ಸ್ಮಗಲಿಂಗ್ ಕೇಸ್: ಎಫ್ಐಆರ್ ರದ್ದುಕೋರಿದ್ದ ಸ್ವಪ್ನಗೆ ಹಿನ್ನಡೆ
ಕೊಚ್ಚಿ, ಆಗಸ್ಟ್ 19: ಕೇರಳ ಸರ್ಕಾರವನ್ನು ಅಲುಗಾಡಿಸಿರುವ ಚಿನ್ನದ ಸ್ಮಗಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಸ್ವಪ್ನ ಸುರೇಶ್ ಗೆ ಹಿನ್ನಡೆಯುಂಟಾಗಿದೆ. ತಮ್ಮ ವಿರುದ್ಧ ಕೇರಳ ರಾಜ್ಯ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣ ಹಾಗೂ ಎಫ್ಐಆರ್ ರದ್ದುಕೋರಿ ಸ್ವಪ್ನ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ತಿರುವನಂತಪುರಂ ಹಾಗೂ ಪಾಲಕ್ಕಾಡ್ ಪೊಲೀಸರು ಹಾಕಿರುವ ಎಫ್ಐಆರ್ ರದ್ದುಗೊಳಿಸಲು ಸ್ವಪ್ನ ಕೋರಿದ್ದರು.
ಈ ಪ್ರಕರಣದ ತನಿಖೆಯನ್ನು ಸಿಬಿಐವಹಿಸುವಂತೆ ಕೋರಿ ಪ್ರಧಾನಿ ಮೋದಿಗೆ ಸ್ವಪ್ನ ಸುರೇಶ್ ಪತ್ರ ಬರೆದಿರುವುದು ಈಗ ವೈರಲ್ ಆಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್ ಪಿಸಿ ಸೆಕ್ಷನ್ 164ರಂತೆ ತಾವು ನೀಡಿರುವ ಹೇಳಿಕೆಯನ್ನು ಬದಲಾಯಿಸುವಂತೆ ಒತ್ತಡ ಹೇರಲಾಗುತ್ತಿದೆ. ಸಿಎಂ ವಿಜಯನ್ ಈ ಪ್ರಕರಣದಲ್ಲಿ ತಮ್ಮ ಪಾಲುದಾರಿಕೆ ಬಗ್ಗೆ ಏಕೆ ಬಹಿರಂಗಪಡಿಸುತ್ತಿಲ್ಲ, ನಮ್ಮನ್ನು ಏಕೆ ಸಿಲುಕಿಸುತ್ತಿದ್ದಾರೆ ಎಂದು ಸ್ವಪ್ನ ಪ್ರಶ್ನಿಸಿದ್ದರು. ಈ ನಡುವೆ ಸ್ವಪ್ನ, ಸರಿತ್ ವಿರುದ್ಧ ಮಾಜಿ ಸಚಿವ ಕೆಟಿ ಜಲೀಲ್ ದೂರು ನೀಡಿದ್ದು, ಪ್ರಕರಣ ಮತ್ತೊಂದು ಮಗ್ಗಲಿಗೆ ತಿರುಗಿದೆ. ಸಿಎಂ ವಿಜಯನ್ ಆಪ್ತ ಶಾಜಿ ಕಿರಣ್ ಎಂಬಾತ ನನ್ನ ಕಚೇರಿಗೆ ಬಂದು ಬೆದರಿಕೆ ಹಾಕಿದ್ದರಿಂದ ನಾನು ಹೇಳಿಕೆ ನೀಡಬೇಕಾಯಿತು. ನನ್ನ ಕುಟುಂಬದ ರಕ್ಷಣೆ ನನಗೆ ಮುಖ್ಯವಾಗಿತ್ತು ಎಂದು ಸ್ವಪ್ನ ಮಾಧ್ಯಮಗಳ ಮುಂದೆ ಹೇಳಿದ್ದರು.
ರಾಜ್ಯದಲ್ಲಿ ಗಲಭೆಗೆ ಸಂಚು?
ತನ್ನ ಇತ್ತೀಚಿನ ಹೇಳಿಕೆ ಮೂಲಕ ರಾಜ್ಯದಲ್ಲಿ ಗಲಭೆಗೆ ಸಂಚು ರೂಪಿಸಿದ ಆರೋಪದ ಹೊರೆಸಲಾಗಿದ್ದು,ಎಫ್ಐಆರ್ಗಳನ್ನು ಹಾಕಲಾಗಿದೆ. ಇದೆಲ್ಲವೂ ಸತ್ಯಕ್ಕೆ ದೂರಾಗಿದ್ದು, ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಸುರೇಶ್ ಎರಡು ತಿಂಗಳ ಹಿಂದೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್, ಪ್ರಕರಣಗಳ ತನಿಖೆ ಪ್ರಾಥಮಿಕ ಹಂತದಲ್ಲಿದೆ ಆದರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಪಟ್ಟಿ ಸಲ್ಲಿಸಿದ ನಂತರ ದೂರುದಾರರು ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಹೇಳಿದೆ.
ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು
ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ವಿಶೇಷ ನ್ಯಾಯಾಲಯವು ತನ್ನನ್ನು ಸೇರಿದಂತೆ ಪ್ರಕರಣದ ಇತರ ಏಳು ಆರೋಪಿಗಳಿಗೆ ಜಾಮೀನು ನಿರಾಕರಿಸಿದ್ದ ಆದೇಶವನ್ನು ಪ್ರಶ್ನಿಸಿ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಕೇರಳ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಕ್ರಮ ಹಣವರ್ಗಾವಣೆ, ರಾಜತಾಂತ್ರಿಕ ಮಾರ್ಗದ ಮೂಲಕ ಚಿನ್ನ ಕಳ್ಳಸಾಗಣೆ, ಕಾನೂನು ಬಾಹಿರ ಆರ್ಥಿಕ ವ್ಯವಹಾರ ಮುಂತಾದ ಆರೋಪಗಳನ್ನು ಹೊತ್ತುಕೊಂಡಿರುವ ಸ್ವಪ್ನ ಸುರೇಶ್ ಹಾಗೂ ಇತರೆ ಆರೋಪಿಗಳನ್ನು ಜಾರಿ ನಿರ್ದೇಶನಾಲಯವು ಕಳೆದ ವರ್ಷ ಜುಲೈನಲ್ಲಿ ಬಂಧಿಸಿತ್ತು. ಕಾನೂನು ಬಾಹಿರ ಆರ್ಥಿಕ ವ್ಯವಹಾರ UAPA ಕಾಯ್ದೆ ಉಲ್ಲಂಘನೆ ಮಾಡಿದ್ದ ಆರೋಪದ ಮೇಲೆ ಸೆಕ್ಷನ್ 16, 17, 18 ಹಾಗೂ 20ರ ಅಡಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ
ಈ ಪ್ರಕರಣದಲ್ಲಿ ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ಸುರೇಶ್ ತನ್ನ ಅರ್ಜಿಯಲ್ಲಿ ಆರೋಪಿಸಿದ್ದು, ಮಾಜಿ ಸಚಿವ ಕೆ ಟಿ ಜಲೀಲ್ ಅವರ "ಕಾನೂನುಬಾಹಿರ ಚಟುವಟಿಕೆಗಳ" ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಬಳಿಕ ಅವರು ನನ್ನ ವಿರುದ್ಧದೂರು ದಾಖಲಿಸಿದ್ದಾರೆ ಎಂದು ಸ್ವಪ್ನ ಹೇಳಿದರು.
ಸಿಎಂ ಪಿಣರಾಯಿ ವಿಜಯನ್, ಮಾಜಿ ಸ್ಪೀಕರ್ ಪಿ ಶ್ರೀರಾಮಕೃಷ್ಣನ್, ಮಾಜಿ ಪ್ರಧಾನ ಕಾರ್ಯದರ್ಶಿ ಎಂ ಶಿವಶಂಕರ್,ಯುಎಇ ಕಾನ್ಸುಲೇಟ್ ಕಚೇರಿಯ ಕೆಲವು ಹಿರಿಯ ಅಧಿಕಾರಿಗಳು ಈ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸ್ವಪ್ನ ಆರೋಪಿಸಿದ್ದಾರೆ.
ಏನಿದು ಪ್ರಕರಣ?
ರಾಜತಾಂತ್ರಿಕ ರಕ್ಷಣೆ ಹೊಂದಿರುವ ''ಡಿಪ್ಲೊಮ್ಯಾಟಿಕ್ ಬ್ಯಾಗೇಜ್'' ನಲ್ಲಿದ್ದ 30 ಕೆಜಿ ಚಿನ್ನವನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶ ಪಡಿಸಿಕೊಂಡಿದ್ದರು. ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಈ ಚಿನ್ನ ಅಕ್ರಮ ಸಾಗಣೆಯ ಆರೋಪಿ ರಾಜತಾಂತ್ರಿಕ ಕಚೇರಿಯ ಮಾಜಿ ಸಿಬ್ಬಂದಿ ಸ್ವಪ್ನ ಸುರೇಶ್ ಎಂದು ಆರೋಪಿಸಲಾಗಿದೆ. ಯುಎಇ ಕಾನ್ಸುಲೇಟ್ ಅಧಿಕಾರಿಯಾಗಿದ್ದ ಪಿಎಸ್ ಸರೀತ್, ಮಾಜಿ ಉದ್ಯೋಗಿ ಸ್ವಪ್ನ ಸುರೇಶ್, ಸಂದೀಪ್ ನಾಯರ್, ಫೈಜಲ್ ಫರೀದ್ ಅವರ ವಿರುದ್ಧ Unlawful Activities (Prevention) Act ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಎನ್ಐಎ ತನಿಖೆ ಮುಂದುವರೆಸಿದೆ. ಆದರೆ, ಚಿನ್ನದ ಸ್ಮಗಲಿಂಗ್ ಮೇಲಿನ ದೋಷಾರೋಪಣ ಪಟ್ಟಿಯು ಕಸ್ಟಮ್ಸ್ ಕಾಯ್ದೆಯಡಿ ಬರುವುದರಿಂದ UAPA ಕಾಯ್ದೆ ಉಲ್ಲಂಘನೆ ಎಂದು ಸುಳ್ಳು ಆರೋಪ ಮಾಡಲಾಗಿದೆ ಎಂದು ಸ್ವಪ್ನ ಪರ ವಕೀಲರು ವಾದಿಸಿದ್ದಾರೆ.