ಉರುಳಿದ ಎಫ್-16 ಬಗ್ಗೆ ಸುದ್ದಿ ಬಿತ್ತರಿಸದಂತೆ ಪಾಕ್ ಮಾಧ್ಯಮಗಳಿಗೆ ಸೂಚನೆ
ಶ್ರೀನಗರ, ಫೆಬ್ರವರಿ 27 : ಇದೀಗ ಬಂದಿರುವ ಸುದ್ದಿಯ ಪ್ರಕಾರ, ಪಾಕಿಸ್ತಾನದ ವಾಯು ಸೇನೆಯ ಎಫ್-16 ಯುದ್ಧ ವಿಮಾನವನ್ನು ಭಾರತದ ವಾಯು ಸೇನೆಯ ಸುಖೋಯ್-30 ಯುದ್ಧ ವಿಮಾನ ಹೊಡೆದುರುಳಿಸಿದೆ.
ನೌಶೇರಾದ ಲಾಮ್ ಸೆಕ್ಟರ್ ನಲ್ಲಿ ಲಾಮ್ ವ್ಯಾಲಿ ನಲ್ಲಿ ಈ ಘಟನೆ ನಡೆದಿದೆ. ಆದರೆ, ಹೊಡೆದುರುಳಿಸಲಾದ ಯುದ್ಧ ವಿಮಾನದಿಂದ ಪೈಲಟ್ ಪ್ಯಾರಾಶೂಟ್ ಬಳಸಿ ಜಿಗಿದಿದ್ದು, ಆತನ ಪರಿಸ್ಥಿತಿಯ ಬಗ್ಗೆ ಮಾಹಿತಿ ಬಂದಿಲ್ಲ.
ಈ ನಡುವೆ, ಭಾರತದ ವಾಯು ಸೇನೆಯಿಂದ ಧರೆಗುರುಳಿರುವ ಎಫ್-16 ವಿಮಾನದ ಬಗ್ಗೆ ಯಾವುದೇ ಮಾಹಿತಿ ಬಿತ್ತರಿಸದಂತೆ ಪಾಕಿಸ್ತಾನದ ಮಾಧ್ಯಮಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

ಪಾಕ್ ಯುದ್ಧ ವಿಮಾನ ಎಫ್-16 ಪತನ ಖಚಿತ
ಬುಧವಾರ ಮಧ್ಯಾಹ್ನ ವಿದೇಶಾಂಗ ಸಚಿವಾಲಯದ ವಕ್ತಾರರು ಪತ್ರಿಕಾಗೋಷ್ಠಿಯಲ್ಲಿ, ಭಾರತೀಯ ವಾಯು ಸೇನೆ ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಪತನಗೊಳಿಸಿರುವುದಾಗಿ ಖಚಿತಪಡಿಸಿದ್ದಾರೆ. ಆದರೆ, ಭಾರತದ ಪೈಲಟ್ ವೊಬ್ಬರು ಕಾಣೆಯಾಗಿದ್ದು, ತಮ್ಮ ವಶದಲ್ಲಿ ಇರುವುದಾಗಿ ಪಾಕಿಸ್ತಾನ ಹೇಳಿದ್ದರ ಬಗ್ಗೆ ಮಾಹಿತಿ ಖಚಿತಪಡಿಸಿಕೊಂಡ ನಂತರ ಸ್ಪಷ್ಟನೆ ನೀಡುವುದಾಗಿ ತಿಳಿಸಿದ್ದಾರೆ.

ವಿಮಾನ ಹಾರಾಟ ಸ್ಥಗಿತ
ಪಾಕಿಸ್ತಾನದಿಂದ ದಾಳಿ ಆರಂಭವಾಗುತ್ತಿದ್ದಂತೆ ಅಮೃತಸರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ಎರಡೂ ದೇಶಗಳ ನಡುವಿನ ತ್ವೇಷಮಯ ಪರಿಸ್ಥಿತಿ ಉಲ್ಬಣವಾಗುವ ಲಕ್ಷಣಗಳು ಕಂಡುಬಂದಿರುವುದರಿಂದ, ಎರಡೂ ರಾಷ್ಟ್ರಗಳ ನಡುವೆ ಅಂತಾರಾಷ್ಟ್ರೀಯ ವಿಮಾನ ಹಾರಾಟ ಕೂಡ ಸ್ಥಗಿತವಾಗಿದೆ.

ಅಮೃತ್ ಸರ್, ಜಮ್ಮು, ಶ್ರೀನಗರ್, ಲೇಹ್ ಏರ್ ಪೋರ್ಟ್ 3 ತಿಂಗಳು ಬಂದ್
ಪಾಕ್ ನಿಂದ ಬಾಂಬ್ ದಾಳಿ : ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ನೌಶೇರಾ ಪ್ರದೇಶದಲ್ಲಿ ಪಾಕಿಸ್ತಾನದ ವಾಯುಸೇನೆ ಬಾಂಬ್ ಹಾಕಿದೆ. ಯಾವುದೇ ಪ್ರಾಣಹಾನಿ ಆಗಿಲ್ಲ. ಆದರೆ, 9 ವರ್ಷದ ಬಾಲಕನೋರ್ವ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.

ಬಾಲಕೋಟ್, ಮುಜಫರಾಬಾದ್ ಮತ್ತು ಡಾಕೋಟಿ
ಬಾಲಕೋಟ್, ಮುಜಫರಾಬಾದ್ ಮತ್ತು ಡಾಕೋಟಿಯಲ್ಲಿ ಭಾರತದ ವಾಯುಸೇನೆ ಮಂಗಳವಾರ ಉಗ್ರರ ನೆಲೆಗಳನ್ನು ನಾಶ ಮಾಡಿದ ಮೇಲೆ ಪಾಕಿಸ್ತಾನ ಪ್ರಥಮ ಬಾರಿಗೆ ಪ್ರತಿದಾಳಿ ಮಾಡಿದೆ.
ಭಾರತದ ಸೇನಾಪಡೆ ಕೂಡ ಸಂಪೂರ್ಣ ಸಿದ್ಧತೆಯಲ್ಲಿದ್ದು, ಈ ದಾಳಿಗೆ ಕೂಡ ತಿರುಗೇಟು ನೀಡಲು ತಯಾರಾಗಿದೆ. ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಹಲವಾರು ರಾಷ್ಟ್ರಗಳು ಪ್ರತಿದಾಳಿ ನಡೆಸದಂತೆ ಪಾಕಿಸ್ತಾನಕ್ಕೆ ಕಿವಿಮಾತು ಹೇಳಿದ್ದರೂ ಪಾಕ್ ಕೇಳುವ ಸ್ಥಿತಿಯಲ್ಲಿ ಇಲ್ಲ. ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತೆ ವರ್ತಿಸುತ್ತಿದೆ.

ಭಾರತದ ವಾಯು ಸೀಮೆ ನಿಯಮವನ್ನು ಉಲ್ಲಂಘಿಸಿರುವ ಪಾಕಿಸ್ತಾನ
ಭಾರತದ ವಾಯು ಸೀಮೆ ನಿಮಯವನ್ನು ಉಲ್ಲಂಘಿಸಿರುವ ಪಾಕಿಸ್ತಾನದ ವಿಮಾನಗಳು, ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿರುವ ನೌಶೇರಾದಲ್ಲಿ ಬಾಂಬ್ ದಾಳಿ ನಡೆಸಿವೆ. ಭಾರತದ ವಾಯು ಸೇನೆ ಪಾಕ್ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸುವಲ್ಲಿ ಸಫಲವಾದರೂ, ಬಾಂಬ್ ಎಸೆದು ಪರಾರಿಯಾಗಿವೆ. ರಾಯ್ಟರ್ಸ್ ಸುದ್ದಿ ಏಜೆನ್ಸಿ ಪ್ರಕಾರ, ಕನಿಷ್ಠ ಮೂರು ಯದ್ಧ ವಿಮಾನಗಳು ಭಾರತದ ಗಡಿಯನ್ನು ಪ್ರವೇಶಿಸಿದ್ದವು.












Click it and Unblock the Notifications