ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಗುಲಾಂ ನಬಿ ಆಜಾದ್ ಗುಡ್ ಬೈ!
ಶ್ರೀನಗರ್, ಆಗಸ್ಟ್ 17: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ತೆಗೆದುಕೊಂಡ ನಿರ್ಧಾರ ಪಕ್ಷಕ್ಕೆ ತೀವ್ರ ಮುಖಭಂಗವನ್ನು ಉಂಟು ಮಾಡಿದೆ. ಏಕೆಂದರೆ ಅವರು ನೇಮಕವಾದ ಕೆಲವೇ ಗಂಟೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್ನ ರಾಜಕೀಯ ವ್ಯವಹಾರಗಳ ಸಮಿತಿ ಮತ್ತು ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಎಐಸಿಸಿಯ ಉನ್ನತ ಪ್ಯಾನೆಲ್ಗಳ ಭಾಗವಾಗಿರುವ ಗುಲಾಂ ನಬಿ ಆಜಾದ್ ವಿಷಯದಲ್ಲಿ ತೆಗೆದುಕೊಂಡಿರುವ ಕ್ರಮವು ಅವರಿಗೆ ಅಗೌರವ ತೋರಿದಂತೆ ಎಂದು ಭಾವಿಸಲಾಗಿದೆ. ಆದ್ದರಿಂದ ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ನೀಡಿದ ಎರಡೂ ಹುದ್ದೆಗಳಿಗೆ ಅವರು ರಾಜೀನಾಮೆ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಚುನಾವಣೆ; ಕಾಂಗ್ರೆಸ್ ಸಿಎಂ ಅಭ್ಯರ್ಥಿ ಯಾರು?
ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ನ ಮರುಸಂಘಟನೆಯ ಬಗ್ಗೆ ಒಂದು ತಿಂಗಳ ಸಮಾಲೋಚನೆಯ ನಂತರ ಮಂಗಳವಾರ ಸಂಜೆ ಘೋಷಿಸಲಾದ ಕ್ರಮದ ಕುರಿತು ಗುಲಾಂ ನಬಿ ಆಜಾದ್ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಗುಲಾಂ ನಬಿ ಆಜಾದ್ ನೀಡಿದ ಕಾರಣ:
ಜಮ್ಮು ಮತ್ತು ಕಾಶ್ಮೀರದ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನವನ್ನು ತಮ್ಮ ಆರೋಗ್ಯ ಕಾರಣಗಳಿಂದಾಗಿ ವಹಿಸಿಕೊಳ್ಳಲು ಗುಲಾಂ ನಬಿ ಆಜಾದ್ ನಿರಾಕರಿಸಿದ್ದಾರೆ. ಇದನ್ನು ಕಾಂಗ್ರೆಸ್ ನಾಯಕತ್ವಕ್ಕೆ ತಿಳಿಸಿರುವ ಅವರು, ತಮಗೆ ಜವಾಬ್ದಾರಿ ನೀಡಿದ ನಾಯಕತ್ವಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಮಂಗಳವಾರ ವಿಕರ್ ರಸೂಲ್ ವಾನಿ ಅನ್ನು ಪಕ್ಷದ ಜೆ-ಕೆ ಘಟಕದ ಅಧ್ಯಕ್ಷರಾಗಿ ಮತ್ತು ರಾಮನ್ ಭಲ್ಲಾ ಅನ್ನು ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಿದ ನಂತರ ಈ ಬೆಳವಣಿಗೆ ನಡೆದಿದೆ. ಈ ಹಿಂದೆ ಜಮ್ಮು ಕಾಶ್ಮೀರದ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಆಜಾದ್ ಆಪ್ತ ಎಂದು ನಂಬಲಾದ ಗುಲಾಮ್ ಅಹ್ಮದ್ ಮಿರ್ ಹೊಂದಿದ್ದರು.
ರಾಜೀನಾಮೆ ಹಿಂದಿನ ಅಸಲಿ ಕಾರಣ?:
ಜಮ್ಮು ಮತ್ತು ಕಾಶ್ಮೀರ ಸಮಿತಿಯ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಂದರ್ಭದಲ್ಲಿ ಗುಲಾಂ ನಬಿ ಆಜಾದ್ ತಮ್ಮ ಆರೋಗ್ಯದ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಆದರೆ ಉನ್ನತ ಆಡಳಿತದ ಬಗ್ಗೆ ಅವರು ಅಸಮಾಧಾನ ಹೊಂದಿದ್ದಾರೆ. ಹೊಸ ಹುದ್ದೆಯು ಅವರ ಸ್ಥಾನವನ್ನು ಕುಗ್ಗಿಸಿದಂತೆ ಕಂಡು ಬರುತ್ತಿದೆ ಎಂದು ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಪ್ರಭಾವ ಹೊಂದಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಲ್ಲಿ ಗುಲಾಂ ನಬಿ ಆಜಾದ್ ಒಬ್ಬರು. ಅವರು ಈ ಹಿಂದೆ ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ಸಚಿವರಾಗಿ ಮತ್ತು ಇತರ ಖಾತೆಗಳನ್ನು ಸಹ ನಿರ್ವಹಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಅಸಮಾಧಾನ:
ಹಿರಿಯ ನಾಯಕ ಗುಲಾಂ ನಬಿ ಆಜಾದ್ ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿರುವುದು ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯವನ್ನು ತೋರಿಸುತ್ತಿದೆ. ಇದು ಗಾಂಧಿ ಕುಟುಂಬವನ್ನು ಒಳಗೊಂಡಿರುವ ಪಕ್ಷದ ಹೈಕಮಾಂಡ್ ವಿರುದ್ಧ ಹಲವು ನಾಯಕರು ಬಂಡಾಯ ಬಾವುಟ ಹಾರಿಸುವುದಕ್ಕೂ ಕಾರಣವಾಗಬಹುದು. ಈ ಹಂತದಲ್ಲಿ ಜಮ್ಮು ಮತ್ತು ಕಾಶ್ಮೀರ ಘಟಕದ ಪುನಾರಚನೆಯು ಅನೇಕ ನಾಯಕರನ್ನು ಕೆರಳಿಸಿದೆ. ಆ ರಾಜ್ಯದ ಪಿಸಿಸಿ ಮುಖ್ಯಸ್ಥರ ನೇಮಕವನ್ನು ವಿರೋಧಿಸಿ ಕಾಂಗ್ರೆಸ್ ಮಾಜಿ ಶಾಸಕ ಗುಲ್ಜಾರ್ ಅಹ್ಮದ್ ವಾನಿ ಸಮನ್ವಯ ಸಮಿತಿಯಿಂದ ಈಗಾಗಲೇ ಕೆಳಗಿಳಿದಿದ್ದಾರೆ.
Recommended Video