ಜಮ್ಮು ಮತ್ತು ಕಾಶ್ಮೀರದಲ್ಲಿ 35A ವಿಧಿ ರದ್ದುಗೊಳಿಸಲು ಕೇಂದ್ರ ಸಜ್ಜು?
ಶ್ರೀನಗರ, ಜುಲೈ 27: ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುವರಿಯಾಗಿ ಅರೆಸೇನಾ ಪಡೆಗಳ ನೂರು ತುಕಡಿಗಳನ್ನು ನಿಯೋಜಿಸಲು ಕೇಂದ್ರ ಸರ್ಕಾರ ಶುಕ್ರವಾರ ರಾತ್ರಿ ಅನುಮೋದನೆ ನೀಡಿದೆ.
ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಮತ್ತು ಗಡಿ ಭದ್ರತಾ ಪಡೆ (ಬಿಎಸ್ಎಫ್), ಸಶಸ್ತ್ರ ಸೀಮಾ ಬಲ (ಎಸ್ಎಸ್ಬಿ) ಹಾಗೂ ಇಂಡೋ ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಪಡೆಗಳು ನೂರು ಹೆಚ್ಚುವರಿ ತುಕಡಿಗಳನ್ನು ನಿಯೋಜಿಸಲು ಆದೇಶಿಸಲಾಗಿದೆ. ಸುಮಾರು 10,000 ಅರೆಸೇನಾ ಪಡೆ ಸಿಬ್ಬಂದಿ ಕಣಿವೆ ರಾಜ್ಯದತ್ತ ತೆರಳುತ್ತಿದ್ದಾರೆ.
ಶಾಪಿಯನ್ನಲ್ಲಿ ಜೈಷ್ ಸಂಘಟನೆಯ ಇಬ್ಬರು ಉಗ್ರರನ್ನು ಹೊಡೆದುರುಳಿದ ಭಾರತೀಯ ಸೇನೆ
ಅಮರನಾಥ ಯಾತ್ರೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ರಕ್ಷಣೆಗಾಗಿ ಈಗಾಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುವರಿಯಾಗಿ 40,000 ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದು ದೈನಂದಿನ ಚಟುವಟಿಕೆಯ ಪ್ರಕ್ರಿಯೆಯ ಭಾಗ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಜಮ್ಮು ಮತ್ತು ಕಾಶ್ಮೀರದ ಭೇಟಿಯಿಂದ ನವದೆಹಲಿಗೆ ಮರಳಿದ ಕೂಡಲೇ ಈ ನಿಯೋಜನೆ ಮಾಡಿದ್ದು, ಇದು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡು ಮುಂದಾಗಿರುವುದರ ಸಂಕೇತ ಎಂದು ಹೇಳಲಾಗಿತ್ತಿದೆ.
ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿನ 35 ಎ ವಿಧಿಯನ್ನು ರದ್ದುಗೊಳಿಸಲು ಮುಂದಾಗಿದೆ. ಅದರ ಪೂರ್ವಭಾವಿಯಾಗಿ ಕಣಿವೆ ರಾಜ್ಯದಲ್ಲಿ ನಡೆಯಬಹುದಾದ ಗಲಾಟೆಯನ್ನು ನಿಯಂತ್ರಿಸುವ ಉದ್ದೇಶದಿಂದ ಪಡೆಗಳನ್ನು ನಿಯೋಜಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಾಲಕಿಯ ಪ್ರಾಣ ರಕ್ಷಣೆಗಾಗಿ ಪ್ರವಾಹವನ್ನೂ ಲೆಕ್ಕಿಸದ CRPF ಯೋಧರು
35 ಎ ವಿಧಿಯನ್ನು ಕಾಯಂ ನಿವಾಸಿಗಳ ಕಾಯ್ದೆ ಎಂದು ಸಹ ಕರೆಯಲಾಗುತ್ತದೆ. ಹೊರ ರಾಜ್ಯದವರು ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಯಂ ಆಗಿ ನೆಲೆಸುವುದನ್ನು ಈ ಕಾಯ್ದೆ ನಿಷೇಧಿಸುತ್ತದೆ. ಇಲ್ಲಿ ಹೊರರಾಜ್ಯದವರು ಸ್ಥಿರಾಸ್ತಿ ಖರೀದಿ, ಸರ್ಕಾರ ಉದ್ಯೋಗ ಪಡೆಯುವುದು, ಸ್ಕಾಲರ್ಶಿಪ್ ಮುಂತಾದ ಸೌಲಭ್ಯಗಳನ್ನು ಪಡೆದುಕೊಳ್ಳುವುದನ್ನು ಸಹ ನಿಷೇಧಿಸಿದೆ.
ಇದರ ಜತೆಗೆ ಅಲ್ಲಿನ ಕಾಯಂ ನಿವಾಸಿಗಳಿಗೆ ವಿಶೇಷ ಹಕ್ಕುಗಳು ಮತ್ತು ಸೌಲಭ್ಯಗಳನ್ನು ನೀಡುತ್ತದೆ. ಭಾರತ ಸರ್ಕಾರ ಜಾರಿಗೆ ತರುವ ಕಾಯ್ದೆ ತಿದ್ದುಪಡಿಗಳು ಈ ರಾಜ್ಯಕ್ಕೆ ಅನ್ವಯವಾಗುವುದಿಲ್ಲ. ಇಲ್ಲಿನ ಮಹಿಳೆಯರು ಹೊರರಾಜ್ಯದ ಪುರುಷರನ್ನು ಮದುವೆಯಾದರೆ ಆಸ್ತಿಯ ಹಕ್ಕು ಸೇರಿದಂತೆ ಅಲ್ಲಿನ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ. ಇಂತಹ ಅನೇಕ ಕಾರಣಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ 35ಎ ವಿಧಿಯನ್ನು ರದ್ದುಗೊಳಿಸುವ ಚಿಂತನೆ ನಡೆಸಿದೆ.