ಮೆಹಬೂಬಾ ಮುಫ್ತಿಗೆ ತಾಲಿಬಾನಿಗಳೊಂದಿಗೆ ಸಂಪರ್ಕ: ತನಿಖೆಗೆ ಬಿಜೆಪಿ ಆಗ್ರಹ
ಶ್ರೀನಗರ, ಆಗಸ್ಟ್ 23: ಮೆಹಬೂಬಾ ಮುಫ್ತಿಗೆ ತಾಲಿಬಾನಿ ಉಗ್ರರು ಅಥವಾ ಐಎಸ್ಐಎಸ್ನೊಂದಿಗೆ ಸಂಪರ್ಕವಿದೆಯೇ ಎಂಬುದರ ತನಿಖೆ ನಡೆಯಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ತಾಲಿಬಾನ್ ಉಗ್ರರನ್ನು ನೋಡಿ ಪ್ರಧಾನಿ ಮೋದಿ ಪಾಠ ಕಲಿಯಬೇಕು ಎನ್ನುವಂತಹ ಮಾತುಗಳನ್ನು ಮುಫ್ತಿ ಆಡಿದ್ದರು. ಈ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿಯು, ಮುಫ್ತಿ ಅವರಿಗೆ ತಾಲಿಬಾನ್ ಉಗ್ರರ ಸಂಪರ್ಕವಿದೆಯೇ ಎಂಬುದ ಕುರಿತು ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಮೆಹಬೂಬಾ ಮುಫ್ತಿ ಕೂಡಲೇ ಕ್ಷಮೆ ಕೇಳಬೇಕು ಮತ್ತು ಅವರಿಗೆ ತಾಲಿಬಾನ್ ಜೊತೆಗೆ ಏನಾದರೂ ಸಂಪರ್ಕ ಇದೆಯಾ ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.

ಮೆಹಬೂಬಾ ಮುಫ್ತಿ ಈ ಮೊದಲು ಮಾತನಾಡಿ, ಅಫ್ಘಾನಿಸ್ತಾನದಲ್ಲಿ ಅಷ್ಟು ಬಲಿಷ್ಠವಾದ ಅಮೆರಿಕದ ಸೈನಿಕರಿದ್ದರೂ ತಾಲಿಬಾನಿಗಳು ಅವರನ್ನು ಯಶಸ್ವಿಯಾಗಿ ಹೊರಹಾಕಿದರು.
ಅದನ್ನು ನೋಡಿ ಮೋದಿ ಸರ್ಕಾರ ಪಾಠ ಕಲಿಯಬೇಕು. ಕಾಶ್ಮೀರದ ಜನರೊಂದಿಗೆ ಕೂಡಲೇ ಮಾತುಕತೆ ನಡೆಸಿ, ವಿಶೇಷ ಸ್ಥಾನಮಾನ ಮರುಸ್ಥಾಪಿಸಬೇಕು. ಇಲ್ಲದಿದ್ದರೆ, ಏನು ಬೇಕಾದರೂ ಆಗಬಹುದು ಎಂದು ಹೇಳಿದ್ದರು.
ತಾಲಿಬಾನ್ ಅಫ್ಘಾನಿಸ್ತಾನದಲ್ಲಿರುವ ನ್ಯಾಟೋ ಮತ್ತು ಇತರ ವಿದೇಶಿ ಶಕ್ತಿಗಳನ್ನು ಅಲ್ಲಿಂದ ಓಡಿಸಿದ್ದನ್ನು, ಆನೆ-ಇರುವೆ ಕತೆಗೆ ಹೋಲಿಸಿ ಮಾತನಾಡಿದ ಮೆಹಬೂಬಾ ಮುಫ್ತಿ, ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ.
ನಿಮ್ಮ ಹಾದಿಯನ್ನು ಬದಲಿಸಿಕೊಳ್ಳಲು ಇನ್ನೂ ಅವಕಾಶ ಇರುವಾಗ ಅದನ್ನು ಕಳೆದುಕೊಳ್ಳಬೇಡಿ. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಪ್ರಾರಂಭಿಸಿದ ಶಾಂತಿ ಪ್ರಕ್ರಿಯೆಯನ್ನು ನೆನಪಿಸಿಕೊಳ್ಳಿ. ಕಾಶ್ಮೀರದ ಜನರೊಂದಿಗೆ ಮಾತುಕತೆ ಪ್ರಾರಂಭಿಸಬೇಕು ಮತ್ತು ಇಲ್ಲಿಂದ ನೀವು ಲೂಟಿ ಹೊಡೆದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸಬೇಕು ಎಂದು ಹೇಳಿದ್ದಾರೆ.
2019ರಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದುಹಾಕಿದಾಗಿನಿಂದಲೂ ಮೆಹಬೂಬ ಮುಫ್ತಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ಅದರಲ್ಲೂ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದನ್ನು ಕಾಶ್ಮೀರಕ್ಕೆ ಹೋಲಿಸಿದ್ದರು.
ಮುಫ್ತಿ ಮತ್ತಿತರರ ಬೂಟಾಟಿಕೆ ಮತ್ತು ವಂಚನೆಯ ರಾಜಕಾರಣಕ್ಕೆ ಕಾಶ್ಮೀರವನ್ನು ಬಳಸಿಕೊಳ್ಳಲು ಬಿಡುವುದಿಲ್ಲ. ಇಲ್ಲಿನ ಜನರು ಧ್ರುವೀಕೃತ ರಾಜಕೀಯವನ್ನು ಸಾರಾಸಗಾಟವಾಗಿ ತಿರಸ್ಕರಿಸಿದ್ದಾರೆ. ಸದಾ ಪಾಕಿಸ್ತಾನ ಪರ ನಿಲುವು ಪ್ರದರ್ಶಿಸುವ ಮೆಹಬೂಬಾ ಮುಫ್ತಿ, ಪದೇಪದೆ ಜಮ್ಮು-ಕಾಶ್ಮೀರದ ಶಾಂತಿ ಕದಡುವ ಮಾತುಗಳನ್ನಾಡುತ್ತಾರೆ. ಅವರಿಗೆ ಐಸಿಸ್ ಅಥವಾ ತಾಲಿಬಾನ್ ಜತೆ ಸಂಪರ್ಕ ಇದೆಯಾ ಎಂಬ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಇತ್ತೀಗೆ ಮುಫ್ತಿಯವರ ತಾಯಿ ಗುಲ್ಶಾನ್ ನಾಝೀರ್ ಅವರನ್ನು ಜಾರಿ ನಿರ್ದೇಶನಾಲಯ (ED) ಸುಮಾರು 3 ತಾಸುಗಳ ಕಾಲ ವಿಚಾರಣೆ ನಡೆಸಿದೆ. ಈ ಸಂಬಂಧ ಪತ್ರಕರ್ತರು ಪ್ರಶ್ನೆ ಕೇಳಿದಾಗ ಮುಫ್ತಿ, ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ನಮ್ಮ ಹಕ್ಕುಗಳನ್ನು ರಕ್ಷಿಸಬೇಕಾದ, ಭಾರತದ ಸಂವಿಧಾನ, ಚೈತನ್ಯವನ್ನು ಎತ್ತಿಹಿಡಿಯಬೇಕಾದ ಸಂಸ್ಥೆಗಳನ್ನೆಲ್ಲ ತಾಲಿಬಾನೀಕರಣಗೊಳಿಸಲಾಗಿದೆ. ಅಷ್ಟೇ ಏಕೆ, ಈ ದೇಶದ ಮುಖ್ಯವಾಹಿನಿಯಲ್ಲಿರುವ ಬಹುತೇಕ ಮೀಡಿಯಾಗಳೂ ಕೂಡ ತಾಲಿಬಾನೀಕರಣಗೊಂಡಿವೆ. ಬಿಜೆಪಿ ಅಗತ್ಯಕ್ಕೆ ತಕ್ಕಂತೆ ಕೆಲಸ ಮಾಡುತ್ತಿವೆ. ಹಲವು ಸಂಸ್ಥೆಗಳ ದುರುಪಯೋಗ ಆಗುತ್ತಿರುವ ಬಗ್ಗೆ ಆ ಮಾಧ್ಯಮಗಳು ಏನೂ ಮಾತನಾಡುತ್ತಿಲ್ಲ ಎಂದು ಹೇಳಿದರು. ಹಾಗೇ, ಇಡಿ ತನಿಖೆ ಶುರುವಾಗಿದೆ..ಅದನ್ನು ಕಾನೂನು ಪ್ರಕಾರ ಎದುರಿಸುತ್ತೇವೆ ಎಂದು ತಿಳಿಸಿದರು.
ಮೆಹಬೂಬಾ ಮುಫ್ತಿ ತಾಲಿಬಾನ್ ಪರಾಕ್ರಮವನ್ನು ಹೊಗಳಿದ್ದನ್ನು ಬಿಜೆಪಿ ಮುಖಂಡ ನಿರ್ಮಲ್ ಸಿಂಗ್ ಖಂಡಿಸಿದ್ದಾರೆ. ಜಮ್ಮು-ಕಾಶ್ಮೀರದ ಮಾಜಿ ಉಪಮುಖ್ಯಮಂತ್ರಿಯೂ ಆಗಿರುವ ಅವರು, ಮೆಹಬೂಬಾ ಮುಫ್ತಿ ತನ್ನ ರಾಜಕೀಯ ನೆಲೆ ಕಳೆದುಕೊಂಡು ಹತಾಶರಾಗಿದ್ದಾರೆ.
ಬಿಜೆಪಿ ಸರ್ಕಾರವನ್ನು ಬ್ಲ್ಯಾಕ್ಮೇಲ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಯಾಕೆಂದರೆ ಇದು ಮೋದಿ ಸರ್ಕಾರ. ಅಂಥ ಬ್ಲ್ಯಾಕ್ ಮೇಲ್ಗೆಲ್ಲ ಹೆದರುವವರು ಇಲ್ಲಿ ಯಾರೂ ಇಲ್ಲ. ಆ ದಿನಗಳೆಲ್ಲ ಕಳೆದುಹೋಗಿವೆ ಎಂದಿದ್ದಾರೆ.












Click it and Unblock the Notifications