ಕೇರಳದಲ್ಲಿ 42 ಸ್ಥಾನ ಗೆದ್ದರೂ ಬಿಜೆಪಿ ಸರ್ಕಾರ ಸ್ಥಾಪನೆ ಸಾಧ್ಯ!
ತಿರುವನಂತಪುರಂ, ಮಾರ್ಚ್ 19: ಕೇರಳ ಜೊತೆಗೆ ತಮಿಳುನಾಡು, ಅಸ್ಸಾಂ, ಪುದುಚೇರಿ , ಪಶ್ಚಿಮ ಬಂಗಾಳದ ವಿಧಾನಸಭೆಗೆ ಚುನಾವಣೆಗೆ ಪ್ರಚಾರದ ಭರಾಟೆ ಜೋರಾಗಿದೆ. ಈ ನಡುವೆ ಪಕ್ಷಗಳ ನಡುವೆ ಮೈತ್ರಿ, ಪಕ್ಷಾಂತರ ಕೂಡಾ ಸಾಗಿದೆ. ಕೇರಳ ಬಿಜೆಪಿ ಪ್ರಧಾನ ಕಾರ್ಯದರ್ಶಿಯೊಬ್ಬರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಕೇರಳ ಚುನಾವಣೆಯಲ್ಲಿ ಎಲ್ಡಿಎಫ್ ಮತ್ತೊಮ್ಮೆ ಗೆಲುವು ಸಾಧಿಸುವ ಸಾಧ್ಯತೆಯಿದೆ ಬಹುತೇಕ ಎಲ್ಲಾ ಸಮೀಕ್ಷೆಗಳು ಹೇಳಿವೆ. ಬಿಜೆಪಿ ಒಂದು ಸ್ಥಾನಗಳಿಸಿದರೆ ಹೆಚ್ಚು ಅಬ್ಬಬ್ಬಾ ಎಂದರೆ 2 ಸ್ಥಾನ ಗಳಿಸಬಹುದು ಎಂದು ಸಮೀಕ್ಷೆಗಳು ತಿಳಿಸಿವೆ. ಆದರೆ, ಬಿಜೆಪಿ 42 ಸ್ಥಾನ ಗೆದ್ದರೂ ಸಾಕು, ನಮ್ಮ ಸರ್ಕಾರ ಅಧಿಕಾರಕ್ಕೇರಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಟಿ ರಮೇಶ್ ಹೇಳಿದ್ದಾರೆ.
ಸಮೀಕ್ಷೆ: ಚುನಾವಣಾ ನಿರತ ಮುಂದಿನ ಸಿಎಂ ಯಾರಾಗಬೇಕು?
ಕೇರಳದ 140 ಸ್ಥಾನಗಳಿಗೆ ಏಪ್ರಿಲ್ 6 ರಂದು ಮತದಾನ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.
ವಿಧಾನಸಭೆಯ ಬಲಾಬಲ
140 ಸ್ಥಾನಗಳ ವಿಧಾನಸಭೆಯ ಬಲಾಬಲ: ಸಿಪಿಐ (ಎಂ) ನೇತೃತ್ವದ ಎಲ್ ಡಿ ಎಫ್ 93 ಸ್ಥಾನ, ಕಾಂಗ್ರೆಸ್ ನೇತೃತ್ವ ಯುಡಿಎಫ್ 42 ಹಾಗೂ ಬಿಜೆಪಿ ನೇತೃತ್ವದ ಎನ್ಡಿಎ 1 ಸ್ಥಾನ ಹೊಂದಿದೆ. ಯಾವುದೇ ಪಕ್ಷವು ಅಧಿಕಾರ ಸ್ಥಾಪಿಸಲು ಮ್ಯಾಜಿಕ್ ನಂಬರ್ 71 ದಾಟಬೇಕಾಗುತ್ತದೆ. 2016ರಲ್ಲಿ ಎಲ್ ಡಿ ಎಫ್ 91, ಯುಡಿಎಫ್ 47, ಕಾಂಗ್ರೆಸ್ 1, ಇತರೆ 1 ಎಂದು ಫಲಿತಾಂಶ ಬಂದಿತ್ತು.
ಬಿಜೆಪಿಗೆ ಸಿಪಿಎಂ ಶಾಸಕರ ಬೆಂಬಲ
ಬಿಜೆಪಿ 42 ಸ್ಥಾನ ಗೆದ್ದರೆ ಸಾಕು, ಮಿಕ್ಕ 30 ಪ್ಲಸ್ ಸ್ಥಾನವನು ಸಿಪಿಐ ಹಾಗೂ ಕಾಂಗ್ರೆಸ್ ಬಂಡಾಯ ಶಾಸಕರು ತುಂಬಲಿದ್ದಾರೆ, ಈಗಾಗಲೇ ಅನೇಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ಎಂಟಿ ರಮೇಶ್ ಹೇಳಿದ್ದಾರೆ.
ಕೇರಳದಲ್ಲಿ ಎಲ್ಡಿಎಫ್- ಯುಡಿಎಫ್ ಜಟಾಪಟಿ; ಸಿಎಂ ಸ್ಥಾನಕ್ಕೆ ಪಿಣರಾಯಿ ಸೂಕ್ತ!
ಶಬರಿಮಲೆ ವಿವಾದ
ಶಬರಿಮಲೆ ವಿವಾದವೇ ಮುಂದಿನ ಸರ್ಕಾರವನ್ನು ನಿರ್ಧರಿಸಲಿದೆ. ಸಿಪಿಎಂ ಕೇಂದ್ರ ಸಮಿತಿ ನಿರ್ಧಾರವನ್ನೇ ಕೇರಳ ಸಿಪಿಐ ಬೆಂಬಲಿಸಿದರೆ ಮತದಾರರು ಉತ್ತರ ನೀಡಲಿದ್ದಾರೆ. ಸೀತಾರಾಮ್ ಯೆಚೂರಿ ಅವರು ಚುನಾವಣಾ ಪ್ರಚಾರಕ್ಕೆ ಬಂದಾಗ ಪಕ್ಷದ ನಿಲುವನ್ನು ಸ್ಪಷ್ಟಪಡಿಸುತ್ತಾರಾ? ಎಂದು ರಮೇಶ್ ಪ್ರಶ್ನಿಸಿದ್ದಾರೆ. ಸಚಿವ ಕೆ ಸುರೇಂದ್ರನ್ ಅವರು 2018ರಲ್ಲಿ ತಮ್ಮ ಸರ್ಕಾರ ಸುಪ್ರೀಂಕೋರ್ಟ್ ಆದೇಶದ ಅನುಸಾರ ಮಹಿಳೆಯರಿಗೆ ಪ್ರವೇಶ ಕಲ್ಪಿಸಲು ಯತ್ನಿಸಿದ್ದು, ನಂತರ ನಡೆದ ಹಿಂಸಾಚಾರ ಗಲಭೆ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದರು. ಆದರೆ, ಯೆಚೂರಿ ಮಹಿಳಾ ಪ್ರವೇಶ ಕುರಿತಂತೆ ಹೇಳಿಕೆ ಭಕ್ತರ ಭಾವನೆಗೆ ಧಕ್ಕೆ ತಂದಿದೆ. ಅಂದರೆ ಸಿಪಿಐ(ಎಂ) ದ್ವಂದ್ವ ನೀತಿ ಅನುಸರಿಸುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ ಎಂದು ರಮೇಶ್ ಹೇಳಿದರು.
ಪಿಣರಾಯಿ ವಿಜಯನ್ ಕೇಸ್
ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಲಂಚ ಪ್ರಕರಣ, ಚಿನ್ನ ಸ್ಮಗಲಿಂಗ್ ಮಾಡಲು ನೆರವಾದ ಆರೋಪಗಳಿವೆ. ಸ್ಮಗಲಿಂಗ್ ಕೇಸ್ ಮಧ್ಯವರ್ತಿ ಅಭ್ಯರ್ಥಿಯನ್ನಾಗಿ ನಿಲ್ಲಿಸಲಾಗಿದೆ. ಕೋಡುವಳ್ಳಿಯಲ್ಲಿ ಪ್ರಚಾರಕ್ಕೆ ಪಿಣರಾಯಿ ಹೋಗಿದ್ದು ಇದೇ ಕಾರಣಕ್ಕೆ ಎಂಬುದು ಬಹಿರಂಗವಾಗಿದೆ. ಕಾಂಗ್ರೆಸ್ ಕೂಡಾ 10-15 ವರ್ಷ ಹಿಂದಿನ ಗೌಪ್ಯ ಮೈತ್ರಿ ಮುಂದುವರೆಸಿದ್ದು, ಸಿಪಿಐ ವಿರುದ್ಧ ಧರ್ಮದಂ ಕ್ಷೇತ್ರದಲ್ಲಿ ಇನ್ನೂ ಅಭ್ಯರ್ಥಿಯನ್ನು ಹಾಕದೆ ಎಡಪಕ್ಷಕ್ಕೆ ಪರೋಕ್ಷವಾಗಿ ನೆರವಾಗುತ್ತಿದೆ. ಇದೆಲ್ಲದರ ಪರಿಣಾಮ ಶಾಸಕರು ಬಿಜೆಪಿಯತ್ತ ಮುಖ ಮಾಡಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ರಮೇಶ್ ಹೇಳಿದರು.