ಕಾಶ್ಮೀರದ ವಿಶೇಷ ಸ್ಥಾನಮಾನ ಮರಳಿ ಬರಲ್ಲ: ಗುಲಾಂ ನಬಿ ಆಜಾದ್
ಶ್ರೀನಗರ, ಸೆಪ್ಟೆಂಬರ್ 11: ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮದೇ ಸ್ವಾತಂತ್ರ ಪಕ್ಷ ಕಟ್ಟಲು ಮುಂದಾಗಿರುವ ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡಿದ್ಧ ಸಂವಿಧಾನದ 370 ನೇ ವಿಧಿ ಇನ್ನೆಂದು ಸ್ಥಾಪನೆಯಾಗಲ್ಲ ಎಂದು ಹೇಳಿದ್ದಾರೆ.
ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿ ತಮ್ಮ ಮೊದಲ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಗುಲಾಂ ನಬಿ ಆಜಾದ್ ಅವರು, ''ಆರ್ಟಿಕಲ್ 370 ರ ಮರುಸ್ಥಾಪನೆಗೆ ಒತ್ತಾಯಿಸುವುದಾಗಿ ಭರವಸೆ ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಪ್ರಾದೇಶಿಕ ಪಕ್ಷಗಳನ್ನು ನಂಬಬೇಡಿ. ಮತಕ್ಕಾಗಿ ನಾನು ನಿಮ್ಮನ್ನು ದಾರಿ ತಪ್ಪಿಸುವುದಿಲ್ಲ. ದಯವಿಟ್ಟು ಸಾಧಿಸಲಾಗದ ಸಮಸ್ಯೆಗಳನ್ನು ಚರ್ಚೆ ಮಾಡಬೇಡಿ. 370 ಅನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ. ಸಂಸತ್ತಿನಲ್ಲಿ ಅದಕ್ಕೆ ಮೂರನೇ ಎರಡರಷ್ಟು ಬಹುಮತ ಬೇಕು'' ಎಂದು ಆಜಾದ್ ಹೇಳಿದರು.
Breaking: ಹೊಸ ಪಕ್ಷ ಘೋಷಿಸಲಿರುವ ಗುಲಾಂ ನಬಿ ಆಜಾದ್
ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ ಕೆಳಗಿಳಿಯುತ್ತಿದೆ. ಸಂಸತ್ತಿನಲ್ಲಿ ಬಹುಮತ ಪಡೆಯುವ ಮತ್ತು 370 ನೇ ವಿಧಿಯನ್ನು ಮರುಸ್ಥಾಪಿಸುವ ಯಾವುದೇ ಪಕ್ಷವು ಭಾರತದಲ್ಲಿ ಇಲ್ಲ. ಶೋಷಣೆ ಮತ್ತು ಸುಳ್ಳಿನ ರಾಜಕೀಯದ ವಿರುದ್ಧ ಹೋರಾಡಲು ಮುಂದಿನ 10 ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ತನ್ನ ಪಕ್ಷವನ್ನು ಪ್ರಾರಂಭಿಸುವುದಾಗಿ ಮಾಜಿ ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ದೌರ್ಜನ್ಯದ ರಾಜಕೀಯವು ಕಾಶ್ಮೀರದಲ್ಲಿ ಒಂದು ಲಕ್ಷ ಜನರ ಹತ್ಯೆಗೆ ಕಾರಣವಾಗಿದೆ. ಇದು ಐದು ಲಕ್ಷ ಮಕ್ಕಳನ್ನು ಅನಾಥರನ್ನಾಗಿ ಮಾಡಿದೆ. ತಾನು ಜಮ್ಮು ಮತ್ತು ಕಾಶ್ಮೀರಕ್ಕೆ ಬಂದಿದ್ದು ತನ್ನ ರಾಜಕೀಯ ಭವಿಷ್ಯಕ್ಕೆ ಧಕ್ಕೆಯಾಗಿದ್ದರೂ ಶೋಷಣೆ ಮತ್ತು ಸುಳ್ಳಿನ ವಿರುದ್ಧ ಹೋರಾಡಲು. ನನ್ನ ನಿಲುವು ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಸೇರಿದಂತೆ ಹೆಚ್ಚಿನ ಪ್ರಾದೇಶಿಕ ಪಕ್ಷಗಳೊಂದಿಗೆ ಭಿನ್ನಾಭಿಪ್ರಾಯವನ್ನು ಹೊಂದಿದೆ ಎಂದರು.
ನಾನು ಸುಳ್ಳಿನ ವಿರುದ್ಧ ಹೋರಾಡುತ್ತೇನೆ
ಜನರನ್ನು ಪ್ರತಿಭಟನೆಗೆ ಪ್ರಚೋದಿಸಿ ಕೊಲ್ಲುವುದು ಮತ್ತೊಂದು ವಂಚನೆಯಾಗಿದೆ. ಆಜಾದ್ ಜೀವಂತವಾಗಿರುವಷ್ಟು ದಿನ ನಾನು ಸುಳ್ಳಿನ ವಿರುದ್ಧ ಹೋರಾಡುತ್ತೇನೆ. ಈ ವಿಚಾರವನ್ನು ನೀವು ಮೌನಗೊಳಿಸಲು ಬಯಸಿದರೆ ನೀವು ನನ್ನನ್ನು ಕೊಲ್ಲಬೇಕಾಗುತ್ತದೆ ಎಂದರು. ಕಳೆದ ತಿಂಗಳು ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ಹಿರಿಯ ರಾಜಕಾರಣಿ ಆಜಾದ್, ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಿಗೆ ರಾಜ್ಯತ್ವವನ್ನು ಮರುಸ್ಥಾಪಿಸುವುದು ಮತ್ತು ಉದ್ಯೋಗಗಳು ಮತ್ತು ಭೂಮಿಯ ರಕ್ಷಣೆ ಎಂಬ ಸಾಧಿಸಬಹುದಾದ ಹಕ್ಕಿಗಾಗಿ ಹೋರಾಡುವುದಾಗಿ ಜನರಿಗೆ ಭರವಸೆ ನೀಡಿದರು.
ಕಾಶ್ಮೀರದ ನಿವಾಸಿಗಳಿಗೆ ಉದ್ಯೋಗಕ್ಕೆ ಒತ್ತಾಯ
ನಾನು ಸೀಟುಗಳನ್ನು ಗೆಲ್ಲುವುದಕ್ಕಾಗಿ ಭಾವನಾತ್ಮಕ ಘೋಷಣೆಗಳನ್ನು ಎತ್ತುವುದಿಲ್ಲ. ನಾವು ರಾಜ್ಯದ ಮರುಸ್ಥಾಪನೆಗಾಗಿ ಹೋರಾಡಬೇಕಾಗುತ್ತದೆ. ಇದಕ್ಕಾಗಿ ಸಾಂವಿಧಾನಿಕ ತಿದ್ದುಪಡಿಯ ಅಗತ್ಯವಿಲ್ಲ. ರಾಜ್ಯತ್ವವನ್ನು ಮರುಸ್ಥಾಪಿಸಿದ ನಂತರ ರಾಜ್ಯ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಿಗೆ ಉದ್ಯೋಗ ಮತ್ತು ಭೂಮಿಯ ರಕ್ಷಣೆಗಾಗಿ ಕಾನೂನುಗಳನ್ನು ಮಾಡಬಹುದು ಮತ್ತು ಈ ಎರಡು ವಿಷಯಗಳಿಗೆ ಸಂಸತ್ತಿನ ಅನುಮೋದನೆ ಅಗತ್ಯವಿಲ್ಲ ಎಂದು ಅವರು ಹೇಳಿದರು.
ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳಿಗೆ ಶಿಕ್ಷೆ
ಮೂರು ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದಾಗ ಕೇಂದ್ರಾಡಳಿತ ಪ್ರದೇಶದಲ್ಲಿ ಮಾನವ ಹಕ್ಕುಗಳು ಮತ್ತು ಅಭಿವೃದ್ಧಿಯ ಕುರಿತು ಆದ ಇಳಿಕೆಯನ್ನು ಜನರ ಮುಂದೆ ತೆರೆದಿಟ್ಟರು. ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಕಲಿ ಎನ್ಕೌಂಟರ್ಗಳನ್ನು ತಡೆದು ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ಹೇಗೆ ಶಿಕ್ಷಿಸಿದ್ದರು ಎಂಬುದನ್ನು ಜನರಿಗೆ ನೆನಪಿಸಿದರು.
ಆಜಾದ್ ನಿರ್ಗಮನದಿಂದ ಕಾಂಗ್ರೆಸ್ಗೆ ಹಿನ್ನೆಡೆ
ಜಮ್ಮು ಕಾಶ್ಮೀರದಲ್ಲಿ ಗುಲಾಂ ನಬಿ ಆಜಾದ್ ರಾಜೀನಾಮೆ ನೀಡಿದ ಬಳಿಕ ಸುಮಾರು 60 ಮಂದಿ ಸ್ಥಳೀಯ ನಾಯಕರು ಸೇರಿದಂತೆ ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ರಾಜೀನಾಮೆ ಸಲ್ಲಿಸಿದ್ದಾರೆ. ಆಜಾದ್ ಅವರು ಕಾಂಗ್ರೆಸ್ನ ಜಿ 23 ಗುಂಪಿನ ಭಾಗವಾಗಿದ್ದವರು. ಅವರ ನಿರ್ಗಮನದಿಂದ ಕಾಂಗ್ರೆಸ್ ಹಿನ್ನೆಡೆಯಾಗಿದ್ದು, ಸುಳ್ಳಲ್ಲ. ಮುಂದೆ ಬರುವ ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆಗೆ ತಮ್ಮದೆ ಸ್ವಂತ ಪಕ್ಷವನ್ನು ಕಟ್ಟಲು ಗುಲಾಂ ನಬಿ ಆಜಾದ್ ಮುಂದಾಗಿದ್ದಾರೆ.