ಕಾಶ್ಮೀರ ಮತ್ತೆ ಉದ್ವಿಗ್ನ: ಕಲ್ಲು ತೂರಾಟಕ್ಕೆ ಟ್ರಕ್ ಚಾಲಕ ಬಲಿ
ಶ್ರೀನಗರ, ಆಗಸ್ಟ್ 26: ಜಮ್ಮು ಕಾಶ್ಮೀರದಲ್ಲಿ ಮತ್ತೆ ಗಲಾಟೆ ಆರಂಭವಾಗಿದ್ದು, ಟ್ರಕ್ ಚಾಲಕನೊಬ್ಬನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಭಾನುವಾರ ನಡೆದಿದೆ.
ಭದ್ರತಾ ತಂಡದ ವಾಹನ ಎಂದು ಭಾವಿಸಿ ಸ್ಥಳೀಯ ಟ್ರಕ್ ಮೇಲೆ ಕೆಲವರು ದಾಳಿ ನಡೆಸಿದ್ದು, ಟ್ರಕ್ ಚಾಲಕನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಲಾಗಿದೆ. ಅನಂತ್ನಾಗ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ
ಮೊಹಮ್ಮದ್ ಖಲೀಲ್ದಾರ್ ಮೃತರು, ಅವರು ಅದೇ ಜ್ರಾಡಿಪೊರ ಪ್ರದೇಶದವರಾಗಿದ್ದು ಅವರು ಮನೆಗೆ ಹಿಂದಿರುವಗುವ ಸಮಯದಲ್ಲಿ ಪ್ರತಿಭಟನೆ ನಡೆದಿದ್ದು, ಟ್ರಕ್ ಮೇಲೆ ಕಲ್ಲು ತೂರಾಟ ನಡೆದಿದೆ.
ಚಾಲಕನ ತಲೆಗೆ ಕಲ್ಲಿನಿಂದ ಪೆಟ್ಟು ಬಿದ್ದ ಪರಿಣಾಮ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಜಮ್ಮು ಕಾಶ್ಮೀರದ ಇತಿಹಾಸ ನೆನಪಿಸಬೇಕಿದೆ, ಆಧುನಿಕ ಜಮ್ಮು ಕಾಶ್ಮೀರ ಹೇಗಾಯಿತು?
ಆಗಸ್ಟ್ ಆರಂಭದಲ್ಲೂ ಕೂಡ ಜನರು ಸ್ಥಳೀಯರೊಬ್ಬರ ಮೇಲೆ ದಾಳಿ ನಡೆಸಿದ್ದರು. ಈ ಸಮಯದಲ್ಲಿ 11ವರ್ಷದ ಬಾಲಕನ ಕಣ್ಣಿಗೆ ಪೆಟ್ಟಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈಗ ಈ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಮ್ಮು ಕಾಶ್ಮೀರ ಪೊಲೀಸ್ ಡೈರೆಕ್ಟರ್ ಜನರಲ್ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಬೆನ್ನಲ್ಲೇ ಗಲಭೆಗಳು ನಡೆಯದಂತೆ ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಹಲವು ದಿನ ಕರ್ಫ್ಯೂ ಜಾರಿಯಲ್ಲಿತ್ತು, ಶಾಲಾ ಕಾಲೇಜುಗಳಿಗೆ ಬೀಗ ಹಾಕಲಾಗಿತ್ತು. ಇದೀಗ ಮತ್ತೆ ಪ್ರತಿಭಟನೆಗಳು ಆರಂಭಗೊಂಡಿವೆ.