Breaking: ಕೇರಳದ ಪಯ್ಯನ್ನೂರಿನ ಆರ್ಎಸ್ಎಸ್ ಕಚೇರಿ ಮೇಲೆ ಬಾಂಬ್ ದಾಳಿ
ತಿರುವನಂತಪುರ, ಜುಲೈ 12: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಮಂಗಳವಾರ ಮುಂಜಾನೆ ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಕಚೇರಿ ಮೇಲೆ ಬಾಂಬ್ ದಾಳಿ ನಡೆದಿದೆ.
ಘಟನೆಯಲ್ಲಿ ಕಟ್ಟಡದ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆ ಸಮೀಪದಲ್ಲಿಯೇ ಈ ದಾಳಿ ನಡೆದಿದೆ. ಬಾಂಬ್ ದಾಳಿಯ ಪರಿಣಾಮವಾಗಿ ಯಾವುದೇ ವ್ಯಕ್ತಿಗಳು ಗಾಯಗೊಂಡ ಬಗ್ಗೆ ವರದಿಯಾಗಿಲ್ಲ.
ಕೇರಳ ಬಿಜೆಪಿ ನಾಯಕ ಟಾಮ್ ವಡಕ್ಕನ್ ಬಾಂಬ್ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ರಾಜ್ಯ ಸರ್ಕಾರದ ಆಡಳಿತದ ವೈಫಲ್ಯದ ಬಗ್ಗೆ ಕಿಡಿಕಾರಿದ್ದಾರೆ. ಇಂತಹ ದಾಳಿಗಳನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹೇಳಿದ್ದಾರೆ.
ಈ ಘಟನೆಗೆ ಪೊಲೀಸರು ಸಹಕರಿಸಿದ್ದಾರೆ ಎಂದು ಆರೋಪಿಸಿರುವ ವಡಕ್ಕನ್, ಪೊಲೀಸ್ 100 ಮೀಟರ್ ದೂರದಲ್ಲಿದ್ದರೂ ಈ ರೀತಿಯ ಘಟನೆ ನಡೆದಿದೆ. ಕಣ್ಣೂರಿನಂತಹ ಸೂಕ್ಷ್ಮ ಜಿಲ್ಲೆಯಲ್ಲಿ ಕಚೇರಿಗಳಿಗೆ ವಿಶೇಷವಾಗಿ ರಕ್ಷಣೆ ನೀಡಬೇಕು. ಆದರೆ ರಾಜ್ಯ ಸರ್ಕಾರ ಅದರ ಬಗ್ಗೆ ಯೋಚನೆ ಮಾಡಲ್ಲ, ಅವರ ನಿರ್ಲಕ್ಷ್ಯ ದಾಳಿಕೋರರಿಗೆ ಸಹಕಾರಿಯಾಗಿದೆ ಎಂದರು. ರಾಜ್ಯದಲ್ಲಿ ಯಾವುದೇ ರಾಜಕೀಯ ಕಚೇರಿಗೆ ಹಾನಿಯಾದರೆ ರಾಜ್ಯ ಸರ್ಕಾರವೇ ಹೊಣೆಯಾಗಲಿದೆ ಎಂದು ಹೇಳಿದರು.
Recommended Video
"ಸಾಮಾಜಿಕ ಸಂಘಟನೆಗಳ ಮೇಲೆ ಬಾಂಬ್ ಎಸೆಯುವ ಮಟ್ಟಕ್ಕೆ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಆಘಾತಕಾರಿ ಮತ್ತು ದುರದೃಷ್ಟಕರವಾಗಿದೆ ಮತ್ತು ನಾಗರಿಕ ಸಮಾಜದಲ್ಲಿ ಅದು ಇಂತಹ ಘಟನೆ ನಡೆಯಬಾರದು. ಈ ಹಿಂದೆಯೂ ಸಹ ಆರ್ ಎಸ್ಎಸ್ ಕಾರ್ಯಕರ್ತರ ಮೇಲೆ ದಾಳಿಗಳು ನಡೆದಿವೆ. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡವರ ಮೇಲೆ ದಾಳಿ ಮಾಡಲಾಗುತ್ತಿದೆ. ಕಾನೂನು ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಸರಿಯಾಗಿ ನಿಭಾಯಿಸಬೇಕು. ಈ ಘಟನೆಗೆ ಪೊಲೀಸರು ಮತ್ತು ರಾಜ್ಯ ಆಡಳಿತವು ಜವಾಬ್ದಾರರಾಗಿರುತ್ತಾರೆ" ಎಂದು ಬಿಜೆಪಿ ನಾಯಕ ಟಾಮ್ ವಡಕ್ಕನ್ ಹೇಳಿದ್ದಾರೆ.