ಕಾಶ್ಮೀರದಲ್ಲಿ ಉಗ್ರನ ಹತ್ಯೆ, ಹಿಂಸಾಚಾರ ಭುಗಿಲೇಳುವ ಸಾಧ್ಯತೆ, ಕಟ್ಟೆಚ್ಚರ
ಶ್ರೀನಗರ, ಮೇ 23 : ಝಾಕಿರ್ ಮೂಸಾ ಎಂದೇ ಖ್ಯಾತಿ ಗಳಿಸಿದ್ದ ಉಗ್ರ ಝಾಕಿರ್ ರಶೀದ್ ಭಟ್ ನನ್ನು ಭಾರತೀಯ ಸೇನೆ ಹೊಡೆದುರುಳಿಸಿದ ನಂತರ, ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆಳುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕರ್ಫ್ಯೂ ಹೇರಲಾಗಿದೆ ಮತ್ತು ಶುಕ್ರವಾರ ಶಾಲಾಕಾಲೇಜುಗಳಿಗೆ ರಜಾ ನೀಡಲಾಗಿದೆ.
ಉಗ್ರ ಝಾಕಿರ್ ಮೂಸಾನ ಬಗ್ಗೆ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಜಾಲ ಬೀಸಿದ್ದ ಭದ್ರತಾ ಪಡೆ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ, ಆತನನ್ನು ದಕ್ಷಿಣ ಕಾಶ್ಮೀರದ ಪುಲ್ವಾಮಾ ಬಳಿಯ ತ್ರಾಲ್ ನಲ್ಲಿರುವ ಆತನ ನಿವಾಸದ ಹತ್ತಿರ ಗುರುವಾರ ಹತ್ಯೆಗೈಯಲಾಯಿತು.
ಜಮ್ಮು-ಕಾಶ್ಮೀರದಲ್ಲಿ IED ಸ್ಫೋಟ, ಓರ್ವ ಸೈನಿಕ ಹುತಾತ್ಮ
ಮೊದಲು ತ್ರಾಲ್ ನಲ್ಲಿರುವ ನಿವಾಸದ ಬಳಿ ಆತನನ್ನು ಹುಡುಕಿದ ಭದ್ರತಾ ಪಡೆ ಮತ್ತು ಝಾಕಿರ್ ಮೂಸಾನ ನಡುವೆ ಕೆಲಸಮಯ ಗುಂಡಿನ ಚಕಮಕಿ ನಡೆದಿದೆ. ಈ ದಾಳಿಯಲ್ಲಿ ಆತ ಹತನಾಗಿದ್ದಾನೆ.
ವರದಿಗಳ ಪ್ರಕಾರ, ಭಾರತೀಯ ಸೇನೆಯ 42 ಆರ್ ಆರ್, ಜಮ್ಮು ಮತ್ತು ಕಾಶ್ಮೀರದ ಸ್ಪೆಷಲ್ ಆಪರೇಷನ್ ಗ್ರೂಪ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ ಜಂಟಿ ಕಾರ್ಯಾಚರಣೆಯಲ್ಲಿ ಆತನ ತ್ರಾಲ್ ಗ್ರಾಮದಲ್ಲಿ ಸಿಕ್ಕಿಬಿದ್ದಿದ್ದಾನೆ.
ತನ್ನ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಯುತ್ತಿದ್ದಂತೆ ಆತ ಮನೆಯಿಂದ ಪರಾರಿಯಾಗಿ ಹತ್ತಿರದ ಕಾಡು ಸೇರಿಕೊಂಡಿದ್ದ. ಆದರೆ, ಜಂಟಿ ಪಡೆ ಕಾಡಿನಲ್ಲಿಯೂ ಸುತ್ತುವರಿದಿದ್ದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಶರಣಾಗುವಂತೆ ಜಂಟಿ ಪಡೆ ಆತನನ್ನು ಕೇಳಿದರೂ ಆತ ಬಗ್ಗಿಲ್ಲ. ಹೀಗಾಗಿ ಗುಂಡಿನ ದಾಳಿ ನಡೆಸಬೇಕಾಯಿತು.
ಜಮ್ಮು ಕಾಶ್ಮೀರದಲ್ಲಿ ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ಹತ್ಯೆ
ಪಂಜಾಬ್ ನಲ್ಲಿ ಇಂಜಿನಿಯರಿಂಗ್ ಮಾಡುತ್ತಿರುವಾಗಲೇ ಆತ ಹಿಜ್ಬುಲ್ ಮುಜಾಹಿದ್ದಿನ್ ಸೇರಿಕೊಂಡಿದ್ದ. ಬುರ್ಹನ್ ವಾನಿಯನ್ನು ಭಾರತೀಯ ಸೇನೆ ಹತ್ಯೆಗೈದ ನಂತರ ಆತ ಉಗ್ರಪಡೆಯ ನೇತೃತ್ವ ಝಾಕಿರ್ ವಹಿಸಿಕೊಂಡಿದ್ದ. ನಂತರ ಅಲ್ ಖೈದಾ ಬೆಂಬಲಿಸುತ್ತಿದ್ದ ಅನ್ಸಾರ್ ಘಜ್ವತ್-ಉಲ್-ಹಿಂದ್ ಎಂಬ ಸಂಘಟನೆಯನ್ನು ಆತನೇ ಹುಟ್ಟುಹಾಕಿದ್ದ.
ಆತನ ಹತ್ಯೆಯಾದ ನಂತರ ಕಾಶ್ಮೀರದ ಬಹುತೇಕ ಕಡೆ ಇಂಟರ್ನೆಟ್ ಸಂಪರ್ಕವನ್ನು ಕಡಿದು ಹಾಕಲಾಗಿದೆ. ಮತ್ತೆ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಇರುವುದರಿಂದ ಇಡೀ ಕಣಿವೆಯಲ್ಲಿ ಇಂಟರ್ನೆಟ್ ಸಂಪರ್ಕ ಕತ್ತರಿಸಲೂ ತಿಳಿಸಲಾಗಿದೆ.