Breaking: ಕಾಶ್ಮೀರಿ ಪಂಡಿತನ ಹತ್ಯೆ; ಉಗ್ರರ ಆಸ್ತಿ ಮುಟ್ಟುಗೋಲು
ಶ್ರೀನಗರ, ಆಗಸ್ಟ್ 17: ಶೋಪಿಯಾನ್ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತನ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಉಗ್ರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದ್ದು, ಆತನ ಸಂಬಂಧಿಕರನ್ನೂ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಶೋಪಿಯಾನ್ ಜಿಲ್ಲೆಯ ಚೋಟಿಗಾಂ ಗ್ರಾಮದ ಸುನೀಲ್ ಕುಮಾರ್ ಹತ್ಯೆಯಲ್ಲಿ ಶೋಪಿಯಾನ್ನ ಕುತ್ಪೋರಾ ಗ್ರಾಮದ ಆದಿಲ್ ಅಹ್ಮದ್ ವಾನಿ ಎಂಬ ಶಂಕಿತ ಉಗ್ರಗಾಮಿಯು ಭಾಗಿಯಾಗಿದ್ದ ಎಂದು ಉನ್ನತ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆರೋಪಿ ಆದಿಲ್ ಅಹ್ಮದ್ ವಾನಿಯ ಮನೆಯನ್ನು ಜಪ್ತಿ ಮಾಡುವ ಪ್ರಕ್ರಿಯೆ ಆರಂಭವಾಗಿದ್ದು, ಆತನ ಸಂಬಂಧಿಕರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಶೋಪಿಯಾನ್ನ ಚೋಟಿಪೋರಾ ಪ್ರದೇಶದ ಸೇಬಿನ ತೋಟದಲ್ಲಿ ನಾಗರಿಕರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಇದರಲ್ಲಿ 45 ವರ್ಷದ ಕಾಶ್ಮೀರಿ ಪಂಡಿತ ಸುನಿಲ್ ಕುಮಾರ್ ಮೃತಪಟ್ಟಿದ್ದಾರೆ. ಅವರ ಸಹೋದರ ಪಿಂಟು ಕುಮಾರ್ ಗಾಯಗೊಂಡಿದ್ದಾರೆ.
ಘಟನೆ ಬಗ್ಗೆ ಮಾತನಾಡಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್ಬಾಗ್ ಸಿಂಗ್, "ಆಗಸ್ಟ್ 15 ರ ಸಮಯದಲ್ಲಿ ದೇಶದಲ್ಲಿ ನಡೆಯುವ ಆಚರಣೆಗಳನ್ನು ಕಂಡು ಭಯೋತ್ಪಾದಕರು ಇಂತಹ ಕೆಲಸ ಮಾಡುತ್ತಾರೆ. ಅವರು ಕಾಶ್ಮೀರವನ್ನು ತಮ್ಮ ಸ್ವಂತ ಆಸೆಗಳನ್ನು ಪೂರೈಸುವ ಮಾರ್ಗವಾಗಿ ಮಾತ್ರ ನೋಡುತ್ತಾರೆ. ಇಲ್ಲಿ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿದ್ದಾರೆ" ಎಂದಿದ್ದಾರೆ.
'ನಾವು ದಾಳಿಯಲ್ಲಿ ಭಾಗಿಯಾಗಿರುವ ಇಬ್ಬರನ್ನು ಗುರುತಿಸಿದ್ದೇವೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು' ಎಂದು ಮಾಹಿತಿ ನೀಡಿದ್ದಾರೆ.
ದಾಳಿಗೊಳಗಾದ ಇಬ್ಬರೂ ನಾಗರಿಕರು ಹಿಂದೂ ಸಮುದಾಯಕ್ಕೆ ಸೇರಿದವರು ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಖಚಿತಪಡಿಸಿದೆ. "ಶೋಪಿಯಾನ್ನ ಚೋಟಿಪೋರಾ ಪ್ರದೇಶದ ಸೇಬಿನ ತೋಟದಲ್ಲಿ ಭಯೋತ್ಪಾದಕರು ನಾಗರಿಕರ ಮೇಲೆ ಗುಂಡು ಹಾರಿಸಿದ್ದಾರೆ. ಒಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಇಬ್ಬರೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ಗಾಯಗೊಂಡವರು ವ್ಯಕ್ತಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ" ಎಂದಿತ್ತು