KL Rahul: ಕನ್ನಡಿಗ ಕೆಎಲ್ ರಾಹುಲ್ಗೆ ಭಾರತ ತಂಡದಲ್ಲಿ ಸಿಗಲ್ವಾ ಅವಕಾಶ?
ಕೆಎಲ್ ರಾಹುಲ್, ಭಾರತ ತಂಡದ ಪ್ರತಿಭಾವಂತ ಆಟಗಾರ. ಪ್ರತಿಭೆ ಇದ್ದರೂ ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗುವ ಕೆಎಲ್ ರಾಹುಲ್ ಸಾಕಷ್ಟು ಟೀಕೆಗೆ ಒಳಗಾಗುತ್ತಾರೆ. ಬೇರೆ ಆಟಗಾರರು ವಿಫಲವಾದಾಗ ಸಿಗುವ ಬೆಂಬಲ ಕೆಎಲ್ ರಾಹುಲ್ಗೆ ಸಿಕ್ಕಿದ್ದು ಕಡಿಮೆ. ಇದೇ ಕಾರಣಕ್ಕೆ ಒಂದು ಪಂದ್ಯದಲ್ಲಿ ವಿಫಲವಾದರೆ ಅವರನ್ನು ತಂಡದಿಂದ ಕೈಬಿಡಬೇಕು ಎಂದು ಕೆಲವರು ವಾದಿಸುತ್ತಾರೆ. ನ್ಯೂಜಿಲೆಂಡ್ ವಿರುದ್ಧ ವಿಫಲವಾದ ಬಳಿಕ ಅವರಿಗೆ ಮುಂದಿನ ಪಂದ್ಯಗಳಲ್ಲಿ ಅವಕಾಶ ಸಿಗುತ್ತಾ ಎನ್ನುವ ಪ್ರಶ್ನೆ ಎದುರಾಗಿದೆ.
ಬೆಂಗಳೂರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಮೊದಲ ಇನ್ನಿಂಗ್ಸ್ನಲ್ಲಿ ಸೊನ್ನೆಗೆ ಔಟಾದರೆ, ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 12 ರನ್ ಗಳಿಸಿ ಔಟಾದರು. ಮೊದಲ ಇನ್ನಿಂಗ್ಸ್ನಲ್ಲಿ ಔಟಾಗಿದ್ದರ ಬಗ್ಗೆ ತಕರಾರಿಲ್ಲವಾದರೂ, ಎರಡನೇ ಇನ್ನಿಂಗ್ಸ್ನಲ್ಲಿ ಕೆಎಲ್ ರಾಹುಲ್ ಉತ್ತಮವಾಗಿ ಆಡಿದ್ದರೆ ಭಾರತದ ಸೋಲನ್ನಾದರೂ ತಪ್ಪಿಸಬಹುದಿತ್ತು ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಬ್ ಪಂತ್, ಸರ್ಫರಾಜ್ ಖಾನ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿತ್ತು, ಆದರೆ ಸರ್ಫರಾಜ್ ಖಾನ್ ಮತ್ತು ರಿಷಬ್ ಪಂತ್ ಔಟಾದ ಬಳಿಕ ಭಾರತ ಬೇಗನೆ ಆಲೌಟ್ ಆಯಿತು. ಈ ಸಂದರ್ಭದಲ್ಲಿ ಕೆಎಲ್ ರಾಹುಲ್ ಕ್ರೀಸ್ನಲ್ಲಿದ್ದು ಕನಿಷ್ಠ ಅರ್ಧಶತಕ ಗಳಿಸಿ, ಇಡೀ ದಿನ ಆಡಿದ್ದರೂ ಭಾರತದ ಸೋಲನ್ನು ತಪ್ಪಿಸಲು ಅವಕಾಶವಿತ್ತು ಎನ್ನಲಾಗಿದೆ. ಆದರೆ ಕೆಎಲ್ ರಾಹುಲ್ 12 ರನ್ ಗಳಿಸಿ ಔಟಾದರು.
ರೋಹಿತ್ ಶರ್ಮಾ ಹೇಳಿದ್ದೇನು?
ಮೊದಲ ಟೆಸ್ಟ್ನಲ್ಲಿ ಶುಭಮನ್ ಗಿಲ್ ಬದಲಾಗಿ ಅವಕಾಶ ಪಡೆದಿದ್ದ ಸರ್ಫರಾಜ್ ಖಾನ್ 150 ರನ್ ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಮೂಲಕ ಎರಡನೇ ಟೆಸ್ಟ್ನಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳಲಿದ್ದಾರೆ. ಎರಡನೇ ಟೆಸ್ಟ್ಗೆ ಶುಭಮನ್ ಗಿಲ್ ಫಿಟ್ ಆಗಲಿದ್ದು, ಕೆಎಲ್ ರಾಹುಲ್ ಬದಲಾಗಿ ಗಿಲ್ ಆಡುತ್ತಾರಾ ಎನ್ನುವ ಪ್ರಶ್ನೆ ಕೂಡ ಶುರುವಾಗಿದೆ.
ಮೊದಲ ಟೆಸ್ಟ್ ಸೋಲಿನ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೆಲವು ಬದಲಾವಣೆ ಮಾಡುವ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಎರಡನೇ ಟೆಸ್ಟ್ನಲ್ಲಿ ಕೆಎಲ್ ರಾಹುಲ್ ಅಥವಾ ಸರ್ಫರಾಜ್ ಖಾನ್ ಯಾರು ಅವಕಾಶ ಪಡೆಯುತ್ತಾರೆ ಎನ್ನುವ ಪ್ರಶ್ನೆ ಉತ್ತರ ಕೊಟ್ಟ ಅವರು, ಆಟಗಾರರಿಗೆ ತಾವು ಎಲ್ಲಿದ್ದೇವೆ ಎನ್ನುವುದು ತಿಳಿದಿದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.
ರೋಹಿತ್ ರಾಹುಲ್, ಗಿಲ್ ಮತ್ತು ಸರ್ಫರಾಜ್ ಮೂವರಲ್ಲಿ ಯಾರು ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಪಡೆಯುತ್ತಾರೆ ಎನ್ನುವ ಬಗ್ಗೆ ಮಾತನಾಡಿ, ತಮ್ಮ ವೃತ್ತಿ ಜೀವನದಲ್ಲಿ ಅವರು ಎಲ್ಲಿದ್ದಾರೆ, ಏನು ಮಾಡಬೇಕು ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿದೆ ಎಂದರು. ಒಂದು ಪಂದ್ಯ ಅಥವಾ ಒಂದು ಸರಣಿಯ ಆಧಾರದ ಮೇಲೆ ನಾವು ಮನಸ್ಥಿತಿ ಬದಲಾಯಿಸಿಕೊಳ್ಳುವುದಿಲ್ಲ. ತಂಡದ ಪರಿಸ್ಥಿತಿ ಏನು ಎಂದು ಅವರಿಗೆ ತಿಳಿದಿದೆ, ಅವಕಾಶ ಪಡೆಯುವ ಯಾರಾದರೂ ಆಟದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಬೇಕು. ಇದು ತುಂಬಾ ಸರಳ ಸಂದೇಶ, ಈ ಪಂದ್ಯದಲ್ಲಿ ಶುಭಮನ್ ಆಡದೇ ಇರುವುದು ದುರದೃಷ್ಟಕರ ಆದರೆ ಸರ್ಫರಾಜ್ ಖಾನ್ ಶತಕ ಗಳಿಸಿ ಕೊರತೆಯನ್ನು ನೀಗಿಸಿದ್ದಾರೆ ಎಂದರು.
ರೋಹಿತ್ ಶರ್ಮಾ ಅವರ ಮಾತುಗಳನ್ನು ಅವಲೋಕಿಸಿದಾಗ ಕೆಎಲ್ ರಾಹುಲ್ ಎರಡನೇ ಟೆಸ್ಟ್ನಲ್ಲಿ ಅವಕಾಶ ಪಡೆಯುವ ಸಾಧ್ಯತೆ ಕಡಿಮೆ ಇದೆ. ಬೌಲಿಂಗ್ನಲ್ಲಿ ಕೂಡ ಬದಲಾವಣೆ ಮಾಡುವ ಸಾಧ್ಯತೆ ಇದೆ. ಕುಲದೀಪ್ ಬದಲಾಗಿ ಆಕಾಶ್ ದೀಪ್ ತಂಡಕ್ಕೆ ವಾಪಸಾಗುವ ನಿರೀಕ್ಷೆ ಇದೆ.












Click it and Unblock the Notifications