ಮಗನ ಮೃತದೇಹ ಕೇಳಿದ ತಂದೆ ಮನವಿ ತಿರಸ್ಕರಿಸಿದ ಸುಪ್ರೀಂಕೋರ್ಟ್
ಶ್ರೀನಗರ, ಸೆಪ್ಟೆಂಬರ್ 12: ಜಮ್ಮು ಮತ್ತು ಕಾಶ್ಮೀರದ ಹೈದರ್ಪೋರಾ ಎನ್ಕೌಂಟರ್ನಲ್ಲಿ ಭದ್ರತಾ ಪಡೆಗಳಿಂದ ಮೃತಪಟ್ಟ ಅಮೀರ್ ಮ್ಯಾಗ್ರೆ ಶವ ಹಸ್ತಾಂತರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಅಮೀರ್ ಮ್ಯಾಗ್ರೆ ಅಂತ್ಯಸಂಸ್ಕಾರವನ್ನು ಧಾರ್ಮಿಕ ನಂಬಿಕೆ ಮತ್ತು ವಿಧಿವಿಧಾನಗಳ ಪ್ರಕಾರವೇ ನೆರವೇರಿಸಿರುವುದನ್ನು ಸುಪ್ರೀಂಕೋರ್ಟ್ ಗಮನಿಸಿದೆ. ಈ ಹಿನ್ನೆಲೆ ಆತನ ತಂದೆ ಮೊಹಮ್ಮದ್ ಲತೀಫ್ ಮ್ಯಾಗ್ರೆ ಸೋಮವಾರ ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾ. ಜೆಬಿ ಪರ್ದಿವಾಲಾ ನೇತೃತ್ವದ ಪೀಠವು ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಹೈಕೋರ್ಟ್ ನೀಡಿತ್ತು. ರಾಜ್ಯ ಸರ್ಕಾರವು ಈ ನಿರ್ದೇಶನವನ್ನು ಪಾಲಿಸುವಂತೆ ಸೂಚನೆ ನೀಡಿದ್ದು, ಮ್ಯಾಗ್ರಿ ದೇಹವನ್ನು ಸಮಾಧಿ ಮಾಡಿದ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿದೆ.

ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್:
ತಮ್ಮ ಮಗನ ಮೃತದೇಹ ಹಸ್ತಾಂತರಿಸುವಂತೆ ಸಲ್ಲಿಸಿದ ಮೇಲ್ಮನವಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಸುಪ್ರೀಂ ಕೋರ್ಟ್ ಪೀಠವು, ಈ ಹಿಂದಿನ ಹೈಕೋರ್ಟ್ನ ತೀರ್ಪನ್ನು ನ್ಯಾಯಯುತ ಮತ್ತು ಸಮಾನ ಎಂದು ಬಣ್ಣಿಸಿದೆ. ಆ ಮೂಲಕ ಮೇಲ್ಮನವಿಯನ್ನು ವಜಾಗೊಳಿಸಿದ್ದು, ತೀರ್ಪಿನ ಸಂಪೂರ್ಣ ಪ್ರತಿಗಾಗಿ ಎದುರು ನೋಡಲಾಗುತ್ತಿದೆ.
ಏನಿದು ಹೈದರ್ಪೋರಾ ಎನ್ಕೌಂಟರ್ನಲ್ಲಿ ಪ್ರಕರಣ?
ಕಳೆದ 2021ರ ನವೆಂಬರ್ ತಿಂಗಳಿನಲ್ಲಿ ಶ್ರೀನಗರದ ಹೈದರ್ಪೋರಾ ಎನ್ಕೌಂಟರ್ನಲ್ಲಿ ಅಮಿರ್ ಮ್ಯಾಗ್ರೆ ಎಂಬಾತನ ಹತ್ಯೆ ಆಗಿತ್ತು. ಭದ್ರತಾ ಸಿಬ್ಬಂದಿ ನಡೆಸಿದ ಎನ್ಕೌಂಟರ್ನಲ್ಲಿ ಮೃತಪಟ್ಟ ತಮ್ಮ ಪುತ್ರನ ಮೃತದೇಹವನ್ನು ನೀಡುವಂತೆ ಅವನ ತಂದೆ ಮೊಹಮ್ಮದ್ ಲತೀಫ್ ಮ್ಯಾಗ್ರೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸೂರ್ಯಕಾಂತ್ ಮತ್ತು ಜೆಬಿ ಪರ್ದಿವಾಲಾ ನೇತೃತ್ವದ ಪೀಠವು ಆಗಸ್ಟ್ 29ಕ್ಕೆ ತೀರ್ಪನ್ನು ಕಾಯ್ದಿರಿಸಿತ್ತು.












Click it and Unblock the Notifications