ಕೇರಳದಲ್ಲಿ ಎಸ್ಡಿಪಿಐ ನಾಯಕನ 'ಕೊಲೆ' ಬಳಿಕ ಮತ್ತೊಂದು ಹತ್ಯೆ
ಅಲಪ್ಪುಳ (ಕೇರಳ) ಡಿಸೆಂಬರ್ 19: ಕೇರಳದ ಅಲಪ್ಪುಳದಲ್ಲಿ ಭಾನುವಾರ ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ರಾಜಕೀಯ ವ್ಯಕ್ತಿಗಳ ಕೊಲೆ ನಡೆದಿದೆ. ಕೇರಳದ ಮುಸ್ಲಿಂ ಸಂಘಟನೆಯಾದ ಎಸ್ಡಿಪಿಐ ಮತ್ತು ಬಿಜೆಪಿ ನಡುವಿನ ರಾಜಕೀಯ ದ್ವೇಷಕ್ಕೆ ಭಾನುವಾರ ಕೆಲವೇ ಗಂಟಗಳ ಅಂತರದಲ್ಲಿ ಉಭಯ ಪಕ್ಷಗಳ ಇಬ್ಬರು ಮುಖಂಡರ ಹತ್ಯೆ ಮಾಡಲಾಗಿದೆ.
ಬಿಜೆಪಿಯ ಒಬಿಸಿ ಮೋರ್ಚಾ ಕಾರ್ಯದರ್ಶಿ ರೆಂಜಿತ್ ಶ್ರೀನಿವಾಸನ್(40) ನನ್ನು ಅಪರಿಚಿತ ದುಷ್ಕರ್ಮಿಗಳು ಭಾನುವಾರ ಅವರ ಮನೆಯಲ್ಲಿ ಕೊಂದಿದ್ದಾರೆ. ಅದೇ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಮುಖಂಡ ಎ ಎಸ್ ಶಾನ್(38) ಅವರ ಹತ್ಯೆ ಮಾಡಲಾಗಿದೆ. ಎಸ್ಡಿಪಿಐ ಪಿಎಫ್ಐನ ರಾಜಕೀಯ ಸಂಘಟನೆಯಾಗಿದೆ. ಕೆಲವೇ ಗಂಟೆಗಳ ಅಂತರದಲ್ಲಿ ಈ ಎರಡೂ ಕೊಲೆಗಳು ನಡೆದಿವೆ. ಹೀಗಾಗಿ ಎರಡು ಹತ್ಯೆಗಳ ನಂತರ, CrPC ಯ ಸೆಕ್ಷನ್ 144 ರ ಅಡಿಯಲ್ಲಿ ಇಡೀ ಅಲಪ್ಪುಳ ಜಿಲ್ಲೆಯಲ್ಲಿ ಭಾನುವಾರ ಮತ್ತು ಸೋಮವಾರ ಎರಡು ದಿನಗಳ ಕಾಲ ನಿಷೇಧಾಜ್ಞೆ ವಿಧಿಸಲಾಗಿದೆ.
ಭಾನುವಾರ ಬೆಳಗ್ಗೆ ರೆಂಜಿತ್ ಶ್ರೀನಿವಾಸನ್ ಅವರ ಮನೆಗೆ ನುಗ್ಗಿದ ಗುಂಪೊಂದು ಕತ್ತು ಕೊಯ್ದು ಕೊಂದಿದೆ. ಶನಿವಾರದಂದು ಕೇರಳದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಕೆ.ಎಸ್.ಶಾನ್ ಅವರ ಮೇಲೆ ಅಲಪ್ಪುಳ ಜಿಲ್ಲೆಯಲ್ಲಿ ಅಪರಿಚಿತ ತಂಡವೊಂದು ದಾಳಿ ನಡೆಸಿ ಹತ್ಯೆಗೈದಿತ್ತು.

ಕೆ.ಎಸ್.ಶಾನ್ ಮನೆಗೆ ತೆರಳುತ್ತಿದ್ದ ವೇಳೆ ಬೈಕ್ಗೆ ದುಷ್ಕರ್ಮಿಗಳು ಕಾರು ಡಿಕ್ಕಿ ಹೊಡೆಸಿದ್ದರು. ಎಸ್ ಡಿಪಿಐ ನಾಯಕ ಕೆಳಗೆ ಬೀಳುತ್ತಿದ್ದಂತೆಯೇ ಆತನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕೊಚ್ಚಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕೆ.ಎಸ್.ಶಾನ್ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಕೆ.ಎಸ್.ಶಾನ್ ಅವರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸದಸ್ಯರು ಹತ್ಯೆ ಮಾಡಿದ್ದಾರೆ ಎಂದು ಎಸ್ಡಿಪಿಐ ಅಧ್ಯಕ್ಷ ಎಂ.ಕೆ.ಫೈಝಿ ಆರೋಪಿಸಿದ್ದರು.
ಇದು ಪ್ರತೀಕಾರದ ದಾಳಿಯಂತೆ ತೋರುತ್ತಿದೆ. ಅಲಪ್ಪುಳ ಪುರಸಭೆಯ ವೆಲ್ಲಕಿನಾರ್ನಲ್ಲಿರುವ ರೆಂಜಿತ್ ಅವರ ಮನೆಗೆ ನುಗ್ಗಿದ ಜನರ ಗುಂಪು ಅವರನ್ನೂ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ರೆಂಜಿತ್ 2016ರ ಚುನಾವಣೆಯಲ್ಲಿ ಅಲಪ್ಪುಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು.
ಸದ್ಯ ಅಲಪ್ಪುಳ ಜಿಲ್ಲೆಯಲ್ಲಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದ್ದು ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ಉದ್ರಿಕ್ತ ಗುಂಪುಗಳು ಮತ್ತೆ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಈ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಕೆಎಸ್ ಶಾನ್ ಮತ್ತು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ರಂಜಿತ್ ಶ್ರೀನಿವಾಸನ್ ಅವರ ಹತ್ಯೆಯನ್ನು ಭಾನುವಾರ ಖಂಡಿಸಿದ್ದಾರೆ ಮತ್ತು ಅಪರಾಧಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ. ಅಂತಹ ಕೊಲೆಗಾರ ಗುಂಪುಗಳನ್ನು ಮತ್ತು ಅವರ ದ್ವೇಷದ ವರ್ತನೆಗಳನ್ನು ಗುರುತಿಸಲು ಮತ್ತು ಪ್ರತ್ಯೇಕಿಸಲು ಎಲ್ಲಾ ಪೊಲೀಸರು ಸಿದ್ಧರಿದ್ದಾರೆ ಎಂದು ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. "ಇಂತಹ ಹೇಯ ಮತ್ತು ಅಮಾನವೀಯ ಹಿಂಸಾಚಾರಗಳು ರಾಜ್ಯಕ್ಕೆ ಅಪಾಯಕಾರಿ, ಅಂತಹ ಕೊಲೆಗಾರ ಗುಂಪುಗಳನ್ನು ಮತ್ತು ಅವರ ದ್ವೇಷದ ವರ್ತನೆಗಳನ್ನು ಗುರುತಿಸಲು ಮತ್ತು ಪ್ರತ್ಯೇಕಿಸಲು ಎಲ್ಲಾ ಜನರು ಸಿದ್ಧರಾಗುತ್ತಾರೆ ಎಂದು ನನಗೆ ಖಾತ್ರಿಯಿದೆ" ಎಂದು ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.












Click it and Unblock the Notifications