ಭಾರಿ ಮಳೆ ಸಂದರ್ಭದಲ್ಲಿ ಭಕ್ತರಿಗೆ ಪಂಪಾದಿಂದ ತೆರಳಲು ಅವಕಾಶ: ಎಡಿಎಂ
ಪತ್ತನಂತಿಟ್ಟ, ಡಿಸೆಂಬರ್ 10: ವಿಶ್ವವಿಖ್ಯಾತ ಶಬರಿಮಲೆಯ ಅಯ್ಯಪ್ಪ ದೇವಾಲಯದಲ್ಲಿ ಈಗಾಗಲೇ ವಾರ್ಷಿಕ ತೀರ್ಥಯಾತ್ರೆ ಆರಂಭವಾಗಿದೆ. ಎರಡು ತಿಂಗಳ ಕಾಲ ನಡೆಯುವ ಮಂಡಲ- ಮಕರವಿಳಕ್ಕು (ಮಕರ ಸಂಕ್ರಾಂತಿ) ಉತ್ಸವಕ್ಕಾಗಿ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆ ದೇವಸ್ಥಾನಕ್ಕೆ ಜನ ಸಾಗರವೇ ಹರಿದು ಬರುತ್ತದೆ. ಆದರೆ ಹವಮಾನ ಬದಲಾವಣೆಯಿಂದಾಗಿ ಹಲವೆಡೆ ಭಾರೀ ಮಳೆಯಾಗುತ್ತಿದ್ದು ಶಬರಿಮಲೆ ತೀರ್ಥಯಾತ್ರೆಗೆ ಬರುವ ಭಕ್ತರಿಗೆ ತೊಂದರೆಯಾಗದೇ ಇರಲು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರೀ ಮಳೆಯ ಸಂದರ್ಭದಲ್ಲಿ ಪಂಪಾದಿಂದ ಭಕ್ತರು ಸಾಗಬೇಕು ಎಂದು ಉನ್ನತ ಮಟ್ಟದ ಸಭೆ ನಿರ್ಧರಿಸಿದೆ. ಶಬರಿಮಲೆ ಸನ್ನಿಧಾನದಲ್ಲಿ ಎಡಿಎಂ ಅರ್ಜುನ್ ಪಾಂಡ್ಯನ್ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ಶಬರಿಮಲೆಯಲ್ಲಿ ಪ್ರಸ್ತುತ ಎರಡು ಆಂಬ್ಯುಲೆನ್ಸ್ಗಳು ಮಾತ್ರ ಸೇವೆಯಲ್ಲಿವೆ. ಪಂಪಾದಲ್ಲಿರುವ ಅಯ್ಯಪ್ಪ ಸೇವಾ ತಂಡದ ಆಂಬ್ಯುಲೆನ್ಸ್ ಕೂಡ ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಬಹುದಾಗಿದೆ ಎಂದು ಎಡಿಎಂ ತಿಳಿಸಿದ್ದಾರೆ. ದರ್ಶನದ ನಂತರ ಭಕ್ತರು ತಂಡೋಪತಂಡವಾಗಿ ಹಿಂದಿರುಗಿದಾಗ ದಟ್ಟಣೆಯನ್ನು ಕಡಿಮೆ ಮಾಡಲು ಕೆಎಸ್ಆರ್ಟಿಸಿ ಪಂಪಾದಿಂದ ಬಸ್ ವೇಳಾಪಟ್ಟಿಯನ್ನು ವಿಸ್ತರಿಸುತ್ತದೆ. ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡುವಂತೆ ಎಡಿಎಂ ಸೂಚಿಸಿದರು. ಜೊತೆಗೆ ಸನ್ನಿಧಾನದಲ್ಲಿ ಖಾಯಂ ಆಗಿ ಕೆಲಸ ಮಾಡುವವರ ಆರೋಗ್ಯದ ಬಗ್ಗೆ ಎಲ್ಲ ಇಲಾಖೆಗಳು ವಿಶೇಷ ಗಮನ ಹರಿಸಬೇಕು ಎಂದು ಸಭೆ ಸೂಚಿಸಿದೆ. ಮಳೆ ಸಂದರ್ಭದಲ್ಲಿ ಭಕ್ತರು ಮೇಲೆ ನಿಗಾ ವಹಿಸಲು ಈ ಮಾರ್ಗ ಸುಲಭವಾಗಿದೆ ಸಭೆ ತೀರ್ಮಾನಿಸಿದೆ.
ಈಗಿರುವ ಎಲ್ಲಾ ಸಿಸಿಟಿವಿಗಳು ಭಕ್ತರ ಸುರಕ್ಷತೆಗಾಗಿ ಕಾರ್ಯನಿರ್ವಹಿಸುತ್ತಿವೆ. ಸ್ವಚ್ಛತಾ ಕಾರ್ಯಗಳು ಹಾಗೂ ಕ್ಲೋರಿನೇಷನ್ ಕಾರ್ಯಗಳು ಅತ್ಯುತ್ತಮವಾಗಿ ನಡೆಯುತ್ತಿವೆ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಆನಂದ್, ದೇವಸ್ವಂ ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿ ವಿ. ಕೃಷ್ಣಕುಮಾರ ವಾರಿಯರ್, ಆರ್ ಎಎಫ್ ಉಪ ಕಮಾಂಡೆಂಟ್ ಜಿ. ವಿಜಯನ್, ದೇವಸ್ವಂ ಬೋರ್ಡ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಸಂಗೀತ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಅಯ್ಯಪ್ಪ ಭಕ್ತರಿಗೆ ಪಂಪಾದಲ್ಲಿ ಸ್ನಾನ ಮಾಡಲು ಅನುಮತಿ ನೀಡುವ ಸಂಬಂಧ ಎಡಿಎಂ ಅರ್ಜುನ್ ಪಾಂಡ್ಯನ್ ಅವರು ಪಂಪಾ ತ್ರಿವೇಣಿ ನದಿ ತೀರವನ್ನು ಪರಿಶೀಲಿಸಿದರು. ಸ್ನಾನಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿ ನೀರಿನ ಹರಿವು ಮತ್ತು ನದಿಯ ಆಳವನ್ನು ಗುರುತಿಸಿ ಯಾವುದೇ ಭಾಗಕ್ಕೆ ಅಪಾಯವಿಲ್ಲದೆ ಅನುಮತಿ ನೀಡುವ ಸಾಧ್ಯತೆಯನ್ನು ಪರಿಶೀಲಿಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಹಗ್ಗ ಕಟ್ಟುವುದು ಮತ್ತಿತರ ಸೌಲಭ್ಯಗಳನ್ನು ಪರಿಶೀಲಿಸುವಂತೆ ಸೂಚಿಸಲಾಯಿತು.
ಸಾಧ್ಯತೆಗಳನ್ನು ಪರಿಶೀಲಿಸಿದ ನಂತರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗುವುದು ಮತ್ತು ಪ್ರಾಥಮಿಕ ಭದ್ರತಾ ವ್ಯವಸ್ಥೆಗಳನ್ನು ಸ್ಥಾಪಿಸುವ ಕೆಲಸ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಎಡಿಎಂ ಅರ್ಜುನ್ ಪಾಂಡ್ಯನ್ ಹೇಳಿದರು. ಬುಧವಾರ ಸಂಜೆ ಅರಟ್ಕಡವು ವಿಸಿಬಿಯಿಂದ ತ್ರಿವೇಣಿ ಸೇತುವೆವರೆಗೆ ತಪಾಸಣೆ ನಡೆಸಲಾಗಿದೆ. ನದಿಯ ಹರಿವು ಮತ್ತು ಆಳವನ್ನು ತಿಳಿಯಲು ಮಾನವ ಸಹಿತ ತಪಾಸಣೆಯನ್ನೂ ನಡೆಸಲಾಯಿತು. ಪಂಪಾ ಪೊಲೀಸ್ ವಿಶೇಷ ಅಧಿಕಾರಿ ಅಮೋಸ್ ಮಾಮನ್, ವಿಶೇಷ ಅಧಿಕಾರಿ ಕೆ.ಕೆ.ಸಜೀವ್, ಕರ್ತವ್ಯಾಧಿಕಾರಿ ರಾಜೇಂದ್ರನ್, ಆಡಳಿತಾಧಿಕಾರಿ ಗೋಪಕುಮಾರ್, ಅಗ್ನಿಶಾಮಕ ದಳ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಎಡಿಎಂ ಜತೆ ಹಾಜರಿದ್ದರು.
ಈ ತೀರ್ಥಯಾತ್ರೆಗೆ ಹೋಗುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ಹಾಗೂ ಆರ್ಟಿ-ಪಿಸಿಆರ್ ನೆಗೆಟಿವ್ ವರದಿಯನ್ನು ಹೊಂದಿರಬೇಕು. 72 ಗಂಟೆಗಳ ಒಳಗೆ ನೀವು ಕೋವಿಡ್ ಪರೀಕ್ಷೆಗೆ ಒಳಗಾಗಿ ಆರ್ಟಿ-ಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು. ಎರಡೂ ಡೋಸ್ ಕೋವಿಡ್ ಲಸಿಕೆಯನ್ನು ಪಡೆದುಕೊಂಡವರು, ಲಸಿಕೆ ಪ್ರಮಾಣ ಪತ್ರವನ್ನು ಹೊಂದಿರಬೇಕು. ಯಾರಲ್ಲಿ ಲಸಿಕೆ ಪಡೆದ ಪ್ರಮಾಣ ಪತ್ರ ಇರುವುದಿಲ್ಲವೋ ಅಥವಾ ಕೋವಿಡ್ ಪರೀಕ್ಷೆ ಮಾಡಿಸಿಕೊಂಡ ಪ್ರಮಾಣ ಪತ್ರ ಇರುವುದಿಲ್ಲವೋ ಅವರು ಇಲ್ಲಿಯೇ ಕೋವಿಡ್ ಪರೀಕ್ಷೆಗೆ ಒಳಗಾಗಬಹುದು. ಇನ್ನು ಆರೋಗ್ಯ ಇಲಾಖೆಯು ಅದಕ್ಕಾಗಿ ಕೇಂದ್ರವನ್ನು ಸ್ಥಾಪನೆ ಮಾಡಿದೆ. ಚೆನ್ನಗುನ್ನೂರು, ತಿರುವಳ್ಳಿ ಹಾಗೂ ಕೊಟ್ಟಯಂ ರೈಲ್ವೇ ನಿಲ್ದಾಣದಲ್ಲಿ ಹಾಗೂ ತೀರ್ಥಯಾತ್ರೆಯ ಕೇಂದ್ರಗಳಲ್ಲಿ ಈ ವ್ಯವಸ್ಥೆ ಇರುತ್ತದೆ.