ಕೊರೊನಾ ತಡೆಗೆ 5 ಲಕ್ಷ ಹಣವನ್ನು ದಾನ ಮಾಡಿದ ವೃದ್ದೆ
ಶ್ರೀನಗರ, ಮಾರ್ಚ್ 30: ಕೊರೊನಾ ನಿಯಂತ್ರಣಕ್ಕೆ ಜಮ್ಮು ಕಾಶ್ಮೀರದ ಅಜ್ಜಿ ಹಣ ಸಹಾಯ ಮಾಡಿದ್ದಾರೆ. 5 ಲಕ್ಷ ಹಣವನ್ನು ನೀಡುವ ಮೂಲಕ ಕಷ್ಟದಲ್ಲಿ ಇರುವ ಜನರಿಗೆ ನೆರವು ನೀಡಲು ಮುಂದೆ ಬಂದಿದ್ದಾರೆ.
87 ವರ್ಷದ ಖಲೀದಾ ಬೇಗಂ ಶ್ರೀನಗರದವರು. ಮುಸ್ಲಿಂ ಕುಟುಂಬದ ಈ ವೃದ್ದೆಗೆ ಹಜ್ ಯಾತ್ರೆ ಹೋಗಬೇಕು ಎನ್ನುವ ಆಸೆ ಇತ್ತು. ಹೀಗಾಗಿ ಹಣವನ್ನು ಕೂಡಿ ಹಾಕುತ್ತಿದ್ದರು. 5 ಲಕ್ಷ ರೂಪಾಯಿ ಕೂಡಿ ಹಾಕಿದ್ದ ಅಜ್ಜಿ ಹಜ್ ಯಾತ್ರೆಗೆ ಹೋಗುವ ತಯಾರಿಯಲ್ಲಿ ಇದ್ದರು. ಆದರೆ, ಅಷ್ಟರ ಒಳಗೆ ದೇಶದಲ್ಲಿ ಕೊರೊನಾ ಕೇಕೆ ಶುರು ಆಗಿತ್ತು.
ಕೊರೊನಾ ಭೀತಿಯಿಂದ ವಾರ್ಷಿಕ ಹಜ್ ಯಾತ್ರೆ ಮುಂದುಡಿಕೆಯಾಗಿದೆ. ಇಡೀ ಭಾರತವೇ ಲಾಕ್ ಡೌನ್ ಆಗಿದ್ದು, ಇದರಿಂದ ಕೂಲಿ ಕಾರ್ಮಿಕರಿಗೆ ಊಟಕ್ಕೂ ತೊಂದರೆ ಆಗಿದೆ. ಇಂತಹವರ ಸಹಾಯಕ್ಕೆ ಖಲೀದಾ ಬೇಗಂ ಬಂದಿದ್ದಾರೆ. ಆರ್ಎಸ್ಎಸ್ ಅಂಗ ಸಂಸ್ಥೆ ಸೇವಾ ಭಾರತಿಗೆ 5 ಲಕ್ಷ ರೂಪಾಯಿ ನೀಡಿದ್ದಾರೆ.

ಸೇವಾ ಭಾರತಿ ಬಡ ಕಾರ್ಮಿಕರಿಗೆ ನೆರವು ನೀಡುತ್ತಿದ್ದು. ತಮ್ಮ ಹಣವನ್ನು ಅಂತಹ ಕೆಲಸಕ್ಕೆ ಬಳಕೆ ಮಾಡಲು ಖಲೀದಾ ಬೇಗಂ ನೀಡಿದ್ದಾರೆ ಎಂದು ಆರ್ಎಸ್ಎಸ್ ಮಾಧ್ಯಮ ವಿಭಾಗ ಇಂದ್ರಪ್ರಸ್ಥ ವಿಶ್ವ ಸಂವಾದ ಕೇಂದ್ರದ ಮುಖ್ಯಸ್ಥ ಅರುಣ್ ಆನಂದ್ ತಿಳಿಸಿದ್ದಾರೆ.
ಖಲೀದಾ ಬೇಗಂ ಮಹಿಳೆ ಸುಧಾರಣೆ ಕೆಲಸದಲ್ಲಿ ಈ ಹಿಂದೆಯಿಂದ ತೊಡಗಿದ್ದರು. ಅವರ ಮಗ ನಿವೃತ್ತ ಐಪಿಎಸ್ ಅಧಿಕಾರಿ ಫಾರೂಕ್ ಖಾನ್ ಸದ್ಯ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಅವರ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.












Click it and Unblock the Notifications