ಹಂದ್ವಾರದಲ್ಲಿ ಐವರು ಯೋಧರು ಹುತಾತ್ಮ: ಪಾಕ್ ನಲ್ಲಿ ಸಂಭ್ರಮಾಚರಣೆ
ಶ್ರೀನಗರ, ಮೇ 3; ಶನಿವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಭಾರತೀಯ ಸೇನೆಯ ಮೇಲೆ ಅಟ್ಟಹಾಸ ಮೆರದಿದ್ದಕ್ಕೆ ಪಾಕಿಸ್ತಾನದಲ್ಲಿ ಸಂಭ್ರಮಾಚರಣೆಗಳು ನಡೆದಿವೆ ಎಂದು ವರದಿಯಾಗಿದೆ.
ಪಾಕಿಸ್ತಾನದಲ್ಲಿ ಈ ದಾಳಿಯನ್ನು ಬೆಂಬಲಿಸಿ, ಪಟಾಕಿ ಸಿಡಿಸಿ ಕೆಲವರು ಸಂಭ್ರಮಾಚರಣೆ ಮಾಡಿದ್ದಾರೆ. ಇದು ಪಾಕಿಸ್ತಾನದ ಬಾಲಾಕೋಟ್ ಮೇಲಿನ ದಾಳಿಗೆ ಪ್ರತಿಕಾರ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹೇಳಿಕೊಂಡಿದ್ದಾರೆ.
ಸೇನೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಐವರನ್ನು ಕಾಶ್ಮೀರದ ಸ್ವಾತಂತ್ರ್ಯ ಯೋಧರು ಹೊಡೆದುರುಳಿಸಿದ್ದಾರೆ ಎಂದು ಅಭಿಮಾನ ಮೆರೆಯುವ ಪೋಸ್ಟ್ ಗಳು ಕಂಡು ಬಂದಿವೆ.
ದಾಳಿ ಮಾಡಿದ ಉಗ್ರರು ಸ್ವಾತಂತ್ರ್ಯ ವೀರರಂತೆ
ಹಂದ್ವಾರದಲ್ಲಿ ಯೋಧರ ಹತ್ಯೆ ನಡೆದಿರುವುದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮತ್ತೊಂದು ಗಿಮಿಕ್ ಅಂತೆ ಎಂದು ವ್ಯಕ್ತಿಯೊಬ್ಬ ಪೋಸ್ಟ್ ಮಾಡಿದ್ದಾನೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಸೋತಿರುವುದಕ್ಕೆ ಮೋದಿ ಹೀಗೆ ಮಾಡಿಸಿದ್ದಾರೆ ಎಂದು ಪೋಸ್ಟ್ ಹೇಳಿದೆ.
ಹೌ ಇಸ್ ಜೋಶ್ ಅಂತೆ
ಇನ್ನೂ ಕೆಲವರು ಪಾಕಿಸ್ತಾನದ ಮೇಲೆ ದಾಳಿ ಮಾಡಲು ಬಂದ ವಿಂಗ್ ಕಮ್ಯಾಂಡರ್ ಅಭಿನಂದನ್ ದಾಳಿಗೆ ಇದು ಪ್ರತ್ಯುತ್ತರ ಎಂದು ಟ್ವೀಟ್ ಮಾಡಿದ್ದಾರೆ. ಹೌ ಇಸ್ ಜೋಶ್ ಎಂದು ಲೇವಡಿ ಮಾಡಿದ್ದಾರೆ.
ಪ್ರಧಾನಿ ಮೋದಿ ಕಂಬನಿ
ಇನ್ನು ಉಗ್ರರ ಈ ಕೃತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಯೋಧರೇ ನಿಮ್ಮ ಹೋರಾಟ ವ್ಯರ್ಥ ಆಗದಂತೆ ನೋಡಿಕೊಳ್ಳುತ್ತೇವೆ. ನಿಮ್ಮ ಕುಟುಂಬದ ಜೊತೆ ನಾವಿದ್ದೇವೆ ಎಂದು ಹೇಳಿ ಟ್ವೀಟ್ ಮಾಡಿದ್ದಾರೆ.
ಐವರು ಯೋಧರು ಹುತಾತ್ಮ
ಅರಣ್ಯದ ಮನೆಯೊಂದರಲ್ಲಿ ಅಡಗಿ ಕುಳತಿದ್ದ ಪಾಕಿಸ್ತಾನ ಮೂಲದ ಉಗ್ರರ ಗುಂಪಿನ ಮೇಲೆ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿದ ಸೇನಾ ಪಡೆಯ ಯೋಧರು ಶನಿವಾರ ತಡರಾತ್ರಿವರೆಗೂ ಉಗ್ರರನ್ನು ಹೊಡೆದುರಳಿಸಲು ಕಾಳಗ ನಡೆಸಿದರು. ಈ ವೇಳೆ ಜಮ್ಮ ಕಾಶ್ಮೀರ ಘಟಕದ ಸೇನಾ ಕಮಾಂಡರ್, 21 ರಾಷ್ಟ್ರೀಯ ರೈಫಲ್ಸ್ ನ ಸೇನಾಧಿಕಾರಿ ಹಾಗೂ ಮೂವರು ಯೋಧರು ಮೃತಪಟ್ಟಿದ್ದಾರೆ.