ಲೈವ್ ಕಾಮೆಂಟರಿಯಲ್ಲೇ ವೀರೇಂದರ್ ಸೆಹ್ವಾಗ್-ಆರ್.ಅಶ್ವಿನ್ ಕಿತ್ತಾಟ; ಹಿರಿಯ ಆಟಗಾರರ ವರ್ತನೆಗೆ ಕ್ರೀಡಾಭಿಮಾನಿಗಳ ಆಕ್ರೋಶ
ಐಪಿಎಲ್ 2026 ಕೇವಲ ಮೈದಾನದ ಆಟದಿಂದ ಮಾತ್ರವಲ್ಲದೆ, ಈಗ ಕಾಮೆಂಟರಿ ಬಾಕ್ಸ್ನಲ್ಲಿ ನಡೆಯುತ್ತಿರುವ ವಿವಾದಗಳಿಂದಲೂ ಸುದ್ದಿಯಾಗುತ್ತಿದೆ. ಶನಿವಾರ ನಡೆದ ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ವೇಳೆ ಭಾರತದ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಮತ್ತು ಹಿರಿಯ ಸ್ಪಿನ್ನರ್ ಆರ್.ಅಶ್ವಿನ್ ನಡುವೆ ನಡೆದ ನೇರಪ್ರಸಾರದ ವಾಕ್ಸಮರ ಈಗ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ಆರ್.ಅಶ್ವಿನ್ ಅವರು ಜಿಯೋಸ್ಟಾರ್ ಲೈವ್ನಲ್ಲಿ ಕಾಮೆಂಟರಿ ಮಾಡಲು ಆಗಮಿಸಿದ್ದರು. ಈ ವೇಳೆ ಅಲ್ಲಿಯೇ ಇದ್ದ ಸೆಹ್ವಾಗ್, ಅಶ್ವಿನ್ ಅವರ ಕಾಲೆಳೆಯುವ ಉದ್ದೇಶದಿಂದ ವ್ಯಂಗ್ಯವಾಡಿದರು. "ಇವತ್ತಾದರೂ ಜನ ತಮ್ಮ ಹೃದಯದಿಂದ ಮಾತನಾಡುತ್ತಾರೆ ಮತ್ತು ಮಾತನಾಡುವ ಮೊದಲು ಅತಿಯಾಗಿ ಯೋಚಿಸುವುದಿಲ್ಲ ಎಂದು ಭಾವಿಸುತ್ತೇನೆ," ಎಂದು ಸೆಹ್ವಾಗ್ ಹೇಳಿದರು.

ಸೆಹ್ವಾಗ್ಗೆ ಅಶ್ವಿನ್ ತಿರುಗೇಟು
ಸೆಹ್ವಾಗ್ ಅವರ ಈ ಮಾತಿನಿಂದ ಅಸಮಾಧಾನಗೊಂಡ ಅಶ್ವಿನ್ ತಕ್ಷಣವೇ ತಿರುಗೇಟು ನೀಡಿದರು. "ನನ್ನ ಪೋಷಕರು ನನಗೆ ಯಾವಾಗಲೂ ಮಾತನಾಡುವ ಮುನ್ನ ಯೋಚಿಸಬೇಕೆಂದು ಕಲಿಸಿದ್ದಾರೆ. ನಾನು ಯೋಚನೆ ಮಾಡದೆ ಯಾವುದೇ ಮಾತನ್ನು ಆಡುವುದಿಲ್ಲ" ಎಂದು ಖಡಕ್ ಆಗಿ ಉತ್ತರಿಸಿದರು. ಈ ಸಂಭಾಷಣೆಯು ಇಬ್ಬರ ನಡುವೆ ದೊಡ್ಡ ವಾಗ್ವಾದಕ್ಕೆ ಕಾರಣವಾಯಿತು.
ಪಂದ್ಯದ ವಿಶ್ಲೇಷಣೆ ಮಾಡಬೇಕಾದವರು ಹೀಗೆ ಕಿತ್ತಾಡಿಕೊಂಡಿರುವುದು ಬಿಸಿಸಿಐ ಗಮನಕ್ಕೆ ಬಂದಿದ್ದು, ಮೂಲಗಳ ಪ್ರಕಾರ ಈ ಇಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮಂಡಳಿ ಚಿಂತನೆ ನಡೆಸಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಬಿಸಿಸಿಐನಿಂದ ಇನ್ನೂ ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ
ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. "ಅಶ್ವಿನ್ ಅಲ್ಲಿರುವುದು ಕ್ರಿಕೆಟ್ ವಿಶ್ಲೇಷಣೆ ಮಾಡುವುದಕ್ಕೆ ಹೊರತು ಸೆಹ್ವಾಗ್ ಅವರಂತೆ ಸಮಯ ಕಳೆಯಲು ಅಲ್ಲ," ಎಂದು ಕೆಲವರು ಅಶ್ವಿನ್ ಬೆಂಬಲಕ್ಕೆ ನಿಂತಿದ್ದಾರೆ. ಅಲ್ಲದೆ, "ಹಿರಿಯ ಆಟಗಾರರಾದ ಸೆಹ್ವಾಗ್ ಹೇಗೆ ವೃತ್ತಿಪರವಾಗಿ ನಡೆದುಕೊಳ್ಳಬೇಕು ಎಂಬುದನ್ನು ಕಲಿಯಬೇಕು," ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಂದೆಡೆ, "ಅಶ್ವಿನ್ ಅವರಿಗೆ ತಮಾಷೆಯನ್ನು ಸಹಿಸಿಕೊಳ್ಳುವ ಗುಣವಿಲ್ಲ, ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲೇ ವಿಶ್ಲೇಷಣೆ ಮಾಡುವುದು ಒಳಿತು," ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.












Click it and Unblock the Notifications