ಪೂಂಚ್ ಅರಣ್ಯದಲ್ಲಿ ಉಗ್ರರು: ಅಡಗಿ ಕುಳಿತವರ ವಿರುದ್ಧ ಅಂತಿಮ ಸೇನಾ ಕಾರ್ಯಾಚರಣೆ
ಶ್ರೀನಗರ, ಅಕ್ಟೋಬರ್ 20: ಜಮ್ಮು ಮತ್ತು ಕಾಶ್ಮೀರದ ಪೂಂಚ್ನಲ್ಲಿ ಅರಣ್ಯಪ್ರದೇಶಗಳಲ್ಲಿ ಅಡಗಿ ಕುಳಿತಿರುವ ಉಗ್ರರನ್ನು ಸುತ್ತುವರಿದಿರುವ ಸೇನಾ ಪಡೆಯು ಅವರನ್ನು ಸದೆ ಬಡೆಯುವುದಕ್ಕೆ ಅಂತಿಮ ಕಾರ್ಯಾಚರಣೆ ಶುರು ಮಾಡಿದೆ.
ಪೂಂಚ್ ಅರಣ್ಯ ಪ್ರದೇಶದಲ್ಲಿ ನಾಲ್ಕರಿಂದ ಆರು ಮಂದಿ ಉಗ್ರರು ಅಡಗಿ ಕುಳಿತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ವಿಶೇಷ ಪಡೆಯು ಉಗ್ರರನ್ನು ಸುತ್ತುವರಿದಿದೆ. ಭಯೋತ್ಪಾದಕರನ್ನು ಪತ್ತೆ ಹಚ್ಚುವುದಕ್ಕಾಗಿ ಕಣ್ಗಾವಲು ಸಾಧನಗಳನ್ನು ಸಹ ಬಳಕೆ ಮಾಡಲಾಗುತ್ತಿದೆ. ಉಗ್ರರ ವಿರುದ್ಧ ಅಂತಿಮ ಕಾರ್ಯಾಚರಣೆಯು ಯಾವುದೇ ಕ್ಷಣದಲ್ಲೂ ಆರಂಭವಾಗಬಹುದು ಎಂದು ತಿಳಿದು ಬಂದಿದೆ.
ಕಳೆದ ಕೆಲವು ದಿನಗಳಲ್ಲಿ ಜಮ್ಮು ಪ್ರದೇಶದ ಪೂಂಚ್ ಕಾಡಿನಲ್ಲಿ ಅಡಗಿರುವ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆಯು ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಕಾರ್ಯಾಚರಣೆ ಪೂರ್ಣಗೊಳ್ಳುವವರೆಗೂ ಮೆಂಧರ್ನಲ್ಲಿರುವ ಸ್ಥಳೀಯರು ತಮ್ಮ ಮನೆಯಿಂದ ಹೊರಗೆ ಹೋಗದಂತೆ ಸೂಚಿಸಲಾಗಿದೆ. ಭಟ್ಟ ದುರಿಯನ್ ನಲ್ಲಿರುವ ಸ್ಥಳೀಯ ಮಸೀದಿಗಳಲ್ಲಿ ಸಾರ್ವಜನಿಕ ಪ್ರಾರ್ಥನಾ ವ್ಯವಸ್ಥೆಯ ಮೂಲಕ ಈ ಕುರಿತು ಸೂಚಿಸಲಾಗಿದೆ.
ಪೂಂಚ್ ಅರಣ್ಯ ಪ್ರದೇಶದಲ್ಲಿ ಗುಂಡಿನ ಸದ್ದು:
ಸಾರ್ವಜನಿಕರು ಮನೆಗಳಿಂದ ಹೊರಗೆ ಬಾರದಂತೆ ಸಾರ್ವಜನಿಕವಾಗಿ ಸಂದೇಶ ರವಾನಿಸುತ್ತಿದ್ದಂತೆ ಪೂಂಚ್ ಅರಣ್ಯದಲ್ಲಿ ಗುಂಡಿನ ಸದ್ದು ಮೊಳಗಿತು. ಶಂಕಿತ ಸ್ಥಳಗಳಲ್ಲಿ ಭಾರತೀಯ ಸೇನೆಯು ಕಾರ್ಯಾಚರಣೆ ಆರಂಭಿಸಿತು. ಇದಕ್ಕೂ ಮೊದಲು ಭಯೋತ್ಪಾದಕರು ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಮುಖ್ಯ ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಜಮ್ಮು-ರಾಜೌರಿ ಹೆದ್ದಾರಿಯಲ್ಲಿ ಮೆಂಧರ್ ಮತ್ತು ಥಾನಮಂಡಿ ನಡುವಿನ ಸಂಚಾರವನ್ನು ಐದನೇ ದಿನವಾದ ಮಂಗಳವಾರವೂ ಸ್ಥಗಿತಗೊಳಿಸಲಾಗಿದೆ.
ಪೂಂಚ್ನಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿದ ಸೇನೆ:
ಪೂಂಚ್ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯು ಒಂಬತ್ತು ಯೋಧರು ಹುತಾತ್ಮರಾಗಿದ್ದಾರೆ. ಬಿಗಿ ಬಂದೋಬಸ್ತ್ ಮತ್ತು ತೀವ್ರವಾದ ಶೆಲ್ ದಾಳಿಯ ಹೊರತಾಗಿಯೂ 8-9 ಕಿಮೀ ದಟ್ಟ ಅರಣ್ಯದಲ್ಲಿ ಬೃಹತ್ ಕೂಂಬಿಂಗ್ ಕಾರ್ಯಾಚರಣೆ ಹಾಗೂ ಹೋರಾಟ ಮುಂದುವರೆದಿದೆ. ಉಗ್ರರ ಯಾವುದೇ ಮೃತದೇಹ ಪತ್ತೆಯಾಗದ ಕಾರಣ ಗುಂಡಿನ ಚಕಮಕಿಯಲ್ಲಿ ಎಷ್ಟು ಮಂದಿ ಉಗ್ರರು ಮೃತಪಟ್ಟಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ.
9 ಭಾರತೀಯ ಯೋಧರು ಹುತಾತ್ಮ:
ನಿಯಂತ್ರಣ ರೇಖೆಗೆ ಸಮೀಪದಲ್ಲಿರುವ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಡೇರಾ ವಾಲಿ ಗಾಲಿ ಪ್ರದೇಶದಲ್ಲಿ ಅಕ್ಟೋಬರ್ 10ರಂದು ರಾತ್ರಿಯ ಸಂದರ್ಭದಲ್ಲಿ ಯೋಧರು ಮತ್ತು ಉಗ್ರರ ನಡುವೆ ತೀವ್ರ ಗುಂಡಿನ ಚಕಮಕಿ ನಡೆಯಿತು. ಈ ವೇಳೆ ಒಬ್ಬ ಜೆಸಿಓ ಸೇರಿದಂತೆ ಐವರು ಯೋಧರು ಹುತಾತ್ಮರಾದರು.
ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ ಉಪ ವಿಭಾಗದ ನರಖಾಸ್ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ಪಡೆದ ಸೇನಾ ಪಡೆಯು ಅಕ್ಟೋಬರ್ 14ರಂದು ಕಾರ್ಯಾಚರಣೆಗೆ ಇಳಿಯಿತು. ಈ ಸಂದರ್ಭದಲ್ಲಿ ಉಗ್ರರು ಮತ್ತು ಸೇನೆ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮರಾದರೆ, ಒಬ್ಬ ಜೆಸಿಓ ಸೇರಿದಂತೆ ಇಬ್ಬರು ಯೋಧರು ನಾಪತ್ತೆಯಾಗಿದ್ದರು. ಅದಾಗಿ ಎರಡು ದಿನಗಳ ಬಳಿಕ ಶನಿವಾರ ಯೋಧರ ಪತ್ತೆಗೆ ದಟ್ಟ ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಎರಡು ದಿನಗಳ ಬಳಿಕ ನಾಪತ್ತೆಯಾದ ಜೆಸಿಓ ಮತ್ತು ಒಬ್ಬ ಯೋಧರ ಮೃತದೇಹ ಪತ್ತೆಯಾಗಿತ್ತು.
ಉಗ್ರರಿಗೆ ಪಾಕಿಸ್ತಾನ ಕಮಾಂಡೋಗಳಿಂದ ತರಬೇತಿ:
ಕಳೆದ ಎಂಟು ದಿನಗಳಲ್ಲಿ ಗಡಿಯಲ್ಲಿ ಕಾವಲು ಕಾಯುತ್ತಿರುವ ಸಾವಿರಾರು ಭಾರತೀಯ ಭದ್ರತಾ ಪಡೆಯ ಕಣ್ಣು ತಪ್ಪಿಸಿ ಒಳನುಸುಳುವಲ್ಲಿ ಉಗ್ರರು ಯಶಸ್ವಿಯಾಗಿದ್ದಾರೆ. ಈ ಹಂತದಲ್ಲಿ ಪಾಕಿಸ್ತಾನ ಸೇನೆಯ ಹಿರಿಯ ಕಮಾಂಡೋಗಳಿಂದ ನುಸುಳುಕೋರರಿಗೆ ತರಬೇತಿ ನೀಡಲಾಗಿದೆ ಎಂದು ಪೊಲೀಸರು ಹಾಗೂ ಸೇನಾ ಮೂಲಗಳಿಂದ ತಿಳಿದು ಬಂದಿದೆ. "ಒಳನುಸುಳುಕೋರರು ಮತ್ತು ಆ ಉಗ್ರರ ಗುಂಪಿನಲ್ಲಿ ಪಾಕಿಸ್ತಾನ ಕಮಾಂಡೋಗಳೂ ಸಹ ಇರಬಹುದು. ಆದರೆ ಅವರನ್ನು ಹೊಡೆದುರುಳಿಸಿದ ನಂತರವಷ್ಟೇ ಈ ಬಗ್ಗೆ ಮಾಹಿತಿ ಖಚಿತವಾಗಲಿದೆ," ಎಂದು ಭಾರತೀಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.