'ಹೌ ಈಸ್ ದಿ ಜೈಶ್' ಎಂದು ವಿಕೃತಿ ಮೆರೆಯುತ್ತಿದ್ದಾರೆ ಪಾಕ್ ಪರ ವಾದಿಗಳು
ಶ್ರೀನಗರ, ಫೆಬ್ರವರಿ 15: ಭಾರತದ ಪಾಲಿನ ಅತ್ಯಂತ ಕರಾಳ ದಿನಗಳ ಪಟ್ಟಿಗೆ ಫೆಬ್ರವರಿ 14 ಸೇರಿಕೊಂಡಿದೆ. ದೇಶ ಕಾಯುವ ವೀರ ಯೋಧರ ಬಸ್ ಮೇಲೆ ಹೇಡಿ ಭಯೋತ್ಪಾದಕರು ದಾಳಿ ನಡೆಸಿ ಅವರನ್ನು ಕೊಂದಿದ್ದಾರೆ. ಇದು ಇಡೀ ದೇಶಕ್ಕೆ ಆಘಾತ ಉಂಟುಮಾಡಿರುವ ಘಟನೆ.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಜನತೆಯಲ್ಲಿ ಈ ಕೃತ್ಯ ಆಕ್ರೋಶ ಮೂಡಿಸಿದೆ. ಅಗತ್ಯಬಿದ್ದರೆ ದೇಶಕ್ಕಾಗಿ ನಾವೂ ಹೋರಾಟಕ್ಕೆ ಸಿದ್ಧ ಎಂಬ ಮಾತುಗಳನ್ನಾಡುತ್ತಿದ್ದಾರೆ. ಪ್ರತಿ ಬಾರಿ ಯೋಧರು ಬಲಿಯಾದಾಗ ನಮ್ಮಲ್ಲಿ ಮಡುಗಟ್ಟುವ ದುಃಖ, ನೋವು ಆ ರೀತಿಯ ಆಕ್ರೋಶವನ್ನೂ ಹುಟ್ಟುಹಾಕುತ್ತದೆ. ಪ್ರತಿ ಯೋಧನ ಸಾವೂ ಭಾರತ ಮಾತೆಯ ರಕ್ಷಣೆಗೆ ನಿಂತ ಒಂದು ದೊಡ್ಡ ಶಕ್ತಿಯನ್ನು ಕಳೆದುಕೊಂಡಂತೆ.
ಆದರೆ, ಈ ದೇಶಪ್ರೇಮ, ಸೈನಿಕರ ಸಾವಿಗೆ ಪ್ರತಿಕಾರ ತೀರಿಸಿಕೊಳ್ಳಬೇಕೆಂಬ ಬಯಕೆ, ಯೋಧಜನ ಸಾವು ನನ್ನ ಕುಟುಂಬದ ವ್ಯಕ್ತಿಯದೇ ಸಾವು ಎಂದು ಮಿಡಿಯುವ ಸಂವೇದನಾಶೀಲತೆ ಎಷ್ಟು ಮಂದಿಗೆ ಇದೆ? ದೇಶದಾದ್ಯಂತ ಇರುವ ನೂರು ಹೆಚ್ಚು ಕೋಟಿಗೂ ಹೆಚ್ಚಿನ ಜನರಲ್ಲಿ ಎಲ್ಲರಲ್ಲಿಯೂ ಈ ಕಿಚ್ಚು ಇದೆ ಎಂದಲ್ಲ. ನಮ್ಮ ನಡುವೆಯೇ ಅನೇಕ ಕುತ್ಸಿತ ಮನಸ್ಸುಗಳು ಈ ಘಟನೆಯನ್ನು ಸಂಭ್ರಮಿಸುತ್ತಿವೆ ಎಂಬುದು ಇನ್ನೂ ದೊಡ್ಡ ಆಘಾತ ಮೂಡಿಸುತ್ತದೆ.
ನಿಜ, ಘಟನೆ ನಡೆಯುತ್ತಿದ್ದಂತೆಯೇ ದೇಶದಲ್ಲಿನ ಪಾಕ್ ಪರ ಮತ್ತು ಭಾರತ ವಿರೋಧಿ ಮನಸುಗಳು ಕೇಕೆ ಹಾಕಿವೆ. ಘಟನೆಯನ್ನು ಸಂಭ್ರಮಿಸಿ, ದೇಶವನ್ನು ಅಣಕಿಸಿವೆ. ಈ ನೋವಿನ ಸಂದರ್ಭದಲ್ಲಿಯೂ ಕೆಲವರು ರಾಜಕೀಯದ ದಾಳಿಗೆ ಮುಂದಾಗಿದ್ದಾರೆ. ಕೇಂದ್ರ ಸರ್ಕಾರ 'ಉರಿ' ಸಿನಿಮಾದ ಎರಡನೆಯ ಭಾಗ ತಯಾರಿಸಲು ಬಾಲಿವುಡ್ ನಿರ್ದೇಶಕರೊಂದಿಗೆ ಸಭೆ ಕರೆಯಲಿದೆ ಎಂದು ಲೇವಡಿ ಮಾಡುವ ರೀತಿ ಸಂವೇದನೆ ಕಳೆದುಕೊಂಡಿದ್ದಾರೆ. ಇನ್ನು ಪಾಕ್ ಪರವಾದಿಗಳು 'ಹೌ ಈಸ್ ದಿ ಜೈಶ್' ಎಂದು 'ಉರಿ' ಸಿನಿಮಾದ 'ಹೌ ಈಸ್ ದಿ ಜೋಶ್' ಎಂಬ ಸಾಲನ್ನು ಲೇವಡಿ ಮಾಡಿದ್ದಾರೆ.
ನೆರೆಯ ಪಾಕಿಸ್ತಾನದಲ್ಲಿ ಭಾರತ ವಿರೋಧಿಗಳು ಈ ರೀತಿ ಟ್ವೀಟ್ಗಳನ್ನು ಮಾಡುವುದು ಸಹಜವೂ ಆಗಿರಬಹುದು. ಆದರೆ, ನಮ್ಮದೇ ದೇಶದಲ್ಲಿ ನೆಲೆಸಿರುವವರೂ ಹೀಗೆ ಟ್ವೀಟ್ಗಳನ್ನು ಮಾಡಿದ್ದಾರೆ. ಇವು ವ್ಯಾಪಕವಾಗಿ ಹರಿದಾಡುತ್ತಿದ್ದಂತೆಯೇ ಅನೇಕರು ತಮ್ಮ ಟ್ವೀಟ್ ಖಾತೆಗಳನ್ನು ಡಿ ಆಕ್ಟಿವೇಟ್ ಮಾಡಿ ನಾಪತ್ತೆಯಾಗಿದ್ದಾರೆ. ಈ ಟ್ವೀಟ್ಗಳ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ.
|
ಹೌ ಈಸ್ ದಿ ಜೈಶ್?
'ಹೌ ಈಸ್ ದಿ ಜೋಶ್' ಸಂಭಾಷಣೆಯ ತುಣುಕನ್ನು ಲೇವಡಿ ಮಾಡಿ ಅಣಕಿಸುವಂತೆ ಬಸಿಮ್ ಹಿಲಾಲ್ ಎಂಬಾತ 'ಹೌ ಈಸ್ ದಿ ಜೈಶ್' (ಜೈಶ್ ಎ ಮೊಹಮ್ಮದ್ ಭಯೋತ್ಪಾದನಾ ಸಂಘಟನೆ) ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಉತ್ತರ ಎಂಬಂತೆ 'ಗ್ರೇಟ್ ಸರ್' ಎಂದೂ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾನೆ. ಅಂದಹಾಗೆ ಈತ ಪಾಕಿಸ್ತಾನದವನಲ್ಲ. ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಗಣಿತ ಪದವಿ ಅಧ್ಯಯನ ಮಾಡುತ್ತಿರುವ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿ.

ನಿಮ್ಮ ಸಮಯ ಬಂದಿದೆ
16 ಆಕ್ರಮಿತ ಪಡೆಗಳು ಹತ್ಯೆಯಾಗಿವೆ. ನಿಮ್ಮ ಸಮಯ ಬಂದಿದೆ. ಭಾರತ ನಿನ್ನ ಸಮಯ ಬಂದಿದೆ. ಜೈಶ್ ಐ ಜೈಶ್ ಐ ಎಂದು ಕಾಶ್ಮೀರದಲ್ಲಿ ನೆಲೆಸಿರುವ ಸ್ಟಾರ್ ಡಸ್ಟ್ ಎಂಬ ಖಾತೆಯುಳ್ಳ ವ್ಯಕ್ತಿ ಟ್ವೀಟ್ ಮಾಡಿದ್ದಾರೆ.

ಭಾರತ ಮಂಡಿಯೂರಲಿದೆ
ಭಾರತದ ಆಕ್ರಮಿತ ಪಡೆಗಳಿಗೆ ಸರಿಯಾದ ಶಾಸ್ತಿಯಾಗಿದೆ. ಭಾರತವು ಶೀಘ್ರದಲ್ಲಿಯೇ ಪಾಕಿಸ್ತಾನದ ಎದುರು ಮಂಡಿಯೂರಲಿದೆ ಎಂದು ಮುಹಮ್ಮದ್ ವಕಾಸ್ ಎಂಬಾತ ಟ್ವೀಟ್ ಮಾಡಿದ್ದಾನೆ.

ಮುಂದಿನ ಸಿನಿಮಾ ಯಾವುದು?
ಸರಿ, ಮುಂದಿನ ಸಿನಿಮಾ ಯಾವುದಿರಬಹುದು? 'ಪುಲ್ವಾಮಾ?' ಅದರ ಘೋಷಣೆ ಏನಿರಬಹುದು? ಹೌ ಈಸ್ ದಿ 'ಜೈಶ್'? ಮಿ. 56 ಇಂಚಿನ ಎದೆಯ ಪ್ರಧಾನಿ ನರೇಂದ್ರ ಮೋದಿ ಅವರೇ ಮುಂದಿನ ದಾಲಿಗೆ ಸಿದ್ಧರಾಗಿ. ನಿಮ್ಮ ಶಕ್ತಿಯನ್ನು ಪ್ರದರ್ಶಿಸಲು ಬಾಲಿವುಡ್ ನಿರ್ಮಾಪಕರನ್ನು ಭೇಟಿ ಮಾಡಿ. ರಕ್ಷಣಾ ಬಜೆಟ್ ಹೆಚ್ಚಿಸಿ. ಆದರೆ, ನಂಬಿ ಆ 40 ಯೋಧರ ಕುಟುಂಬಗಳು ಅವರನ್ನು ಎಂದೆಂದಿಗೂ ಮಿಸ್ ಮಾಡಿಕೊಳ್ಳುತ್ತವೆ ಎಂದು ಅನಿಲವಾ ಚಟರ್ಜಿ ಎಂಬುವವರು ಟ್ವೀಟ್ ಮಾಡಿದ್ದಾರೆ. ಇದು ಯೋಧರ ಸಾವಿನ ಹತಾಶೆ ಮತ್ತು ಆಕ್ರೋಶದಿಂದ ಬಂದಿರುವ ಮಾತು ಎನಿಸಿದರೂ ಈ ಸಂದರ್ಭಕ್ಕೆ ಸೂಕ್ತವಾಗಿಲ್ಲ.
|
ವಿಕೃತ ಮನಸುಗಳು
ಯೋಧರ ಮೇಲಿನ ದಾಳಿಯ ಬಗ್ಗೆ ಭಾರತದಲ್ಲಿಯೇ ಇರುವ ಅನೇಕರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಪತ್ರಿಕೆ, ವೆಬ್ಸೈಟ್ಗಳಲ್ಲಿ ಪ್ರಕಟವಾಗುವ ಸುದ್ದಿಗಳಿಗೆ ಭಾರತವನ್ನು ಟೀಕಿಸುವ ಕಾಮೆಂಟ್ಗಳನ್ನು ಹಾಕುತ್ತಿದ್ದಾರೆ. ಇದು ಪ್ರೇಮಿಗಳ ದಿನದ ಪ್ರಯುಕ್ತ ನೀಡಿದ ಉಡುಗೊರೆ ಎಂದು ಸಂಭ್ರಮಿಸಿದ್ದಾರೆ. ಕಾಶ್ಮೀರವನ್ನು ಸ್ವತಂತ್ರಗೊಳಿಸಿ ಎಂಬ ಘೋಷಣೆಗಳನ್ನು ಮಾಡಿದ್ದಾರೆ.

ಕಾಶ್ಮೀರಿಗಳ ಪ್ರತಿಭಟನೆ
ಇತ್ತ ಕಾಶ್ಮೀರ ಪ್ರತ್ಯೇಕತೆಯ ಪರ ಮಾತನಾಡುತ್ತಿರುವವರು ಸಂಭ್ರಮಿಸುತ್ತಿದ್ದರೆ, ಅತ್ತ ಭಾರತದೊಂದಿಗೆ ಇರಲು ಬಯಸಿರುವ ಜನರು ಘಟನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ದಾಳಿಗೆ ಜಮ್ಮು ಮತ್ತು ಕಾಶ್ಮೀರದ ಅನೇಕ ಕಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತ್ರಿವರ್ಣ ಧ್ವಜ ಹಿಡಿದ ಸ್ಥಳೀಯರು ಭಾರತದ ಪರ ಘೋಷಣೆಗಳನ್ನು ಕೂಗಿ ಭಯೋತ್ಪಾದನಾ ಕೃತ್ಯವನ್ನು ಖಂಡಿಸಿದ್ದಾರೆ.












Click it and Unblock the Notifications