ಜಮ್ಮು-ಕಾಶ್ಮೀರ: ಕಂದಕಕ್ಕೆ ಬಿದ್ದ ಬಸ್, 8 ಮಂದಿ ದುರ್ಮರಣ
ಡೋಡಾ, ಅಕ್ಟೋಬರ್ 28: ಮಿನಿಬಸ್ ಒಂದು ಆಳವಾದ ಕಂದಕಕ್ಕೆ ಉರುಳಿ ಬಿದ್ದು 8 ಮಂದಿ ಮೃತಪಟ್ಟಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಡೋಡಾದಲ್ಲಿ ನಡೆದಿದೆ.
ಇಲ್ಲಿನ ಥತ್ರಿಯಿಂದ ದೋಡಾಗೆ ತೆರಳುತ್ತಿದ್ದ ಮಿನಿ ಬಸ್ ಆಳ ಕಂದಕಕ್ಕೆ ಉರುಳಿ ಬಿದ್ದು 8 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ. ಈ ಘಟನೆ ಥತ್ರಿ ಸಮೀಪ ನಡೆದಿದೆ.
ಜಮ್ಮು ಕಾಶ್ಮೀರದ ಥತ್ರಿಯಿಂದ ಮಿನಿ ಬಸ್ ದೋಡಾಗೆ ಪ್ರಯಾಣಿಸುತ್ತಿತ್ತು. ಥತ್ರಿಯಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಬಸ್ ಕಂದಕಕ್ಕೆ ಉರುಳಿ ಬಿದ್ದಿದೆ. ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಪ್ರಧಾನ ಮಂತ್ರಿ ವಿಪತ್ತು ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿಗಳನ್ನು ಮೃತರ ಕುಟುಂಬಸ್ಥರಿಗೆ ಘೋಷಿಸಿದ್ದಾರೆ. ಗಾಯಗೊಂಡವರ ಚಿಕಿತ್ಸೆಗೆ ತಲಾ 50 ಸಾವಿರ ರೂಪಾಯಿ ಪ್ರಕಟಿಸಿದ್ದಾರೆ.

ದೊಡಾದ ಹೆಚ್ಚುವರಿ ಎಸ್ಪಿ ನೀಡಿರುವ ಮಾಹಿತಿ ಪ್ರಕಾರ ಸ್ಥಳದಲ್ಲಿ ಇನ್ನೂ ರಕ್ಷಣಾ ಕಾರ್ಯ ಮುಂದುವರಿದಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್, 8 ಮಂದಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಈಗಷ್ಟೇ ದೊಡಾ ಜಿಲ್ಲಾಧಿಕಾರಿ ವಿಕಾಸ್ ಶರ್ಮ ಅವರ ಜೊತೆ ಮಾತನಾಡಿದ್ದು ಗಾಯಗೊಂಡವರನ್ನು ದೊಡಾದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ಸಿಗಬೇಕಿದೆ ಎಂದರು.
ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾಗಿ ಚೆನಾಬ್ ನದಿಯ ದಡದಲ್ಲಿನ ಹೊಲಗಳಲ್ಲಿ ಮಗುಚಿ ಬಿದ್ದ ವಾಹನದಿಂದ ಜನರನ್ನು ಹೊರ ತೆಗೆದಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications