ಬಿಳಿ ಬಾವುಟ ಪ್ರದರ್ಶಿಸಿ ತನ್ನ ಸೈನಿಕರ ಮೃತದೇಹ ಕೊಂಡೊಯ್ದ ಪಾಕಿಸ್ತಾನ
ಜಮ್ಮು ಮತ್ತು ಕಾಶ್ಮೀರ, ಸೆಪ್ಟೆಂಬರ್ 14: ಬಿಳಿ ಬಾವುಟ ಪ್ರದರ್ಶಿಸಿ ಪಾಕಿಸ್ತಾನ ತನ್ನ ಯೋಧರ ಮೃತದೇಹವನ್ನು ಕೊಂಡೊಯ್ದ ಘಟನೆ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ನಡೆದಿದೆ.
ಗಡಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಯೋಧರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನದ ಇಬ್ಬರು ಸೈನಿಕರು ಮೃತಪಟ್ಟಿದ್ದರು.
ಯೋಧರ ಮೃತದೇಹ ಕೊಂಡೊಯ್ಯಲು ಹಸರಸಾಹಸ ಮಾಡಿ ವಿಫಲವಾಗಿ ಬಳಿಕ, ಬಿಳಿ ಬಾವುಟ ಪ್ರದರ್ಶಿಸಿ ಮೃತದೇಹವನ್ನು ಕೊಂಡೊಯ್ದ ಘಟನೆ ಇದಾಗಿದೆ.

ಸೆ. 10 ಮತ್ತು 11 ರಂದು ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿತ್ತು. ಭಾರತೀಯ ಸೇನೆಯ ಪ್ರತಿದಾಳಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಹಾಜಿಪುರ ಸೆಕ್ಟರ್ನ ನಿವಾಸಿ ಸಿಪಾಯಿ ಗುಲಾಮ್ ರಸೂಲ್ ಮತ್ತು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಭವಾಲ್ನಗರದ ನಿವಾಸಿ ಸಿಪಾಯಿ ರಸೂಲ್ ಮೃತಪಟ್ಟಿದ್ದರು.
ಜುಲೈ 30-31 ರಂದು ಕೀರನ್ ಸೆಕ್ಟರ್ನಲ್ಲಿ ಗಡಿ ದಾಟಲು ಪ್ರಯತ್ನಿಸಿದ್ದ 5-7 ಪಾಕ್ ಯೋಧರು ಮತ್ತು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿತ್ತು. ಆದರೆ, ಇವರ ಮೃತದೇಹಗಳನ್ನು ಕೊಂಡೊಯ್ಯಲು ಪಾಕ್ ಸೇನೆ ಪ್ರಯತ್ನಿಸಿರಲಿಲ್ಲ. ಉಗ್ರರು ಕಾಶ್ಮೀರಿ ನಿವಾಸಿಗಳು ಹಾಗೂ ಯೋಧರು ನಾರ್ಥನ್ ಲೈಟ್ ಇನ್ಫೆಂಟ್ರಿ ಪಡೆಗೆ ಸೇರಿದವರಾಗಿರಬಹುದು.
ಹಾಗಾಗಿ ಇವರ ಮೃತದೇಹ ಕೊಂಡೊಯ್ಯಲಿಲ್ಲ. ಆದರೆ, ಈಗ ಮೃತಪಟ್ಟಿದ್ದ ಯೋಧ ಪಂಜಾಬಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದರಿಂದ ಮೃತದೇಹವನ್ನು ಕೊಂಡೊಯ್ದಿದ್ದಾರೆ. ಪಾಕಿಸ್ತಾನದಲ್ಲಿ ಪಂಜಾಬಿ ಮುಸ್ಲಿಮರು ಸೇನೆ, ರಾಜಕೀಯದಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ ಮತ್ತು ಸಾಮಾಜಿಕವಾಗಿಯೂ ಉತ್ತಮ ಸ್ಥಿತಿ ಹೊಂದಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ.
ಭಾರತೀಯ ಸೇನಾ ನೆಲೆಗಳ ಮೇಲೆ 2 ದಿನಗಳ ಕಾಲ ನಿರಂತರವಾಗಿ ದಾಳಿ ನಡೆಸುವ ಮೂಲಕ ತಮ್ಮ ಯೋಧರ ಮೃತದೇಹವನ್ನು ಕೊಂಡೊಯ್ಯಲು ಪಾಕ್ ಸೇನೆ ಪ್ರಯತ್ನಿಸಿತ್ತು. ಆದರೆ, ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿತ್ತು.












Click it and Unblock the Notifications