ಕಾಶ್ಮೀರದಲ್ಲಿ 17 ದಿನದಲ್ಲಿ 27 ಭಯೋತ್ಪಾದಕರ ಹತ್ಯೆ!
ಶ್ರೀನಗರ, ಜೂನ್ 16 : ಭಾರತ ಒಂದು ಕಡೆ ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿದೆ. ಮತ್ತೊಂದು ಕಡೆ ಸೈನಿಕರು ಭಯೋತ್ಪಾದಕರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. 17 ದಿನಗಳಲ್ಲಿ 27 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕ ದಿಲ್ಪಾಗ್ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಭದ್ರತಾ ಪಡೆಗಳು 27 ಉಗ್ರರನ್ನು ಕೊಂದು ಹಾಕಿವೆ. ಇದರಿಂದ ಆಕ್ರೋಶಗೊಂಡ ಅವರು ಸಾಮಾನ್ಯ ಜನರನ್ನು ಗುರಿಯಾಗಿಸಿಕೊಂಡಿದ್ದಾರೆ" ಎಂದು ಹೇಳಿದ್ದಾರೆ.
"ಕಾಶ್ಮೀರದಲ್ಲಿ ಶಾಂತಿ ಕಾಪಾಡಲು ನಾವು ಬದ್ಧರಾಗಿದ್ದೇವೆ. ಕಳೆದ 17 ದಿನಗಳಲ್ಲಿ 27 ಉಗ್ರರನ್ನು ನಾವು ಕೊಂದು ಹಾಕಿದ್ದೇವೆ. ಇವರಲ್ಲಿ ಲಷ್ಕರ್, ಜೆಇಎಂ, ಹಿಜ್ಬುಲ್ ಸಂಘಟನೆಯವರು ಸೇರಿದ್ದಾರೆ" ಎಂದು ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.
ದೋಡಾ ಜಿಲ್ಲೆಯಲ್ಲಿ ಭದ್ರತಾ ವ್ಯವಸ್ಥೆ ಕುರಿತು ದಿಲ್ಬಾಗ್ ಸಿಂಗ್ ಪೊಲೀಸರ ಜೊತೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಉಗ್ರರು ಕಾಶ್ಮೀರದಲ್ಲಿ ವ್ಯಾಪಾರಿಗಳು, ಜನ ಸಾಮಾನ್ಯರನ್ನು ಗುರಿಯಾಗಿಸಿಕೊಳ್ಳುತ್ತಿರುವ ಬಗ್ಗೆ ಎಚ್ಚರ ವಹಿಸಬೇಕು ಎಂದು ನಿರ್ದೇಶನಗಳನ್ನು ನೀಡಿದರು.

ದಿನದ ಡ್ರಿಲ್ನಲ್ಲಿ ಭದ್ರತೆ ಬಗ್ಗೆ ಪರಿಶೀಲನೆ
ದಿಲ್ಬಾಗ್ ಸಿಂಗ್ ಅವರು ಸಭೆಯಲ್ಲಿ ಅನಂತ್ ನಾಗ್ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತ ಅಜಯ್ ಪಂಡಿತ ಅವರನ್ನು ಉಗ್ರರು ಹತ್ಯೆ ಮಾಡಿದ ವಿಚಾರನ್ನು ಪ್ರಸ್ತಾಪಿಸಿದರು. ಪ್ರತಿದಿನದ ಡ್ರಿಲ್ನಲ್ಲಿ ಭದ್ರತೆಯ ಬಗ್ಗೆ ಚರ್ಚೆ ನಡೆಯಬೇಕು. ಸಾಮಾನ್ಯ ಜನ ಜೀವನಕ್ಕೆ ತೊಂದರೆಯಾಗದಂತೆ ಎಚ್ಚರವಹಿಸಬೇಕು ಎಂದರು.

ತೀರ್ಮಾನ ತೆಗೆದುಕೊಳ್ಳಲಿದೆ
ಸಾಮಾನ್ಯ ಜನರಿಗೆ ಭದ್ರತೆ ಒದಗಿಸಲು ಪೊಲೀಸರು ಬದ್ಧರಾಗಿದ್ದಾರೆ. ವೈಯಕ್ತಿಕ ಭದ್ರತೆ ಬೇಕಾದವರಿಗೆ ಭದ್ರತೆ ಒದಗಿಸುವ ಕುರಿತು ಕೇಂದ್ರಾಡಳಿತ ಪ್ರದೇಶದ ಭದ್ರತಾ ಸಮಿತಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಪಾಕಿಸ್ತಾನ ವಿರುದ್ಧ ಅಸಮಾಧಾನ
"ಕಳೆದ 5 ತಿಂಗಳಿನಲ್ಲಿ ಉಗ್ರ ಸಂಘಟನೆಗಳ ಹಲವು ಪ್ರಮುಖ ಕಮಾಂಡರ್ಗಳನ್ನು ಹತ್ಯೆ ಮಾಡಲಾಗಿದೆ. ಆದರೆ, ಪಾಕಿಸ್ತಾನ ಬುದ್ಧಿಕಲಿಯುತ್ತಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಹಾಳು ಮಾಡಲು ಉಗ್ರರನ್ನು ಕಳಿಸುವ ಕೆಲಸ ಮಾಡುತ್ತಿದೆ" ಎಂದು ದಿಲ್ಬಾಗ್ ಸಿಂಗ್ ಹೇಳಿದರು.

ಮಾರ್ಚ್ನಿಂದ ಆರಂಭ
"ಈ ಬಾರಿಯ ಬೇಸಿಗೆಯಲ್ಲಿಯೂ ಉಗ್ರರು ಒಳ ನುಸುಳಿದ್ದಾರೆ. ಮಾರ್ಚ್ನಲ್ಲಿ ಒಳಗೆ ಬಂದಿದ್ದ ಉಗ್ರರನ್ನು 5 ದಿನದಲ್ಲಿ ಕೊಂದು ಹಾಕಲಾಗಿತ್ತು. ಪೂಂಚ್ ಮತ್ತು ರಾಜೋರಿ ಭಾಗದ ಅಂತರಾಷ್ಟ್ರೀಯ ಗಡಿ ಮೂಲಕ ಹಲವರು ಒಳ ನುಸುಳಿದ್ದರು" ಎಂದು ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.












Click it and Unblock the Notifications