ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ
ಶ್ರೀನಗರ, ಆಗಸ್ಟ್ 05: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿರುವುದಲ್ಲದೆ, ತಮ್ಮನ್ನು ಗೃಹಬಂಧನಕ್ಕೊಳಪಡಿಸಿದ ಕೇಂದ್ರ ಎನ್ ಡಿಎ ಸರ್ಕಾರದ ಕ್ರಮವನ್ನು ಕಣಿವೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಕಟು ಶಬ್ದಗಳಿಂದ ಟೀಕಿಸಿದ್ದಾರೆ.
"ಸರ್ಕಾರದ ಉದ್ದೇಶ ಸ್ಪಷ್ಟ. ಅವರಿಗೆ ಮುಸ್ಲಿಂ ಬಹುಸಂಖ್ಯಾತರಾಗಿರುವ ರಾಜ್ಯದ ಹಿಡಿತವನ್ನು ಪಡೆದು, ಮುಸ್ಲಿಮರ ಸಬಲೀಕರಣವನ್ನು ತಪ್ಪಿಸಬೇಕಿದೆ. ನಮ್ಮನ್ನು ಗೃಹಬಂಧನದಲ್ಲಿರಿಸಿ ನಾವು ಯಾರೊಂದಿಗೂ ಮಾತನಾಡಲು ಅವಕಾಶವಾಗದಂತೆ ಮಾಡಲಾಗಿದೆ. ಈ ಭಾರತವನ್ನು ನಾವು ಒಪ್ಪಿಕೊಳ್ಳುತ್ತೇವಾ?" ಎಂದು ಮುಫ್ತಿ ಪ್ರಶ್ನಿಸಿದ್ದಾರೆ.
"ಕಾಶ್ಮೀರದ ಜನರ ಹಣೆಯಲ್ಲಿ ಏನು ಬರೆದಿದೆ ಎಂಬುದು ನಮಗೆ ಗೊತ್ತಿಲ್ಲ. ಆದರೆ ಅಲ್ಲಾಹ್ ಎಂದಿಗೂ ಒಳಿತಾಗುವಂತೆಯೇ ಮಾಡುತ್ತಾನೆ ಎಂಬ ನಂಬಿಕೆ ಇದೆ. ಅದು ಈಗಲೇ ನಮಗೆ ಅರ್ಥವಾಗದೆ ಇರಬಹುದು. ನಂತರ ತಿಳಿಯುತ್ತದೆ. ಎಲ್ಲರೂ ಸುರಕ್ಷಿತರಾಗಿರಿ" ಎಂದು ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.
ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಮತ್ತು ನ್ಯಾಶ್ನಲ್ ಕಾನ್ಫಿರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ಪರಸ್ಪರ ವಿರೋಧಿ ಪಕ್ಷಗಳಾಗಿದ್ದರೂ ಜಮ್ಮು-ಕಾಶ್ಮೀರದ ವಿಷಯದಲ್ಲಿ ಕೇಂದ್ರ ಸರ್ಕಾರ ಇಡುತ್ತಿರುವ ನಡೆಯ ವಿರುದ್ಧ ಒಂದಾಗಿ ಹೋರಾಟ ನಡೆಸುತ್ತಿದ್ದಾರೆ. ಲೋಕಸಭೆಯಲ್ಲಿ ಇಂದು ಗೃಹಸಚಿವ ಅಮಿತ್ ಶಾ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವ ಮಸೂದೆ ಮಂಡಿಸಿದರು. ಇಡಿ ರಾಷ್ಟ್ರದಲ್ಲೂ ಇದು ಕೋಲಾಹಲ ಎಬ್ಬಿಸುವ ಸಾಧ್ಯತೆ ಇದ್ದು, ಈ ಕಾರಣದಿಂದಲೇ ಕಳೆದ ಕೆಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇನೆಯನ್ನು ಜಮಾವಣೆ ಮಾಡಲಾಗಿದೆ.
ಕೇಂದ್ರ ಸರ್ಕಾರದ ಈ ಮಹತ್ವದ ನಡೆಯನ್ನು ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ ಖಂಡಿಸಿದ್ದಾರೆ.

ಈ ಭಾರತವನ್ನು ನಾವು ಒಪ್ಪಿಕೊಳ್ಳುತ್ತೇವಾ?
"ನಾನು ಗೃಹಬಂಧನದಲ್ಲಿದ್ದೇನೆ. ಯಾರನ್ನೂ ಭೇಟಿಯಾಗುವಂತೆಯೂ ಇಲ್ಲ, ಯಾರನ್ನೂ ಸಂಪರ್ಕಿಸಲೂ ಆಗುತ್ತಿಲ್ಲ. ಈ ಭಾರತವನ್ನು ನಾವು ಒಪ್ಪಿಕೊಳ್ಳುತ್ತೇವಾ? ಸಂಸತ್ತನ್ನು ಪ್ರಜಾಪ್ರಭುತ್ವದ ದೇವಾಲಯ ಎಂದು ನಂಬಿರುವ ನನ್ನಂಥವರಿಗೆ ಈ ನಡೆ ತೀವ್ರ ಬೇಸರವನ್ನುಂಟು ಮಾಡಿದೆ. ಇದು ಕಾಶ್ಮೀರಿಗಳ ಭಾವನೆಗೆ ನೋವುಂಟು ಮಾಡಿದೆ. ಸರ್ಕಾರದ ಉದ್ದೇಶ ಸ್ಪಷ್ಟ. ಅವರಿಗೆ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಜಮ್ಮು ಮತ್ತು ಕಾಶ್ಮೀರವನ್ನು ತನ್ನ ಹಿಡಿತದಲ್ಲಿ ಪಡೆಯಬೇಕಿದೆ. ಮುಸ್ಲಿಮರ ಸಬಲೀಕರಣವಾಗದಂತೆ ಮಾಡಬೇಕಿದೆ. ಮತ್ತು ಇಲ್ಲಿನ ಜನರನ್ನು ಉಗ್ರರನ್ನಾಗಿ ಮಾಡಬೇಕಿದೆ. ಭಾರತವು ಕಾಶ್ಮೀರಕ್ಕೆ ನೀಡಿದ ಮಾತನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ"- ಮೆಹಬೂಬಾ ಮುಫ್ತಿ

ಕರಾಳ ದಿನ
"ಈ ದಿನವನ್ನು ಭಾರತೀಯ ಪ್ರಜಾಪ್ರಭುತ್ವದ ಕರಾಳ ದಿನ ಎಂದು ಗುರುತು ಮಾಡಬಹುದು. 1947 ರಲ್ಲಿ ಜಾರಿಗೆ ತಂದಿದ್ದ ದ್ವಿರಾಷ್ಟ್ರ ಪದ್ಧತಿಯನ್ನು ಇದು ಮೂಲೆಗೆ ತೂರಿದೆ. ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ್ದು ಅಕ್ರಮ ಮತ್ತು ಅಸಾಂವಿಧಾನಿಕ. ವಾಜಪೇಯಿ ಅವರು ಬಿಜೆಪಿ ನಾಯಕರಾಗಿದ್ದರೂ ಕಾಶ್ಮೀರಿಗಳೊಂದಿಗೆ ಬೆರೆತು ಅವರ ಪ್ರೀತಿ ಗಳಿಸಿದ್ದರು. ಇಂದು ಅವರ ಗೈರು ಎದ್ದು ಕಾಣುತ್ತಿದೆ. ಇಂದು ಕಾಶೀರ ಎದುರಿಸುತ್ತಿರುವ ಪರಿಸ್ಥಿತಿಯನ್ನು ಸಂಭ್ರಮಿಸುತ್ತಿರುವವರು ನಿಜಕ್ಕೂ ವಿಘ್ನಸಂತೋಷಿಗಳು"- ಮೆಹಬೂಬಾ ಮುಫ್ತಿ

ಶಾಂತಿ ಕಾಪಾಡಿ
ಕಾಶ್ಮೀರದ ಬಗ್ಗೆ ನಾನು ಯೋಚಿಸುವಾಗ ಕಾರ್ಗಿಲ್, ಲಡಾಕ್ ಮತ್ತು ಜಮ್ಮು ಜನರ ಬಗ್ಗೆ ನಾನು ಚಿಂತಿಸುತ್ತೇನೆ. ನಿಮ್ಮ ಹಣೆಯಲ್ಲಿ ಏನು ಬರೆದಿದೆಯೋ ನನಗೆ ಗೊತ್ತಿಲ್ಲ, ಆದರೆ ಒಳ್ಳೆಯದನ್ನು ಬರೆಯಲಾಗಿದೆ ಎಂದು ನನಗನ್ನಿಸುತ್ತಿಲ್ಲ! ಯಾವುದೋ ಅಪಾಯ ಕಾದಿದೆ. ಈ ನಡೆಯಿಂದ ನಿಮ್ಮೆಲ್ಲರಿಗೂ ನೋವಾಗಿದೆ ಎಂಬುದು ನನಗೆ ಗೊತ್ತು. ಆದರೆ ದಯವಿಟ್ಟು ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ. ಅಲ್ಲಾಹ್ ಎಲ್ಲರಿಗೂ ಒಳಿತನ್ನೇ ಮಾಡುತ್ತಾನೆ"- ಒಮರ್ ಅಬ್ದುಲ್ಲಾ

ಅವರಿಗೆ ರಾಜ್ಯದ ಒಳಿತು ಬೇಕಿಲ್ಲ!
ರಾಜ್ಯದ ಬಗ್ಗೆ ಯಾರ ಮನಸ್ಸಿನಲ್ಲಿ ಒಳಿತಿನ ಭಾವವಿಲ್ಲವೋ ಅವರು ಮಾತ್ರವೇ ಹಿಂಸೆಗೆ ಕುಮ್ಮಕ್ಕು ನೀಡುತ್ತಾರೆ. ಜಮ್ಮು ಮತ್ತು ಕಾಶ್ಮೀರ ಒಪ್ಪಿಕೊಂಡಿದ್ದ ಭಾರತ ಇದಲ್ಲ. ಆದರೂ ಮುಂದೆ ಒಳಿತಾಗುತ್ತದೆ ಎಂಬ ಮಾತಿನಲ್ಲಿ ನಾವು ನಂಬಿಕೆ ಇಡೋಣ"- ಒಮರ್ ಅಬ್ದುಲ್ಲಾ

ಸಂಸತ್ತಿನಲ್ಲೇ ಸಂವಿಧಾನದ ಪ್ರತಿ ಹರಿದ ಸಂಸದ
370 ನೇ ವಿಧಿಯ ರದ್ದತಿಯ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿದ್ದ ಬೇಳೆ ಪಿಡಿಪಿ ಸಂಸದ ಮಿರ್ ಮೊಹಮ್ಮದ್ ಫಯಾಜ್, ಭಾರತೀಯ ಸಂವಿಧಾನದ ಪ್ರತಿಯೊಂದನ್ನು ಸಂಸತ್ತಿನಲ್ಲಿ ಹರಿಯುವ ಮೂಲಕ ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರ ಕೆಂಗಣ್ಣಿಗೆ ಗುರಿಯಾದರು. ಅವರನ್ನು ಸದನದಿಂದ ಆಚೆ ಕಳಿಸಲಾಯ್ತು.

ಖುರ್ತಾ ಹರಿಸು ಪ್ರತಿಭಟನೆ
ರಾಜ್ಯ ಸಭೆಯಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸುವ ಮಸೂದೆಯನ್ನು ಮಂಡಿಸುತ್ತಿದ್ದಂತೆಯೇ ಪಿಡಿಪಿಯ ಇಬ್ಬರು ರಾಜ್ಯಸಭಾ ಸಂಸದರಾದ ನಾಜಿರ್ ಅಹಮ್ನದ್ ಲಾವೇ ಮತ್ತು ಎಂಎಂ ಫಯಾಜ್ ತಮ್ಮ ಖುರ್ತಾ ಹರಿಸುವ ಖಂಡಿಸಿದರು.












Click it and Unblock the Notifications