ಸುಪ್ರಿಂ ತೀರ್ಪು ವಿವಾದ: ಶಬರಿಮಲೆ ಆದಾಯದಲ್ಲಿ ತೀವ್ರ ಕುಸಿತ
ಶಬರಿಮಲೆ, ನವೆಂಬರ್ 23: ಸುಪ್ರಿಂಕೋರ್ಟ್ ತೀರ್ಪಿನ ತರುವಾಯ ಶಬರಿಮಲೆ ರಣರಂಗವಾಗಿದೆ. ಭಕ್ತಾದಿಗಳಿಗಿಂತಲೂ ಪೊಲೀಸರೇ ದೇವಾಲಯದ ಆವರಣದಲ್ಲಿ ಹೆಚ್ಚು ಜನರಿದ್ದಾರೆ.
ಸುಪ್ರಿಂಕೋರ್ಟ್ ತೀರ್ಪು ಸಂಪ್ರದಾಯವಾದಿಗಳ ಕಣ್ಣು ಗೆಂಪಗೆ ಮಾಡುವ ಜೊತೆಗೆ ದೇವಸ್ಥಾನದ ಆದಾಯಕ್ಕೆ ಕಲ್ಲೇಟು ಎಸೆದಿದೆ. ಈ ಬಾರಿ ಶಬರಿಮಲೆ ಆದಾಯದಲ್ಲಿ ಭಾರಿ ಕುಸಿತ ಕಂಡುಬಂದಿದೆ ಎಂದು ದೇವಾಲಯದ ಆಡಳಿತ ಮಂಡಳಿ ಟಿಡಿಬಿ ಹೇಳಿದೆ.
ಕಳೆದ ವರ್ಷ ಇದೇ ಸಮಯಕ್ಕೆ ಬಂದಿದ್ದ ಆದಾಯಕ್ಕಿಂತಲೂ ಶೇ 33 ರಷ್ಟು ಕಡಿಮೆ ಆದಾಯ ಈ ವರ್ಷ ಬಂದಿದೆ ಎಂಬುದು ದೇವಾಲಯದ ಮಂಡಳಿಯ ಆಂಬೋಣ.
ಕಳೆದ ವರ್ಷ ಇದೇ ಮಂಡಲಂ ಪೂಜೆಗೆ ಪ್ರತಿ ದಿನ 80 ಸಾವಿರದಿಂದ 1 ಲಕ್ಷದವರೆಗೆ ಭಕ್ತಾದಿಗಳು ದರ್ಶನಕ್ಕೆ ಬರುತ್ತಿದ್ದರು. ಆದರೆ ಈ ವರ್ಷ ಸುಪ್ರಿಂತೀರ್ಪು ವಿವಾದ ಕಾರಣ ನವೆಂಬರ್ 16 ರಿಂದ ನವೆಂಬರ್ 22 ರವರೆಗೆ ಕೇವಲ 1.50 ಲಕ್ಷ ಜನ ಮಾತ್ರ ದೇವಾಲಯಕ್ಕೆ ಬಂದಿದ್ದಾರೆ ಎಂದು ಅವರು ಹೇಳಿದ್ದಾರೆ.

ಹುಂಡಿಗೆ ಸೇರುವ ಹಣದಲ್ಲಿ ಭಾರಿ ಕುಸಿತ
ಹುಂಡಿಗೆ ಸೇರುವ ಹಣದಲ್ಲಿ ಭಾರಿ ಕುಸಿತ ಉಂಟಾಗಿದೆ. ಜೊತೆಗೆ ಆದಾಯದಲ್ಲಿಯೂ ಈವರೆಗೆ ಶೇ 33 ಕುಸಿತವಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ. ಮುಂದಿನ ದಿನಗಳಲ್ಲಿಯೂ ಭಕ್ತಾದಿಗಳು ಆಗಮಿಸುವ ಸಾಧ್ಯತೆ ಬಹಳ ಕಡಿಮೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ 225 ಆದಾಯ
ಕಳೆದ ವರ್ಷ ಅಯ್ಯಪ್ಪ ದೇವಾಲಯಕ್ಕೆ ಸುಮಾರು 6 ಕೋಟಿ ಭಕ್ತರು ಆಗಮಿಸಿದ್ದರು ಇದರಿಂದ 225 ಕೋಟಿ ಆದಾಯ ಬಂದಿತ್ತು ಆದರೆ ಈ ಬಾರಿ ಅರ್ಧದಷ್ಟೂ ಆದಾಯ ಬರುವ ಸಾಧ್ಯತೆ ಇಲ್ಲ ಎಂದು ಅವರು ಹೇಳಿದರು.

ಇರುಮುಡಿ ಅಕ್ಕಿಯ ಸಂಗ್ರಹವೂ ಇಲ್ಲ
ಇರುಮುಡಿ ಅಕ್ಕಿಯ ಸಂಗ್ರಹದಲ್ಲಿ ಭಾರಿ ಇಳಿಮುಖವಾಗಿದೆ. ಪ್ರತಿಬಾರಿ ಇರುಮುಡಿ ಅಕ್ಕಿಯನ್ನು ಹರಾಜು ಮಾಡಲಾಗುತ್ತಿತ್ತು. ಆದರೆ ಈ ಬಾರಿ ಬಹಳ ಕಡಿಮೆ ಅಕ್ಕಿ ಸಂಗ್ರಹವಾಗಿದೆ. ಮಂಡಲ ಪೂಜೆ ಸಮಯದಲ್ಲಿ ವ್ಯಾಪಾರಿಗಳಿಗೆ ಸ್ಥಳ ನೀಡುವುದು ಸಹ ಆಡಳಿತ ಮಂಡಳಿಗೆ ಉತ್ತಮ ಲಾಭ ತರುತ್ತಿತ್ತು. ಆದರೆ ಈ ಬಾರಿ 50% ಅಂಗಡಿ ಮಳಿಗೆಗಳು ಖಾಲಿಯೇ ಉಳಿದಿವೆ.

ಮಾಲಧಾರಿಗಳ ಸಂಖ್ಯೆ ಕಡಿಮೆ
ಮಾಲಧಾರಿಗಳ ಸಂಖ್ಯೆ ಕಡಿಮೆ ಆಗಿರುವ ಕಾರಣ ಪ್ರಸಾದ ಮಾರಾಟವೂ ಭಾರಿ ಪ್ರಮಾಣದಲ್ಲಿ ಕುಸಿದೆ. ಕಳೆದ ವರ್ಷಕ್ಕಿಂತಲೂ ಅರ್ಧದಷ್ಟು ಸಹ ಈ ಬಾರಿ ಮಾರಾಟ ಆಗಿಲ್ಲವಂತೆ. ಹಾಗಾಗಿ ಪ್ರಸಾದ ತಯಾರಿಕೆಯನ್ನೇ ಕಡಿಮೆಗೊಳಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ.











Click it and Unblock the Notifications