೀ ಮಳೆ ಬೀಳಲಿರುವ ಸಂಬಂಧ ಇಲ್ಲಿಗೆ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ಕೋಯಿಕ್ಕೋಡ್ನ ಕುಟ್ಟಿಯಾಡಿ ಅಣೆಕಟ್ಟಿನಲ್ಲಿ ಅಷ್ಟಾಗಿ ಮಳೆ ಸುರಿಯದೇ ಸಾಮಾನ್ಯದಿಂದ ಹಗುರ ಮಳೆ ಬೀಳಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ಕೇರಳದ ನೀರಾವರಿ ಇಲಾಖೆ ವ್ಯಾಪ್ತಿಯ ಅಣೆಕಟ್ಟುಗಳಲ್ಲಿ ಯಾವುದೇ ಎಚ್ಚರಿಕೆ ನೀಡಿಲ್ಲ. ಆದರೂ ರಾಜ್ಯಕ್ಕೆ ಹವಾಮಾನ ಇಲಾಖೆ ನೀಡಿರುವ ಭಾರೀ ಮಳೆ ಮನ್ಸೂಚನೆ ಮತ್ತು ಎಚ್ಚರಿಕೆಗಳನ್ನು ಆಧರಿಸಿ ವಿವಿಧ ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಕೇರಳ ಸರ್ಕಾರ ಮಾಹಿತಿ ನೀಡಿದೆ.
ವಯನಾಡು, ಕೋಯಿಕ್ಕೋಡ್ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ವಿಪತ್ತು ನಿರ್ವಹಣಾ ತಂಡ, ಸಿವಿಲ್ ಡಿಫೆನ್ಸ್ ಅಕಾಡೆಮಿಯ ಎರಡೂ ತಂಡಗಳನ್ನು ಕಾರ್ಯಾಚರಣೆಗೆಂದು ನಿಯೋಜಿಸಲಾಗಿದೆ ಎಂದು ಕೇರಳ ಸರ್ಕಾರದ ಪ್ರಕಟಣೆ ತಿಳಿಸಿದೆ.
Recommended Video