ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್ಕೌಂಟರ್: ಜೆಇಎಂ ಕಮಾಂಡರ್ ಹತ
ಶ್ರೀನಗರ, ಮಾರ್ಚ್ 12: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಸಲಾದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ನಾಲ್ವರು ಉಗ್ರರನ್ನು ಭಾರತೀಯ ಸೇನೆ ಸದೆಬಡಿದಿದೆ. ಪುಲ್ವಾಮಾದ ಚೆವಾಕ್ಲಾನ್ ಪ್ರದೇಶದಲ್ಲಿ ನಡೆದ ಎನ್ಕೌಂಟರ್ ನಂತರ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಇ-ಮೊಹಮ್ಮದ್ (ಜೆಇಎಂ) ನ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಜಮ್ಮು ಪೊಲೀಸರು ತಿಳಿಸಿದ್ದಾರೆ.ಮೃತ ಉಗ್ರರ ಪೈಕಿ ಪಾಕಿಸ್ತಾನಿ ಜೆಎಂ ಕಮಾಂಡರ್ ಕಮಾಲ್ ಭಾಯ್ ಕೂಡಾ ಇರುವುದು ದೃಢಪಟ್ಟಿದೆ. 2018 ರಿಂದ ಭಯೋತ್ಪಾದನಾ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ ಎಂದು ತಿಳಿದು ಬಂದಿದೆ.
ಜಮ್ಮು ಮತ್ತು ಕಾಶ್ಮೀರದ ಗಂದರ್ಬಾಲ್ನ ಸೆರ್ಚ್ ಪ್ರದೇಶದಲ್ಲಿ ನಡೆದ ಎನ್ಕೌಂಟರ್ ನಂತರ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ನೊಂದಿಗೆ ನಂಟು ಹೊಂದಿರುವ ಮತ್ತೊಬ್ಬ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದೆ. ಈ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಂದ್ವಾರದ ರಾಜ್ವಾರ್ ಪ್ರದೇಶದ ನೆಚಮಾದಲ್ಲಿ ನಡೆದ ಎನ್ಕೌಂಟರ್ನಲ್ಲಿ ಒಬ್ಬ ಎಲ್ಇಟಿ ಭಯೋತ್ಪಾದಕನನ್ನು ಕೊಲ್ಲಲಾಗಿದೆ.

ಕಾಶ್ಮೀರ ವಲಯ ಪೊಲೀಸರು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಿಂದ ಟ್ವೀಟ್ ಮಾಡಿ, "ಹಂದ್ವಾರದ ರಾಜ್ವಾರ್ ಪ್ರದೇಶದ ನೆಚಮಾದಲ್ಲಿ ಎನ್ಕೌಂಟರ್ ಪ್ರಾರಂಭವಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯದಲ್ಲಿವೆ. ಹೆಚ್ಚಿನ ವಿವರಗಳನ್ನು ಅನುಸರಿಸಲಾಗುತ್ತದೆ. @JmuKmrPolice."
ಶುಕ್ರವಾರ ರಾತ್ರಿ ಭದ್ರತಾ ಪಡೆಗಳು ನಾಲ್ಕೈದು ಸ್ಥಳಗಳಲ್ಲಿ ಜಂಟಿ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಇಬ್ಬರು ಜೆಇಎಂ ಭಯೋತ್ಪಾದಕರು ಮತ್ತು ಇಬ್ಬರು ಎಲ್ಇಟಿ ಭಯೋತ್ಪಾದಕರನ್ನು ಕೊಂದಿದ್ದಾರೆ ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ಹೇಳಿದ್ದಾರೆ. ಭದ್ರತಾ ಪಡೆಗಳು ಒಬ್ಬ ಭಯೋತ್ಪಾದಕನನ್ನು ಜೀವಂತವಾಗಿ ಹಿಡಿದಿವೆ. ಹಂದ್ವಾರ ಮತ್ತು ಪುಲ್ವಾಮಾದಲ್ಲಿ ಎನ್ಕೌಂಟರ್ಗಳು ಮುಗಿದಿವೆ.
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಸರಪಂಚ್ನ ಹತ್ಯೆಯ ನಂತರ ಎನ್ಕೌಂಟರ್ಗಳು ನಡೆದಿವೆ. ಸ್ವತಂತ್ರ ಸರಪಂಚ್ ಆಗಿದ್ದ ಶಬೀರ್ ಅಹ್ಮದ್ ಮಿರ್ ಮೇಲೆ ರಾತ್ರಿ 8.50ರ ಸುಮಾರಿಗೆ ಅಡೌರಾದ ಅವರ ನಿವಾಸದ ಬಳಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ನಾಗರಿಕರ, ವಿಶೇಷವಾಗಿ ಹಿಂದೂಗಳು ಮತ್ತು ಸಿಖ್ಖರು, ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಹತ್ಯೆ ಮಾಡಿದ ನಂತರ ಭದ್ರತಾ ಪಡೆಗಳು ಕಣಿವೆಯಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.












Click it and Unblock the Notifications