Bakrid: ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ: ತಮಿಳುನಾಡಿನಲ್ಲಿ ಗೋಹತ್ಯೆಗೆ ನಿಷೇಧಕ್ಕೆ ಸೂಚನೆ
ಚೆನ್ನೈ: ಬಕ್ರೀದ್ ಹಬ್ಬದ ಸಂದರ್ಭದಲ್ಲಿ ತಮಿಳುನಾಡು ರಾಜ್ಯ ಸರ್ಕಾರಕ್ಕೆ ಇಂದು ಬುಧವಾರ (ಮೇ 27) ಮದ್ರಾಸ್ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ರಾಜ್ಯದಲ್ಲಿ ಗೋಹತ್ಯೆಗೆ ತಕ್ಷಣದಿಂದಲೇ ನಿಷೇಧಿಸಲು 1976ರ ಆಗಸ್ಟ್ 30ರಂದು ಹೊರಡಿಸಲಾಗಿದ್ದ ಸರ್ಕಾರಿ ಆದೇಶ (ಜಿ.ಓ.) ಜಾರಿಗೊಳಿಸುವಂತೆ ಸೂಚನೆ ನೀಡಿದೆ. ರಾಜ್ಯದಲ್ಲಿ ಹಾಲು ಉತ್ಪಾದನೆ ಹೆಚ್ಚಿಸಿ ಗ್ರಾಮೀಣ ಆರ್ಥಿಕತೆ ಸುಧಾರಣೆಗೆ ಸಹಕಾರಿಯಾಗುವ ಉದ್ದೇಶದಿಂದ ನ್ಯಾಯಾಲಯ ಈ ಆದೇಶ ನೀಡಿದೆ.
ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ವಿ. ಲಕ್ಷ್ಮಿನಾರಾಯಣನ್ ಅವರ ರಜಾಕಾಲದ ಪೀಠವು, ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರು/ಪೊಲೀಸ್ ಪಡೆಯ ಮುಖ್ಯಸ್ಥರಿಗೆ (ಡಿಜಿಪಿ/ಹೆಚ್ಒಪಿಎಫ್) ನಿರ್ದೇಶನ ನೀಡಿದೆ. ನಾಳೆ ಗುರುವಾರ (ಮೇ 28) ಬಕ್ರೀದ್ ಹಬ್ಬ ಅಥವಾ ಇನ್ನಾವುದೇ ದಿನದಂದು ರಾಜ್ಯದಲ್ಲಿಗೋವು ಅಥವಾ ಕರುಗಳನ್ನು ವಧೆ ಮಾಡದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಮೇಲೆ ತಿಳಿಸಿದ ಇಬ್ಬರು ಹಿರಿಯ ಅಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಕೋರ್ಟ್ ಆದೇಶ ಪಾಲನೆ ಆಗಬೇಕು, ಉಲ್ಲಂಘನೆಯಾಗದಂತೆ ಖಚಿತಪಡಿಸಿಕೊಳ್ಳುವಂತೆ ತಿಳಿಸಿದೆ. ಸರ್ಕಾರದಿಂದ ಅನುಸರಣಾ ವರದಿಯನ್ನು ಪಡೆಯುವಂತೆಯು ಹೈಕೋರ್ಟ್ ರಿಜಿಸ್ಟ್ರಿಗೆ ನ್ಯಾಯಮೂರ್ತಿಗಳು ನಿರ್ದೇಶಿಸಿದರು.
ಗೋವುಗಳ ವಧೆಗೆ ತಾತ್ಕಾಲಿಕ ಶೆಡ್ ನಿರ್ಮಾಣ
ಹಸುಗಳ ವಧೆ ನಿಲ್ಲಿಸುಂತೆ ಕೋರಿ ಕೋರ್ಟ್ ಹಿಂದೂ ಮಕ್ಕಳ್ ಕಚ್ಚಿಯ ಯುವ ವಿಭಾಗದ ಕಾರ್ಯದರ್ಶಿ 29 ವರ್ಷದ ಕೆ. ಸೂರ್ಯ ಅಲಿಯಾಸ್ ಕೆ. ಸೂರ್ಯ ಪ್ರಶಾಂತ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ಸಲ್ಲಿಸಿದ್ದರು. ಬಕ್ರೀದ್ ಹಬ್ಬದ ವೇಳೆ ಕೊಯಮತ್ತೂರಿನ ವಿವಿಧ ಪ್ರದೇಶಗಳಲ್ಲಿ ಗೋವುಗಳನ್ನು ವಧೆಗಾಗಿ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಲಾಗಿದೆ ಎಂದು ಅರ್ಜಿದಾರರು ದೂರು ನೀಡಿದ್ದರು.
ನ್ಯಾಯಮೂರ್ತಿಗಳು, ತಮಿಳುನಾಡು ನಗರ ಸ್ಥಳೀಯ ಸಂಸ್ಥೆಗಳ ನಿಯಮಗಳು 2023 ಪರಿಶೀಲಿಸಿದ ಬಳಿಕ ಮೇಕೆ ಮತ್ತು ಕುರಿಗಳಂತಹ ಪ್ರಾಣಿಗಳ ವಧೆಗೆ ಪರವಾನಗಿ ಹೊಂದಿದ ಶೆಡ್,ಕಟ್ಟಡ ಹೊರತುಪಡಿಸಿ ಇನ್ನಿತರ ಯಾವ ಸ್ಥಳಗಳಲ್ಲಿ ಸಹ ಪ್ರಾಣಿವಧೆಗೆ ಅವಕಾಶ ನೀಡಕೂಡದು ಎಂದು ತಿಲಿಸಿದೆ.
ತೀರ್ಪಿನ ವೇಳೆ ಗೋವುಗಳ ಮಹತ್ವ ತಿಳಿಸಿದ ನ್ಯಾಯಮೂರ್ತಿ
ಗೋವುಗಳು, ಕರುಗಳು ಮತ್ತು ಹಾಲು ನೀಡುವ ಹಾಗೂ ಭಾರ ಎಳೆಯುವ ಜಾನುವಾರುಗಳ ವಧೆ ನಿಷೇಧಕ್ಕೆ ರಾಜ್ಯ ಸರ್ಕಾರ ಕ್ರಮವಹಿಸಬೇಕು. ಸಂವಿಧಾನ ರಚನಾ ಸಭೆಯ ಚರ್ಚೆಗಳ ಸಮಯದಲ್ಲಿಯೂ, ಗೋವು ಪೂಜ್ಯ ಪ್ರಾಣಿಯಾಗಿದ್ದು, ಶ್ರೀಕೃಷ್ಣನ ಕಾಲದಿಂದಲೂ ನಮ್ಮ ನಾಗರಿಕತೆಯೊಂದಿಗೆ ಸಂಬಂಧ ಹೊಂದಿದೆ ಎಂದು ಗೋವುಗಳ ಮಹತ್ವ ತಿಳಿಸಿದರು.
ಹಿಂದಿನ ಹಲವು ಮುಸ್ಲಿಂ ರಾಜರು ತಮ್ಮ ಆಳ್ವಿಕೆಯಲ್ಲಿ ಗೋಹತ್ಯೆಯನ್ನು ನಿಷೇಧಿಸಿದ್ದರು ಎಂದು ನ್ಯಾಯಮೂರ್ತಿ ಸ್ವಾಮಿನಾಥನ್ ಹೇಳಿದರು. ಬಕ್ರೀದ್ನಲ್ಲಿ ಎಲ್ಲಾ ಮುಸ್ಲಿಮರು ಗೋವುಗಳನ್ನು ಬಲಿ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದ್ದನ್ನು ನೆನಪಿಸಿದರು. ಇಂದಿನ ಆದೇಶವನ್ನು ಸರ್ಕಾರ ಅನುಷ್ಠಾನಗೊಳಿಸುವಂತೆ ಪುನರುಚ್ಚರಿಸಿದರು.













Click it and Unblock the Notifications