ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು?
Who Is Aryan Birla?: ಐಪಿಎಲ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗ ಹೊಸ ಮಾಲೀಕತ್ವದ ಅಡಿಯಲ್ಲಿ ಹೊಸ ಪಯಣ ಆರಂಭಿಸಲು ಸಜ್ಜಾಗಿದೆ. ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಬಲಿಷ್ಠ ಒಕ್ಕೂಟವೊಂದು ಸುಮಾರು 1.78 ಬಿಲಿಯನ್ ಡಾಲರ್ (ಸುಮಾರು 16,600 ಕೋಟಿ ರೂಪಾಯಿಗೂ ಅಧಿಕ) ಭಾರಿ ಮೊತ್ತಕ್ಕೆ ಆರ್ಸಿಬಿ ಫ್ರಾಂಚೈಸಿಯನ್ನು ಖರೀದಿಸಿದೆ.
ಈ ಬೃಹತ್ ಒಪ್ಪಂದದಲ್ಲಿ ಕೇವಲ ಆದಿತ್ಯ ಬಿರ್ಲಾ ಗ್ರೂಪ್ ಮಾತ್ರವಲ್ಲದೆ, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಅಮೆರಿಕದ ಬ್ಲ್ಯಾಕ್ಸ್ಟೋನ್ ಇನ್ವೆಸ್ಟ್ಮೆಂಟ್ ಮತ್ತು ಡೇವಿಡ್ ಬ್ಲಿಟ್ಜರ್ ಅವರ ಬೋಲ್ಟ್ ವೆಂಚರ್ಸ್ ಕೂಡ ಪಾಲುದಾರರಾಗಿದ್ದಾರೆ. ಡಿಯಾಜಿಯೊ ಪಿಎಲ್ಸಿಯ ಅಂಗಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ನಿಂದ ಆರ್ಸಿಬಿಯ ಶೇಕಡ 100ರಷ್ಟು ಪಾಲನ್ನು ಈ ಒಕ್ಕೂಟವು ತನ್ನದಾಗಿಸಿಕೊಂಡಿದೆ. ವಿಶೇಷವೆಂದರೆ, ಈ ಒಪ್ಪಂದದಲ್ಲಿ ಆರ್ಸಿಬಿಯ ಪುರುಷರ ಹಾಗೂ ಮಹಿಳಾ ತಂಡಗಳೆರಡೂ ಸೇರಿವೆ.

ಯಾರಿದು ಆರ್ಯಮನ್ ಬಿರ್ಲಾ?
ಆರ್ಸಿಬಿಯ ಈ ಹೊಸ ಪರ್ವದಲ್ಲಿ ಫ್ರಾಂಚೈಸಿಯ ನೂತನ ಅಧ್ಯಕ್ಷರಾಗಿ ಆರ್ಯಮನ್ ಬಿರ್ಲಾ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಇವರು ಆದಿತ್ಯ ಬಿರ್ಲಾ ಗ್ರೂಪ್ನ ಮುಖ್ಯಸ್ಥ ಕುಮಾರ್ ಮಂಗಳಂ ಬಿರ್ಲಾ ಅವರ ಪುತ್ರ. ಕೇವಲ ಉದ್ಯಮಿಯಷ್ಟೇ ಅಲ್ಲದೆ, ಆರ್ಯಮನ್ ಅವರಿಗೆ ಕ್ರಿಕೆಟ್ ಜೊತೆಗೂ ಅವಿನಾಭಾವ ಸಂಬಂಧವಿದೆ.
ಆರ್ಯಮನ್ ಕ್ರಿಕೆಟ್ ಹಿನ್ನೆಲೆ: 28 ವರ್ಷದ ಆರ್ಯಮನ್ ಬಿರ್ಲಾ ಅವರು ಮಧ್ಯಪ್ರದೇಶ ತಂಡದ ಪರವಾಗಿ ದೇಶೀಯ ಕ್ರಿಕೆಟ್ ಆಡಿದ್ದಾರೆ. 9 ಪ್ರಥಮ ದರ್ಜೆ ಪಂದ್ಯಗಳಿಂದ 414 ರನ್ ಗಳಿಸಿರುವ ಇವರು, ಈಡನ್ ಗಾರ್ಡನ್ಸ್ನಲ್ಲಿ ಬಂಗಾಳದ ವಿರುದ್ಧ ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. ಪ್ರಸ್ತುತ ಆರ್ಸಿಬಿ ನಾಯಕ ರಜತ್ ಪಾಟಿದಾರ್ ಮತ್ತು ಇತ್ತೀಚೆಗೆ ತಂಡ ಸೇರಿದ ವೆಂಕಟೇಶ್ ಅಯ್ಯರ್ ಅವರೊಂದಿಗೆ ಆರ್ಯಮನ್ ಅವರು ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದ ಅನುಭವ ಹೊಂದಿದ್ದಾರೆ.
ಸವಾಲುಗಳನ್ನು ಮೆಟ್ಟಿ ನಿಂತ ಯುವ ನಾಯಕ
2018ರ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಯ್ಕೆಯಾಗಿದ್ದರೂ, ಮೈದಾನಕ್ಕಿಳಿಯುವ ಅವಕಾಶ ಸಿಕ್ಕಿರಲಿಲ್ಲ. ಆ ಸಮಯದಲ್ಲಿ ಮಾನಸಿಕ ಒತ್ತಡ ಮತ್ತು ಆತಂಕದ ಕಾರಣದಿಂದಾಗಿ ಅವರು ಕ್ರಿಕೆಟ್ನಿಂದ ವಿರಾಮ ಪಡೆದಿದ್ದರು. "ನನ್ನ ಮಾನಸಿಕ ಆರೋಗ್ಯವೇ ನನಗೆ ಮುಖ್ಯ, ನನ್ನನ್ನು ನಾನು ಅರ್ಥಮಾಡಿಕೊಳ್ಳಲು ಸಮಯ ಬೇಕು" ಎಂದು ಅಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದ ಇವರು, ಅನೇಕರಿಗೆ ಸ್ಫೂರ್ತಿಯಾಗಿದ್ದರು.
ಹೊಸ ಜವಾಬ್ದಾರಿ, ಹೊಸ ಭರವಸೆ
ಪ್ರಸ್ತುತ ಆದಿತ್ಯ ಬಿರ್ಲಾ ಮ್ಯಾನೇಜ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ನ ನಿರ್ದೇಶಕರಾಗಿರುವ ಆರ್ಯಮನ್, ಈಗ ಆರ್ಸಿಬಿಯ ಭವಿಷ್ಯ ರೂಪಿಸಲು ಸಜ್ಜಾಗಿದ್ದಾರೆ. "ಕ್ರೀಡೆ ಮತ್ತು ಗ್ರಾಹಕ ವ್ಯವಹಾರಗಳ ಅನುಭವದೊಂದಿಗೆ ಆರ್ಸಿಬಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದು ನಮ್ಮ ಗುರಿ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸೀಸನ್ ಮುಗಿಯುವವರೆಗೆ ಡಿಯಾಜಿಯೊ ಮಾಲೀಕತ್ವ ಮುಂದುವರಿಯಲಿದ್ದು, ನಂತರ ಪೂರ್ಣ ಪ್ರಮಾಣದ ಹಸ್ತಾಂತರ ನಡೆಯಲಿದೆ. ಈ ಬದಲಾವಣೆಯು ಆರ್ಸಿಬಿ ಅಭಿಮಾನಿಗಳಲ್ಲಿ 'ಈ ಸಲ ಕಪ್ ನಮ್ದೇ' ಎನ್ನುವ ಭರವಸೆಯನ್ನು ಮತ್ತಷ್ಟು ಹೆಚ್ಚಿಸಿದೆ.












Click it and Unblock the Notifications