ನನಗೆ ಮತ್ತೆ ಗೃಹಬಂಧನ, ಸರ್ಕಾರ ನಾಗರಿಕರನ್ನು ಕೊಲ್ಲುತ್ತಿದೆ: ಮೆಹಬೂಬ ಮುಫ್ತಿ
ಶ್ರೀನಗರ, ನವೆಂಬರ್ 18: ಪಿಡಿಪಿ ಮುಖ್ಯಸ್ಥೆ ಹಾಗೂ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ತಾನು ಮತ್ತೆ ಗೃಹ ಬಂಧನದಲ್ಲಿ ಇದ್ದೇನೆ ಎಂದು ಆರೋಪ ಮಾಡಿದ್ದಾರೆ. ಹಾಗೆಯೇ ತನ್ನ ಪಕ್ಷದ ಇಬ್ಬರನ್ನು ಪೊಲೀಸರು ಬಂಧನ ಮಾಡಿದ್ದಾರೆ ಎಂದು ಕೂಡಾ ಮೆಹಬೂಬ ಮುಫ್ತಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಪಿಡಿಪಿ ಪಕ್ಷದ ಇಬ್ಬರು ನಾಯಕರುಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ ಹಾಗೂ ನನ್ನನ್ನು ಮತ್ತೆ ಗೃಹ ಬಂಧನದಲ್ಲಿ ಇರಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.
'ಮತ್ತೆ ಗೃಹಬಂಧನ, ಇದು ಕಾಶ್ಮೀರದ ನೈಜ ಚಿತ್ರಣ' ಎಂದ ಮುಫ್ತಿ
ಪಿಡಿಪಿ ಪಕ್ಷದ ವಕ್ತಾರರಾದ ಸುಹೈಲ್ ಬುಖಾರಿಯಾ ಹಾಗೂ ನಜ್ಮು ಸಿದ್ದಿಕ್ರನ್ನು ಬಂಧನ ಮಾಡಲಾಗಿದೆ ಎಂದು ದೂರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ತನ್ನ ಮನೆಯ ಮುಖ್ಯ ದ್ವಾರಕ್ಕೆ ಬೀಗ ಹಾಕಿರುವ ಅಡ್ಡಲಾಗಿ ಪೊಲೀಸರು ವಾಹನವನ್ನು ನಿಲ್ಲಿಸಿರುವ ಚಿತ್ರಗಳನ್ನು ಕೂಡಾ ಹಾಕಿದ್ದಾರೆ. "ನನ್ನನ್ನು ಮತ್ತೆ ಗೃಹ ಬಂಧನದಲ್ಲಿ ಇರಿಸಲಾಗಿದೆ. ಪಿಡಿಪಿ ವಕ್ತಾರರಾದ ಸುಹೈಲ್ ಬುಖಾರಿಯಾ ಹಾಗೂ ನಜ್ಮು ಸಿದ್ದಿಕ್ರನ್ನು ಬಂಧನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಈ ಸಂದರ್ಭದಲ್ಲೇ ಹೈದರ್ಪೊರಾ ಎನ್ಕೌಂಟರ್ ಬಗ್ಗೆ ಉಲ್ಲೇಖ ಮಾಡಿದ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ, "ಮುಗ್ಧ ನಾಗರಿಕರನ್ನು ಮಾನವ ಶೀಲ್ಡ್ಗಳಾಗಿ ಬಳಸಲಾಗುವ ಮಾದರಿ ಹಾಗೂ ಆ ಜನರಿಗೆ ಯೋಗ್ಯವಾದ ಅಂತ್ಯಕ್ರಿಯೆಯ ಹಕ್ಕನ್ನು ನಿರಾಕರಿಸುವುದು ಕೇಂದ್ರ ಸರ್ಕಾರ ಅಮಾನವೀಯತೆಯನ್ನು ಆಳಕ್ಕೆ ಇಳಿದಿದೆ ಎಂಬುವುದನ್ನು ತೋರಿಸುತ್ತದೆ," ಎಂದು ಟೀಕೆ ಮಾಡಿದ್ದಾರೆ.
"ಮೊದಲಿನಿಂದಲೂ ಕೇಂದ್ರ ಸರ್ಕಾರವೂ ಸುಳ್ಳನೇ ಹೇಳುತ್ತಾ ಬಂದಿದೆ. ಅವರು ತಾವು ಮಾಡಿದ ತಪ್ಪಿನ, ಕ್ರಿಯೆಯ ಜವಾಬ್ದಾರಿಯನ್ನು ಹೊರಲು ಬಯಸಲ್ಲ, ಅದರಿಂದಾಗಿ ಈ ಕೇಂದ್ರ ಸರ್ಕಾರವು ಅನ್ಯಾಯ ಹಾಗೂ ದೌರ್ಜನ್ಯಗಳ ವಿರುದ್ಧವಾಗಿ ಮಾತನಾಡುವವರ ಧ್ವನಿಯನ್ನು ಹತ್ತಿಕ್ಕುವ ಯತ್ನವನ್ನು ಮಾಡುತ್ತಾರೆ," ಎಂದು ಕೂಡಾ ಆರೋಪ ಮಾಡಿದ್ದಾರೆ.
''ಆರ್ಯನ್ ಗುರಿಯಾಗಲು, ಖಾನ್ ಎಂಬ ಸರ್ ನೇಮ್ ಕಾರಣ'': ಮುಫ್ತಿ
"ಈ ಸರ್ಕಾರವು ಉಗ್ರಗಾಮಿಗಳ ಹೆಸರಿನಲ್ಲಿ ನಾಗರಿಕರನ್ನು ಹತ್ಯೆ ಮಾಡುವ ಕಾರಣದಿಂದಾಗಿ ನಾನು ಪ್ರತಿಭಟನೆ ನಡೆಸುತ್ತಿದ್ದೇನೆ. ಉಗ್ರಗಾಮಿಗಳನ್ನು ಕೊಲ್ಲುತ್ತಿದ್ದಾರೆಯೇ ಎಂದು ಯಾರಿಗೂ ತಿಳಿದಿಲ್ಲ. ಇತ್ತೀಚೆಗೆ ಮೂವರು ನಾಗರಿಕನರನ್ನು ಕೊಲೆ ಮಾಡಲಾಗಿದೆ. ಸರ್ಕಾರ ಈ ನಾಗರಿಕರ ಮೃತ ದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಿಲ್ಲ," ಎಂದು ಮೆಹಬೂಬ ಮುಫ್ತಿ ಹೇಳಿದ್ದಾರೆ.
ನವೆಂಬರ್ 15 ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹೈದರ್ಪೋರಾ ಪ್ರದೇಶದಲ್ಲಿ ಭದ್ರತೆ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಇಲ್ಲಿನ ಖಾಸಗಿ ಕಟ್ಟಡದಲ್ಲಿ ಅಕ್ರಮ ಕಾಲ್ ಸೆಂಟರ್ ಒಂದರಲ್ಲಿ ಈ ಉಗ್ರರು ಇದ್ದಾರೆ ಎಂದು ಸ್ಥಳೀಯ ಪೊಲೀಸರಿಗೆ ಮಾಹಿತಿ ದೊರೆತ ನಂತರ ದಾಳಿ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಗುಂಡಿನ ಚಕಮಕಿ ನಡೆದಿದೆ. ಆದರೆ ಈ ಎನ್ಕೌಂಟರ್ನಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಮೆಹಬೂಬ ಮುಫ್ತಿ ಆರೋಪ ಮಾಡಿದ್ದಾರೆ. ಈ ಎನ್ಕೌಂಟರ್ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಕೂಡಾ ಆಗ್ರಹ ಮಾಡಿದ್ದಾರೆ.
Again under house arrest & PDPs @SAAQQIIB & @Suhail_Bukhari too have been arrested. The pattern of using innocent civilians as human shields & then denying their families the right to a decent burial shows that GOI has plumbed new depths of inhumanity. pic.twitter.com/COnUZdJnix
— Mehbooba Mufti (@MehboobaMufti) November 18, 2021
ಹಲವಾರು ಬಾರಿ ಗೃಹ ಬಂಧನಕ್ಕೆ ಒಳಗಾದ ಮುಫ್ತಿ
ಕೇಂದ್ರ ಸರ್ಕಾರದ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಹಲವಾರು ನಾಯಕರನ್ನು, ಸಾಮಾಜಿಕ ಕಾರ್ಯಕರ್ತರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಮತ್ತು ನ್ಯಾಶ್ನಲ್ ಕಾನ್ಫಿರೆನ್ಸ್ ಉಖಂಡ ಒಮರ್ ಅಬ್ದುಲ್ಲಾ ಅವರನ್ನು ಬಂಧಿಸಲಾಗಿತ್ತು. ಮೆಹಬೂಬ ಮುಫ್ತಿರನ್ನು 2019 ರಂದು ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ) ಅಡಿಯಲ್ಲಿ ಬಂಧನ ಮಾಡಲಾಗಿತ್ತು. ಯಾವುದೇ ಒಂದು ನಿಗದಿತ ವಿಚಾರವಿಲ್ಲದೆ ವ್ಯಕ್ತಿಯನ್ನು ಮೂರು ತಿಂಗಳುಗಳ ಕಾಲ ಬಂಧನದಲ್ಲಿ ಇಡಲು ಕಾಯ್ದೆಯು ಅವಕಾಶ ನೀಡುತ್ತದೆ. ಆದರೆ ಮೆಹಬೂಬ ಮುಫ್ತಿರನ್ನು ಒಂದು ವರ್ಷಕ್ಕೂ ಅಧಿಕ ಕಾಲ ಬಂಧನದಲ್ಲಿ ಇರಿಸಲಾಗಿತ್ತು.
ಈ ಹಿನ್ನೆಲೆ ಮೆಹಬೂಬ ಮುಫ್ತಿ ಮಗಳು ಇಲ್ತಿಜಾ ಮುಫ್ತಿ ಸಲ್ಲಿಕೆ ಮಾಡಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಮೆಹಬೂಬ ಮುಫ್ತಿಗೆ ಬಿಡುಗಡೆಗೆ ಸೂಚಿಸಿತ್ತು. ಮುಫ್ತಿ ಅವರನ್ನು ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಚೆಷ್ಮಾ ಶಹಿ ಅತಿಥಿ ಗೃಹದಲ್ಲಿ ಇರಿಸಲಾಗಿತ್ತು. ಬಳಿಕ ಶ್ರೀನಗರದ ಬೇರೆ ಸರ್ಕಾರಿ ಅತಿಥಿ ಗೃಹಕ್ಕೆ ವರ್ಗಾಯಿಸಲಾಗಿತ್ತು. ನಂತರ ಅವರನ್ನು ಮನೆಗೆ ಕರೆದುಕೊಂಡು ಹೋಗಿ ಗೃಹ ಬಂಧನದಲ್ಲಿ ಮುಂದುವರಿಸಲಾಗಿತ್ತು. ಮುಫ್ತಿ ಬಂಧನವನ್ನು ಮಗಳು ಇಲ್ತಿಜಾ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಇನ್ನು ಬಿಡುಗಡೆಯಾದ ಬಳಿಕ ತನ್ನನ್ನು ಮತ್ತೆ ಗೃಹ ಬಂಧನದಲ್ಲಿ ಇರಿಸಿರುವ ಹಾಗೂ ವಶಕ್ಕೆ ಪಡೆದಿರುವ ಬಗ್ಗೆ ಮೆಹಬೂಬ ಮುಫ್ತಿ ಹಲವಾರು ಬಾರಿ ಆರೋಪ ಮಾಡಿದ್ದಾರೆ. ಟ್ವಿಟ್ಟರ್ನಲ್ಲಿ ಈ ಬಗ್ಗೆ ಮೆಹಾಬೂಬ ಮುಫ್ತಿ ಮಾಹಿತಿ ನೀಡಿದ್ದಾರೆ.
(ಒನ್ಇಂಡಿಯಾ ಸುದ್ದಿ)