ದೇವಾಲಯಕ್ಕೆ ಬಂದ ಪೊಲೀಸ್ ಸಿಬ್ಬಂದಿಯನ್ನು 'ಉಗ್ರ' ಎಂದು ಭಾವಿಸಿ ಕೊಲೆ
ಶ್ರೀನಗರ, ಸೆಪ್ಟೆಂಬರ್ 22: "ದೇವಾಯಲಯಕ್ಕೆ ಬಂದ ಪೊಲೀಸ್ ಸಿಬ್ಬಂದಿಯನ್ನು 'ಉಗ್ರ' ಎಂದು ತಪ್ಪಾಗಿ ತಿಳಿದು ಹತ್ಯೆ ಮಾಡಲಾಗಿದೆ," ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನೆ ಜಮ್ಮು ಹಾಗೂ ಕಾಶ್ಮೀರದಲ್ಲಿ ನಡೆದಿದೆ. ಮೃತ ಪೊಲೀಸ್ ಸಿಬ್ಬಂದಿಯನ್ನು ಅಜಯ್ ಧರ್ ಎಂದು ಗುರುತಿಸಲಾಗಿದೆ. ಅಜಯ್ ಧರ್ ಅನ್ನು ಲಂಗತೆ ಹಂದ್ವಾರದ ನಿವಾಸಿ ಎಂದು ಹೇಳಲಾಗಿದೆ.
"ಕಾಶ್ಮೀರದ ದೇವಾಲಯ ಒಂದರಲ್ಲಿ ದೇವಾಲಯದ ಭದ್ರತಾ ಸಿಬ್ಬಂದಿಯೊಬ್ಬರು ಪೊಲೀಸ್ ಸಿಬ್ಬಂದಿಯನ್ನು ಉಗ್ರ ಎಂದು ತಪ್ಪಾಗಿ ಭಾವಿಸಿದ್ದಾರೆ. ಹಾಗೆಯೇ ಉಗ್ರನೊಬ್ಬ ದೇವಾಲಯಕ್ಕೆ ಒತ್ತಾಯಪೂರ್ವಕವಾಗಿ ಪ್ರವೇಶ ಮಾಡಲು ನೋಡುತ್ತಿದ್ದಾನೆ ಎಂದು ಭಾವಿಸಿದ್ದಾರೆ. ಈ ಬೆನ್ನಲ್ಲೇ ಪೊಲೀಸ್ ಸಿಬ್ಬಂದಿಯನ್ನು ಉಗ್ರ ಎಂದು ತಿಳಿದು ಹತ್ಯೆ ಮಾಡಲಾಗಿದೆ," ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ, "ದೇವಾಲಯಕ್ಕೆ ಕಳೆದ ರಾತ್ರಿ ಪೊಲೀಸ್ ಸಿಬ್ಬಂದಿ ತೆರಳಿದ್ದು ದೇವಾಸ್ಥಾನದ ಕದವನ್ನು ತಟ್ಟಿದ್ದಾರೆ. ಈ ಸಂದರ್ಭದಲ್ಲಿ ಈ ಘಟನೆ ನಡೆದಿದೆ," ಎಂದು ಹೇಳಿದ್ದಾರೆ.
"ಪೊಲೀಸ್ ಸಿಬ್ಬಂದಿ ಅಜಯ್ ಧರ್ ರಾತ್ರಿ ಹೊತ್ತಲ್ಲಿ ದೇವಾಲಯಕ್ಕೆ ಹೋಗಿದ್ದು, ದೇವಾಲಯ ಮುಚ್ಚಿದ್ದ ಕಾರಣ ಕದವನ್ನು ತಟ್ಟಿದ್ದಾರೆ. ಈ ಸಂದರ್ಭದಲ್ಲಿ ದೇವಾಲಯದ ಭದ್ರತಾ ಸಿಬ್ಬಂದಿಯು ಗಾಳಿಯಲ್ಲಿ ಗುಂಡು ಹಾರಿಸಿ ಯಾರು ಎಂದು ಕೇಳಿದ್ದಾರೆ. ಆದರೆ ಪೊಲೀಸ್ ಸಿಬ್ಬಂದಿ ಸರಿಯಾಗಿ ಉತ್ತರ ನೀಡದೆ ಮತ್ತೆ ದೇವಾಲಯದ ಕದವನ್ನು ಬಡಿಯುವುದನ್ನು ಮುಂದುವರಿಸಿದ್ದಾರೆ," ಎಂದಿದ್ದಾರೆ.
"ಪೊಲೀಸ್ ಸಿಬ್ಬಂದಿ ತಾನು ಯಾರು ಎಂದು ಹೇಳದೆ ದೇವಾಲಯದ ಕದವನ್ನು ಬಡಿಯುವುದನ್ನು ಮುಂದುವರಿಸಿದ ಕಾರಣ ದೇವಾಲಯದ ಭದ್ರತಾ ಸಿಬ್ಬಂದಿ ದೇವಾಲಯದ ಮೇಲೆ ದಾಳಿ ನಡೆಸಲು ಯಾರೋ ಉಗ್ರರು ಬಂದಿದ್ದಾರೆ ಎಂದು ಭಾವಿಸಿದ್ದಾರೆ. ಇದರಿಂದಾಗಿ ಪೊಲೀಸ್ ಸಿಬ್ಬಂದಿಯ ಹತ್ಯೆ ಮಾಡಿದ್ದಾರೆ. ಇದು ಸಂಪೂರ್ಣವಾಗಿ ತಪ್ಪಾಗಿ ತಿಳಿದ ಮಾಡಲಾದ ಹತ್ಯೆ," ಎಂದು ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿನ ದೇವಾಲಯಗಳಲ್ಲಿ ಪೊಲೀಸರೇ ಭದ್ರತಾ ಸಿಬ್ಬಂದಿಗಳು ಆಗಿರುತ್ತಾರೆ ಎಂದು ಹೇಳಲಾಗಿದೆ. ಹಾಗಿರುವಾಗ ಈ ಪೊಲೀಸ್ ಸಿಬ್ಬಂದಿಯ ಹತ್ಯೆಯು ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ. ಕಳೆದ ಕೆಲವು ತಿಂಗಳಿನಿಂದ ಇಂತಹ ಹಲವಾರು ಘಟನೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ರಾತ್ರಿಯ ಹೊತ್ತಲ್ಲಿ ಓಡಾಡುತ್ತಿದ್ದ ನಾಗರಿಕರನ್ನು ಭಯೋತ್ಪಾದಕರು ಎಂದು ತಿಳಿದು ಹತ್ಯೆ ಮಾಡಿರುವ ಹಲವಾರು ಘಟನೆಗಳು ವರದಿಯಾಗಿದೆ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications