Virat Kohli: 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿ ನೀಡಿದ್ದಕ್ಕೆ ಕೊಹ್ಲಿ ಅಸಮಾಧಾನ! ಇದು ಕನ್ನಡಿಗನಿಗೆ ಸಿಗಬೇಕು ಎಂದ ವಿರಾಟ್
ವಿರಾಟ್ ಕೊಹ್ಲಿ ಮತ್ತೊಮ್ಮೆ ತಾನೇಕೆ ಚೇಸ್ ಮಾಸ್ಟರ್ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಭಾನುವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 54 ಎಸೆತಗಳಲ್ಲಿ ಅಜೇಯ 73 ರನ್ ಗಳಿಸಿದ ವಿರಾಟ್ ಕೊಹ್ಲಿ ಆರ್ ಸಿಬಿ ಸುಲಭ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ದೇವದತ್ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಆರ್ ಸಿಬಿ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
48 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಸೋಲಿನ ಸೇಡನ್ನು ಆರ್ ಸಿಬಿ ಮುಲ್ಲನ್ಪುರದಲ್ಲಿ ತೀರಿಸಿಕೊಂಡಿತು. ದೇವದತ್ ಪಡಿಕ್ಕಲ್ (61) ಅವರೊಂದಿಗೆ ಕೊಹ್ಲಿ 103 ರನ್ಗಳ ಜೊತೆಯಾಟ ಆಡುವ ಮೂಲಕ ಆರ್ ಸಿಬಿ ಗೆಲುವನ್ನು ಸುಲಭವಾಗಿಸಿದರು. ಬೆಂಗಳೂರಿನ ಪಂದ್ಯದಲ್ಲಿ ಅವಕಾಶ ಸಿಗದೇ ಇದ್ದರೂ ದೇವದತ್ ಪಡಿಕ್ಕಲ್ ತಾನೇಕೆ ತಂಡಕ್ಕೆ ಅವಶ್ಯಕ ಎನ್ನುವುದನ್ನು ಬ್ಯಾಟಿಂಗ್ ಮೂಲಕವೇ ಸಾಬೀತುಪಡಿಸಿದರು.

ವಿರಾಟ್ ಕೊಹ್ಲಿ 2025ರ ಐಪಿಎಲ್ನಲ್ಲಿ ಉತ್ತಮ ಫಾರ್ಮ್ನಲ್ಲಿದ್ದಾರೆ. ಈಗಾಗಲೇ 4 ಅರ್ಧಶತಕ ಬಾರಿಸಿರುವ ಅವರು ಆರ್ ಸಿಬಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಆರ್ ಸಿಬಿ ಆಡಿರುವ 8 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು 10 ಅಂಕಗಳೊಂದಿಗೆ ಈಗ 3ನೇ ಸ್ಥಾನಕ್ಕೇರಿದೆ.
ಪ್ರಶಸ್ತಿ ಬಗ್ಗೆ ವಿರಾಟ್ ಕೊಹ್ಲಿ ಬೇಸರ
ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಅವರಿಗೆ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ನೀಡಲಾಯಿತು. ಫೀಲ್ಡಿಂಗ್ನಲ್ಲಿ ರನೌಟ್ ಮಾಡಿದ್ದು, ಅಜೇಯರಾಗಿ ಪಂದ್ಯವನ್ನು ಗೆಲ್ಲಿಸಿದ್ದಕ್ಕೆ ಅವರನ್ನು ಪ್ರಶಸ್ತಿಗೆ ಪರಿಗಣಿಸಲಾಯಿತು. ಆದರೆ ವಿರಾಟ್ ಕೊಹ್ಲಿ ಅವರೇ ತಮಗೆ ಪ್ರಶಸ್ತಿ ಸಿಕ್ಕಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಇದು ನಿಜವಾಗಿ ದೇವದತ್ ಪಡಿಕ್ಕಲ್ ಅವರಿಗೆ ಸಲ್ಲಬೇಕು ಎಂದರು.
"ದೇವ್ ಇಂದು ವ್ಯತ್ಯಾಸ ಉಂಟು ಮಾಡಿದ್ದಾರೆಂದು ನಾನು ಭಾವಿಸಿದ್ದೇನೆ, ಈ ಪ್ರಶಸ್ತಿ ಅವನಿಗೆ ಹೋಗಬೇಕು, ಅವರು ಅದನ್ನು ನನಗೆ ಏಕೆ ನೀಡಿದ್ದಾರೆಂದು ನನಗೆ ತಿಳಿದಿಲ್ಲ. ನಾನು ಸೆಟ್ ಆದ ಬಳಿಕ ವೇಗವಾಗಿ ಬ್ಯಾಟಿಂಗ್ ಮಾಡಬಲ್ಲೆ, ಆದರೆ ಬೇರೆ ಆಟಗಾರರ ಸಾಮರ್ಥ್ಯಗಳನ್ನು ಅರ್ಥಮಾಡಿಕೊಳ್ಳಲು ನಾನು ಬಯಸುತ್ತೇನೆ. ಅವರು ಉತ್ತಮವಾಗಿ ಆಡಿದರೆ ನಾನು ಇನ್ನೊಂದು ಬದಿಯಲ್ಲಿ ಎಚ್ಚರಿಕೆಯಿಂದ ಆಡುತ್ತೇನೆ" ಎಂದು ಕೊಹ್ಲಿ ಹೇಳಿದ್ದಾರೆ.
"ನಾವು ಪರಿಸ್ಥಿತಿಗೆ ಚನ್ನಾಗಿ ಹೊಂದಿಸಿಕೊಂಡಿದ್ದೇವೆ, ದೇವದತ್ ಪಡಿಕ್ಕಲ್ ನನ್ನ ಸುತ್ತಲೂ ಆಡಬಹುದು, ಬಹುಶಃ ರಜತ್ ನನ್ನ ಸುತ್ತಲೂ ಆಡಬಹುದು. ಟಿ 20 ಕ್ರಿಕೆಟ್ನಲ್ಲಿ ರನ್ ಚೇಸ್ನಲ್ಲಿ, ಒಂದು ಜೊತೆಯಾಟ ಸಾಕು ಎಂದು ನಮಗೆ ತಿಳಿದಿದೆ. ಅಗತ್ಯವಿದ್ದರೆ, ನಾನು ವೇಗವನ್ನು ಹೆಚ್ಚಿಸಬಲ್ಲೆ" ಎಂದು ಕೊಹ್ಲಿ ಹೇಳಿದರು,
"ಇದು ನಮಗೆ ಬಹಳ ಮುಖ್ಯವಾದ ಪಂದ್ಯವಾಗಿತ್ತು. 8 ಪಾಯಿಂಟ್ಗಳಿಂದ 10 ಪಾಯಿಂಟ್ಗಳಿಗೆ ಹೋದಾಗ ಅದು ಭಾರಿ ವ್ಯತ್ಯಾಸ ಉಂಟುಮಾಡುತ್ತದೆ. ತವರಿನಿಂದ ಹೊರಗೆ ಉತ್ತಮವಾದ ಕ್ರಿಕೆಟ್ ಆಡಿದ್ದೇವೆ. ಪ್ರತಿ ಪಂದ್ಯದಲ್ಲೂ ನಾವು 2 ಅಂಕಪಡೆಯುವ ಮನಸ್ಥಿತಿ ಹೊಂದಿರಬೇಕು" ಎಂದಿದ್ದಾರೆ.
"ಈ ಬಾರಿ ಮೆಗಾಹರಾಜಿನಲ್ಲಿ ಉತ್ತಮ ತಂಡವನ್ನು ಆಯ್ಕೆ ಮಾಡಲಾಗಿದೆ. ತಂಡಕ್ಕೆ ಏನು ಬೇಕು ಎನ್ನುವುದು ಅವರಿಗೆ ತುಂಬಾ ಚನ್ನಾಗಿ ತಿಳಿದಿತ್ತು, ಕಳೆದ ಆವೃತ್ತಿಗಳಲ್ಲಿ ಅದು ಕಾಣೆಯಾಗಿತ್ತು. ಈಗ ತಂಡದಲ್ಲಿ ಉತ್ಸಾಹವನ್ನು ನೋಡಬಹುದು" ಎಂದು ಕೊಹ್ಲಿ ಹೇಳಿದರು.












Click it and Unblock the Notifications