India vs Australia: ಅಭ್ಯಾಸ ಪಂದ್ಯದಲ್ಲೂ ಭಾರತ ತಂಡದ ವೈಫಲ್ಯ
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ ಸೋಲು ಕಂಡಿರುವ ಭಾರತ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಗಾಗಿ ಆಸ್ಟ್ರೇಲಿಯಾಗೆ ಪ್ರಯಾಣ ಮಾಡಿದೆ. ಭಾರತದಲ್ಲಿ ಸೋಲಿನ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಗೆಲ್ಲುವುದು ಟೀಂ ಇಂಡಿಯಾಕ್ಕೆ ಅನಿವಾರ್ಯವಾಗಿದೆ. ನವೆಂಬರ್ 22ರಂದು ಮೊದಲ ಟೆಸ್ಟ್ ಆರಂಭವಾಗಲಿದ್ದು, ಅದಕ್ಕೂ ಮುನ್ನ ಯಾವುದೇ ಅಭ್ಯಾಸ ಪಂದ್ಯ ಆಡದೆ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲಿದೆ.
ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯ ನಡೆಯದ ಕಾರಣ, ಭಾರತ ಎರಡು ತಂಡಗಳನ್ನಾಗಿ ಮಾಡಿಕೊಂಡು ಅಭ್ಯಾಸ ಪಂದ್ಯವನ್ನಾಡಿದೆ. ಭಾರತ ಮತ್ತು ಭಾರತ ಎ ತಂಡಗಳು ಮುಖಾಮುಖಿಯಾಗಿದ್ದು ಮೂರು ದಿನದ ಅಭ್ಯಾಸ ಪಂದ್ಯವನ್ನಾಡುತ್ತಿದೆ. ಶುಕ್ರವಾರ ಪಂದ್ಯ ಆರಂಭವಾಗಿದ್ದು, ಭಾರತದ ಬ್ಯಾಟರ್ ಗಳ ಪ್ರದರ್ಶನ ನೋಡಿ ಅಭಿಮಾನಿಗಳ ಚಿಂತೆ ಹೆಚ್ಚಾಗಿದೆ.

ವೆಸ್ಟ್ ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಅಭ್ಯಾಸ ಪಂದ್ಯ ನಡೆಯುತ್ತಿದ್ದು, ಅಭಿಮಾನಿಗಳಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ವಿರಾಟ್ ಕೊಹ್ಲಿ ಅಭ್ಯಾಸ ಪಂದ್ಯದಲ್ಲಿ ವಿಫಲವಾಗಿದ್ದು, ರಿಷಬ್ ಪಂತ್ ಕೂಡ ದೊಡ್ಡ ಸ್ಕೋರ್ ಮಾಡುವಲ್ಲಿ ವಿಫಲವಾಗಿದೆ.
15 ರನ್ ಗಳಿಸಿ ಔಟಾದ ವಿರಾಟ್
ಮಾಹಿತಿ ಪ್ರಕಾರ, ವಿರಾಟ್ ಕೊಹ್ಲಿ ಕೇವಲ 15 ರನ್ ಗಳಿಸಿ ಮುಖೇಶ್ ಕುಮಾರ್ ಬೌಲಿಂಗ್ನಲ್ಲಿ ಔಟಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಿಷಬ್ ಪಂತ್ ಕೂಡ ಅಭ್ಯಾಸ ಪಂದ್ಯದಲ್ಲಿ ವಿಫಲವಾಗಿದ್ದಾರೆ. 19 ರನ್ ಗಳಿಸಿದ ಅವರು ನಿತೀಶ್ ಕುಮಾರ್ ರೆಡ್ಡಿ ಬೌಲಿಂಗ್ನಲ್ಲಿ ಔಟಾದರು. ಭಾರತದ ಭರವಸೆಯ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಕೂಡ 15 ರನ್ಗಳಿಗೆ ಔಟಾಗಿದ್ದು ಚಿಂತೆಯನ್ನು ಹೆಚ್ಚಿಸಿದೆ. 15 ರನ್ಗಳಿಗೆ ಔಟಾಗುತ್ತಿದ್ದಂತೆ ವಿರಾಟ್ ಕೊಹ್ಲಿ ಕೂಡಲೇ ನೆಟ್ಸ್ಗೆ ತೆರಳಿ ಅಭ್ಯಾಸ ಆರಂಭಿಸಿದರು.
ಗಾಯಗೊಂಡ ಕೆಎಲ್ ರಾಹುಲ್
ಪಂದ್ಯದ ಸಮಯದಲ್ಲಿ ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದ ಮೈದಾನದಿಂದ ಹೊರನಡೆದರು. ಅವರ ಗಾಯದ ಪ್ರಮಾಣ ಎಷ್ಟಿದೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಮೊದಲ ಟೆಸ್ಟ್ಗೆ ನಾಯಕ ರೋಹಿತ್ ಶರ್ಮಾ ಲಭ್ಯವಿಲ್ಲದ ಕಾರಣ ಕೆಎಲ್ ರಾಹುಲ್ ಆಡುವ ಸಾಧ್ಯತೆ ಇದ್ದು, ಅವರು ಗಾಯಗೊಂಡಿರುವುದು ಆತಂಕ ಮೂಡಿಸಿದೆ.
ಮೊದಲ ಟೆಸ್ಟ್ ಪರ್ತ್ನಲ್ಲಿ ನಡೆಯಲಿದ್ದು, ಭಾರತದ ಬ್ಯಾಟರ್ ಗಳಿಗೆ ಆಸ್ಟ್ರೇಲಿಯಾ ವೇಗಿಗಳಾದ ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್ವುಡ್ ಮತ್ತು ಪ್ಯಾಟ್ ಕಮ್ಮಿನ್ಸ್ ಸವಾಲಾಕಲು ಸಜ್ಜಾಗಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ತನ್ನ ಪ್ರಾಬಲ್ಯ ಮುಂದುವರೆಸಲು ಭಾರತ ಸಜ್ಜಾಗಿದೆ.












Click it and Unblock the Notifications