ಉದ್ದೇಶಿತ ಹತ್ಯೆ ವಿರೋಧಿಸಿ ಖೀರ್ ಭವಾನಿ ಉತ್ಸವ ಬಹಿಷ್ಕರಿಸಿದ ಕಾಶ್ಮೀರಿ ಪಂಡಿತರು
ಶ್ರೀನಗರ ಜೂನ್ 7: ಕಾಶ್ಮೀರದ ಕಾಶ್ಮೀರಿ ಪಂಡಿತ್ ನೌಕರರು ಕಣಿವೆಯಲ್ಲಿ ಉದ್ದೇಶಿತ ಹತ್ಯೆಗಳನ್ನು ವಿರೋಧಿಸಿ ಈ ವರ್ಷದ ಮಾತಾ ಖೀರ್ ಭವಾನಿ ಉತ್ಸವವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಮಾತಾ ಖೀರ್ ಭವಾನಿ ಹಬ್ಬವನ್ನು ಜೂನ್ 8 ರಂದು ಬುಧವಾರ ಆಚರಿಸಲಾಗುತ್ತದೆ. ಮೊದಲು ಆಚರಣೆಯ ಭಾಗವಾಗಿ ದೇಶಾದ್ಯಂತದ ಸಾವಿರಾರು ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತರು ಪ್ರತಿ ವರ್ಷ ಕಾಶ್ಮೀರದ ಮಾತಾ ಖೀರ್ ಭವಾನಿ ದೇವಸ್ಥಾನದಲ್ಲಿ ಸೇರುತ್ತಿದ್ದರು. ಆದರೆ ಇತ್ತೀಚೆಗೆ ಕಾಶ್ಮೀರಿ ಪಂಡಿತ ರಾಹುಲ್ ಭಟ್ ಸೇರಿದಂತೆ ಸ್ಥಳೀಯರಲ್ಲದವರು ಮತ್ತು ಹಿಂದೂಗಳ ಉದ್ದೇಶಿತ ಹತ್ಯೆಗಳ ನಂತರ ಕಾಶ್ಮೀರಿ ಪಂಡಿತರು ಹಬ್ಬವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ಭಯೋತ್ಪಾದಕರ ದಾಳಿ ಹೆಚ್ಚಾಗಿದ್ದು ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಕಾಶ್ಮೀರದೆಲ್ಲೆಡೆ ವಿಶೇಷವಾಗಿ ಗಡಿ ಭಾಗದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಶಂಕಿತರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ. ಜೀವ ಬೆದರಿಕೆಯಿಂದಾಗಿ ಈಗಾಗಲೇ ಕಾಶ್ಮೀರಿ ಪಂಡಿತರನ್ನು ಜಮ್ಮುಗೆ ಸ್ಥಳಾಂತರಿಸಲಾಗಿದೆ. ಆದರೂ ಭಯೋತ್ಪಾದಕರ ದಾಳಿ ಬೂದಿ ಮುಚ್ಚಿದ ಕೆಂಡದಂತಿರುವಂತೆ ಕಾಣಿಸುತ್ತಿದೆ.
‘ಕಾಶ್ಮೀರ ಟೈಗರ್ಸ್’ ಹತ್ಯೆಯ ಹೊಣೆ
ಮೇ 12 ರಂದು ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ಉದ್ಯೋಗಿ ರಾಹುಲ್ ಭಟ್ ಎಂಬಾತನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದರು. ಈ ಘಟನೆಯು ಮಧ್ಯ ಕಾಶ್ಮೀರದ ಚದೂರದಲ್ಲಿರುವ ತಹಸೀಲ್ದಾರ್ ಕಚೇರಿಯ ಹೊರಗೆ ನಡೆದಿದೆ. 'ಕಾಶ್ಮೀರ ಟೈಗರ್ಸ್' ಎಂಬ ಉಗ್ರಗಾಮಿ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ.
177 ಕಾಶ್ಮೀರಿ ಪಂಡಿತ್ ಸ್ಥಳಾಂತರ
ಮೇ 31 ರಂದು ಸಾಂಬಾದಲ್ಲಿ ಕಾಶ್ಮೀರಿ ಪಂಡಿತ್ ಶಿಕ್ಷಕ ರಜನಿ ಬಾಲಾ ಅವರ ಹತ್ಯೆಯ ನಂತರ ಪ್ರತಿಭಟನೆ ನಡೆಸಲಾಯಿತು. ಕಾಶ್ಮೀರಿ ಪಂಡಿತರನ್ನು ಜಮ್ಮುವಿಗೆ ವರ್ಗಾಯಿಸಬೇಕು, ಇದರಿಂದ ಸರಣಿ ಹತ್ಯೆಗಳನ್ನು ತಡೆಯಬಹುದು ಎಂಬ ಆಗ್ರಹವನ್ನು ಪ್ರತಿಭಟನಾಕಾರರು ಮಾಡಿದ್ದರು. ಹೀಗಾಗಿ ಶ್ರೀನಗರದಲ್ಲಿ ನಿಯೋಜಿಸಲಾದ 177 ಕಾಶ್ಮೀರಿ ಪಂಡಿತ್ ಶಿಕ್ಷಕರನ್ನು ಸ್ಥಳಾಂತರಿಸಬೇಕೆಂಬ ಬೇಡಿಕೆಯ ನಂತರ ಅವರನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸಲು ಸರ್ಕಾರ ಆದೇಶಿಸಿದೆ.
ಕಾಶ್ಮೀರ ತೊರೆದ ಶೇಕಡಾ 80 ರಷ್ಟು ಉದ್ಯೋಗಿಗಳು
ಪ್ರಧಾನ ಮಂತ್ರಿಗಳ ಪ್ಯಾಕೇಜ್ ಮತ್ತು ಪರಿಶಿಷ್ಟ ಜಾತಿಯಂತಹ ವಿಭಾಗಗಳಲ್ಲಿ ಸುಮಾರು 5900 ಹಿಂದೂ ನೌಕರರು ಕಣಿವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ 1100 ಜನರು ಟ್ರಾನ್ಸಿಟ್ ಕ್ಯಾಂಪ್ ವಸತಿಗಳಲ್ಲಿ ವಾಸಿಸುತ್ತಿದ್ದರೆ, 4700 ಜನರು ಖಾಸಗಿ ನಿವಾಸಗಳಲ್ಲಿ ವಾಸಿಸುತ್ತಿದ್ದಾರೆ. ನಿರ್ಬಂಧಗಳ ಹೊರತಾಗಿಯೂ, ಖಾಸಗಿ ವಸತಿ ಮತ್ತು ಶಿಬಿರಗಳಲ್ಲಿ ವಾಸಿಸುವ ಶೇಕಡಾ 80 ರಷ್ಟು ಉದ್ಯೋಗಿಗಳು ಕಾಶ್ಮೀರವನ್ನು ತೊರೆದು ಜಮ್ಮು ತಲುಪಿದ್ದಾರೆ. ಅನಂತನಾಗ್, ಬಾರಾಮುಲ್ಲಾ, ಶ್ರೀನಗರದ ಕ್ಯಾಂಪ್ಗಳ ಅನೇಕ ಕುಟುಂಬಗಳು ಪೊಲೀಸ್-ಆಡಳಿತದ ಕಾವಲುಗಾರರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ.
ನಿರಂತರ ಹತ್ಯೆಯಿಂದ ಕಾಶ್ಮೀರಿ ಪಂಡಿತರಲ್ಲಿ ಅಸಮಾಧಾನ
ಶ್ರೀನಗರದ ಮುಖ್ಯ ಶಿಕ್ಷಣಾಧಿಕಾರಿ ಹೊರಡಿಸಿರುವ ಪತ್ರದಲ್ಲಿ ಎಲ್ಲ ಶಿಕ್ಷಕರ ವರ್ಗಾವಣೆ ಕುರಿತು ಮಾಹಿತಿ ನೀಡಲಾಗಿದೆ. ಕೇಂದ್ರ ಸರಕಾರದ ಈ ನಿರ್ಧಾರವು ಕಾಶ್ಮೀರಿ ಪಂಡಿತರ ಕೋಪವನ್ನು ತಣಿಸುವ ಪ್ರಯತ್ನವೆಂದು ಪರಿಗಣಿಸಲಾಗಿದೆ. ವಾಸ್ತವವಾಗಿ, ಕಣಿವೆಯಲ್ಲಿ ನಡೆಯುತ್ತಿರುವ ನಿರಂತರ ಹತ್ಯೆಗಳಿಂದ ಕಾಶ್ಮೀರಿ ಪಂಡಿತರಲ್ಲಿ ಅಸಮಾಧಾನವಿದೆ.