ಭಾರತೀಯ ಫುಟ್ಬಾಲ್ನಲ್ಲಿ ಪ್ರತಿಭೆಗೆ ಕೊರತೆಯಿಲ್ಲ, ಆದ್ರೆ ಆ ಒಂದು ವಿಚಾರಕ್ಕೆ ಕೋಪ ನೆತ್ತಿಗೇರುತ್ತದೆ: ಸುನೀಲ್ ಛೆಟ್ರಿ
Sunil Chhetri: ಫುಟ್ಬಾಲ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಫಿಫಾ 2026 ವಿಶ್ವಕಪ್ ಕೆಲಚೇ ದಿನಗಳಲ್ಲಿ ಆರಂಭವಾಗಲಿದೆ. ಈ ಕುರಿತು ಭಾರತೀಯ ಫುಟ್ಬಾಲ್ ದಂತಕಥೆ ಸುನಿಲ್ ಛೆಟ್ರಿ ಅವರು 'ದಿ ಚಾಂಪಿಯನ್ ಕೋಡ್' ವಿಶೇಷ ಪಾಡ್ಕಾಸ್ಟ್ನಲ್ಲಿ ಮಾತನಾಡಿ ಅಚ್ಚರಿ ಮಾಹಿತಿಗಳನ್ನು ರಿವೀಲ್ ಮಾಡಿದ್ದಾರೆ. ನಮ್ಮ ವ್ಯವಸ್ಥೆಯಲ್ಲಿ 99 ಲೋಪಗಳಿರಬಹುದು, ಆದರೆ ಪ್ರತಿಭೆಯ ಕೊರತೆಯಂತೂ ಖಂಡಿತಾ ಇಲ್ಲ,' ಎಂದು ಹೇಳಿದ್ದಾರೆ. ಇದೇ ವೇಳೆ ಇನ್ನೂ ಹಲವು ವಿಚಾರಗಳನ್ನ ಬಿಚ್ಚಿಟ್ಟಿದ್ದಾರೆ.
ಭಾರತೀಯ ಫುಟ್ಬಾಲ್ ಇತಿಹಾಸದ ದಂತಕಥೆ ಸುನಿಲ್ ಛೆಟ್ರಿ ಅವರು 'ದಿ ಚಾಂಪಿಯನ್ ಕೋಡ್' ವಿಶೇಷ ಪಾಡ್ಕಾಸ್ಟ್ನಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಸಂದರ್ಶಕಿ ರೂಪಾ ರಮಣಿ ಅವರೊಂದಿಗೆ ನಡೆಸಿರುವ ಈ ಸಂಭಾಷಣೆಯಲ್ಲಿ ಐಎಸ್ಎಲ್ ಬಿಕ್ಕಟ್ಟು, ಭಾರತೀಯ ಫುಟ್ಬಾಲ್ನಲ್ಲಿರುವ ವಯಸ್ಸಿನ ವಂಚನೆ ಮತ್ತು ಜೂನ್ 12, 2026ರಿಂದ ಆರಂಭವಾಗಲಿರುವ ಫಿಫಾ ವಿಶ್ವಕಪ್ ಕುರಿತು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಐಎಸ್ಎಲ್ ಬಿಕ್ಕಟ್ಟು ಮತ್ತು ಆಡಳಿತಾತ್ಮಕ ಗೊಂದಲ
ಕಳೆದ ಒಂದೂವರೆ ವರ್ಷಗಳಿಂದ ಇಂಡಿಯನ್ ಸೂಪರ್ ಲೀಗ್ ಆಡಳಿತಾತ್ಮಕ ಮತ್ತು ಹಣಕಾಸಿನ ವಿವಾದಗಳಿಂದಾಗಿ ತೀವ್ರ ಕಠಿಣ ಹಂತವನ್ನು ಎದುರಿಸುತ್ತಿದೆ. ಇದರಿಂದಾಗಿ ಲೀಗ್ ವಿಳಂಬವಾಗಿದ್ದು, ಆಟಗಾರರ ಒಪ್ಪಂದ ನವೀಕರಣಗೊಳ್ಳದೆ ಹಲವು ಕ್ಲಬ್ಗಳು ಕಾರ್ಯಾಚರಣೆಯನ್ನೇ ಸ್ಥಗಿತಗೊಳಿಸುವ ಪರಿಸ್ಥಿತಿ ಬಂದಿದೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ.
ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸುನೀಲ್ ಛೆಟ್ರಿ
'ಕಳೆದ ಒಂದೂವರೆ ವರ್ಷಗಳು ತುಂಬಾ ಕಷ್ಟಕರವಾಗಿದ್ದವು ಮತ್ತು ಇದು ಭಾರತೀಯ ಫುಟ್ಬಾಲ್ನ ಬೆಳವಣಿಗೆಯ ವೇಗವನ್ನು ಕುಂಠಿತಗೊಳಿಸಿದೆ. ಸಂಬಳ ಮತ್ತು ಭವಿಷ್ಯದ ಅನಿಶ್ಚಿತತೆಯಿಂದಾಗಿ ಆಟಗಾರರು ಪ್ರತಿದಿನ ನನಗೆ ಫೋನ್ ಮಾಡಿ ತಮ್ಮ ಆತಂಕವನ್ನು ತೋಡಿಕೊಳ್ಳುತ್ತಿದ್ದರು,' ಎಂದು ಸುನಿಲ್ ಛೆಟ್ರಿ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
'ಬೇರೊಬ್ಬರನ್ನ ದೂರದೆ ತಪ್ಪುಗಳಿಂದ ಕಲಿಯಬೇಕು'
'ನಾನು ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್ (AIFF), ವಿವಿಧ ಕ್ಲಬ್ಗಳ ಸಿಇಒಗಳು, ಮಾಲೀಕರು ಮತ್ತು ಅಭಿಮಾನಿಗಳ ಸಂಘಟನೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಎಲ್ಲರೂ ಈ ಬಿಕ್ಕಟ್ಟಿನಿಂದ ನೊಂದಿದ್ದಾರೆ. ಎಲ್ಲರಲ್ಲೂ ಸಣ್ಣಪುಟ್ಟ ತಪ್ಪುಗಳಿವೆ. ಆದರೆ ನಾವು ಒಬ್ಬರ ಕಡೆಗೆ ಬೆರಳು ತೋರುವ ಬದಲು ತಪ್ಪುಗಳಿಂದ ಕಲಿಯಬೇಕು, ಎನ್ನುವ ಕಿವಿಮಾತನ್ನು ಯುವ ಆಟಗಾರರಿಗೆ ಹೇಳಿದ್ದಾರೆ.
ವಯಸ್ಸಿನ ವಿಚಾರದಲ್ಲಿ ಮಹಾಮೋಸ
'ಒಂದು ಒಳ್ಳೆಯ ವಿಷಯವೆಂದರೆ ಈ ವ್ಯವಸ್ಥೆಯಲ್ಲಿರುವ ಪ್ರತಿಯೊಬ್ಬರಿಗೂ ಭಾರತೀಯ ಫುಟ್ಬಾಲ್ ಬೆಳೆಯಬೇಕು ಎನ್ನುವ ಆಸೆಯಿದೆ. ನಾವೆಲ್ಲರೂ ಒಂದೇ ತಂಡವಾಗಿ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಇಂತಹ ಬಿಕ್ಕಟ್ಟು ಬರದಂತೆ ತಡೆಯಬಹುದು. ಭಾರತೀಯ ಫುಟ್ಬಾಲ್ ವ್ಯವಸ್ಥೆಯನ್ನು ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆಯೆಂದರೆ ವಯಸ್ಸಿನ ವಂಚನೆ. ಕಡಿಮೆ ವಯಸ್ಸಿನವರ ವಿಭಾಗದಲ್ಲಿ ಆಡಲು ಆಟಗಾರರು ತಮ್ಮ ವಯಸ್ಸನ್ನು ಮುಚ್ಚಿಡುವುದು ಇಲ್ಲಿ ಸಾಮಾನ್ಯವಾಗಿದೆ,' ಎಂದು ಒಪ್ಪಿಕೊಂಡಿದ್ದಾರೆ.
'ನಾವು ಸರಿಯಾದ ವಯಸ್ಸಿನಲ್ಲಿಯೇ ನಿಜವಾದ ಪ್ರತಿಭೆಗಳನ್ನು ಗುರುತಿಸಿದರೆ ಈ ವಯಸ್ಸಿನ ವಂಚನೆಗೆ ತಾನಾಗಿಯೇ ಮುಕ್ತಿ ಸಿಗುತ್ತದೆ. 11 ವರ್ಷದ ಮಗು ಚೆನ್ನಾಗಿ ಆಡುತ್ತಿದೆ ಎನ್ನುವಾಗಲೇ 13 ಅಥವಾ 15 ವರ್ಷದವರು ಎಂದು ದಾಖಲೆ ಬದಲಾಯಿಸಿ ಬಂದು ಆ ಜಾಗ ಕಿತ್ತುಕೊಳ್ಳುವ ಸ್ಪರ್ಧೆ ಇಲ್ಲಿದೆ. ಇದನ್ನು ತಡೆಯಲು ತಳಮಟ್ಟದಿಂದ ಸಂಶೋಧನೆ ಮತ್ತು ವ್ಯವಸ್ಥಿತ ಕೆಲಸಗಳಾಗಬೇಕಿದೆ,' ಎಂದು ಹೇಳಿದ್ದಾರೆ.
'99 ಸಮಸ್ಯೆಗಳಿರಬಹುದು, ಪ್ರತಿಭೆಯ ಕೊರತೆಯಿಲ್ಲ'
'ವಿದೇಶಿಯರು ಅಥವಾ ಬೇರೆ ಯಾರಾದರೂ ಭಾರತೀಯರಲ್ಲಿ ಫುಟ್ಬಾಲ್ ಪ್ರತಿಭೆ ಇಲ್ಲ ಎಂದು ಹೇಳಿದರೆ ನನಗೆ ಕೋಪ ಬರುತ್ತದೆ. ಅದು ಸಂಪೂರ್ಣ ಸುಳ್ಳು. ನಮ್ಮಲ್ಲಿ 99 ಸಮಸ್ಯೆಗಳಿರಬಹುದು, ಆದರೆ ಪ್ರತಿಭೆಯ ಕೊರತೆಯಂತೂ ಇಲ್ಲ,' ಎಂದು ಹೇಳಿದರು. ಇದೇ ವೇಳೆ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ದೇಶಗಳಲ್ಲಿ ಆಯೋಜನೆಯಾಗುತ್ತಿರುವ 2026ರ ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ರೋಮಾಂಚನಕಾರಿಯಾಗಲಿದೆ,' ಎಂದು ಅವರು ಹೇಳಿದ್ದಾರೆ.
ಲಿಯೋನೆಲ್ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೋ ಮತ್ತು ನೇಮರ್ ಅವರಂತಹ ಜಾಗತಿಕ ಸೂಪರ್ಸ್ಟಾರ್ಗಳು ಕೊನೆಯ ಬಾರಿಗೆ ವಿಶ್ವಕಪ್ನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಈ ಬಾರಿಯ ಟೂರ್ನಿ ರೋಚಕವಾಗಿರಲಿದೆ. ಕಠಿಣ ಪರಿಸ್ಥಿತಿಗಳು ಆಟಗಾರರ ಮೇಲೆ ಪ್ರಭಾವ ಬೀರುತ್ತವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಇಂದಿನ ಕಾಲದ ಬುಕಾಯೊ ಸಾಕಾ ಅಥವಾ ಅಶ್ರಫ್ ಹಕಿಮಿ ಅವರಂತಹ ಆಟಗಾರರು ಆಧುನಿಕ ಕ್ರೀಡಾ ವಿಜ್ಞಾನ ಮತ್ತು ಅತ್ಯುತ್ತಮ ಪಂದ್ಯಗಳನ್ನು ಆಡಬಲ್ಲವರಾಗಿದ್ದಾರೆ. ಆದ್ದರಿಂದ ಯಾವುದೇ ದೇಶಕ್ಕೆ ಹವಾಮಾನದ ಅನಾನುಕೂಲತೆ ಕಾಡುವುದಿಲ್ಲ. ಎಲ್ಲರಿಗೂ ಸಮಾನ ಅವಕಾಶವಿರಲಿದ್ದು, ಭರ್ಜರಿ ಪೈಪೋಟಿ ಇರಲಿದೆ,' ಎಂದು ಹೇಳಿದ್ದಾರೆ.
ಭಾರತೀಯ ಫುಟ್ಬಾಲ್ ಪ್ರೇಮಿಗಳಿಗೆ 2026ರ ಫಿಫಾ ವಿಶ್ವಕಪ್ನ ಪ್ರಸಾರದ ಹಕ್ಕುಗಳ ವಿಚಾರದಲ್ಲಿ ಅನಿಶ್ಚಿತತೆ ಮುಂದುವರಿದಿದ್ದು, ಅತಿ ಹೆಚ್ಚು ವೆಚ್ಚ ಮತ್ತು ಪಂದ್ಯಗಳ ಸಮಯದ ವ್ಯತ್ಯಾಸದಿಂದಾಗಿ ಭಾರತದಲ್ಲಿ ಅಧಿಕೃತ ಪ್ರಸಾರಕರು ಯಾರು ಎಂಬುದು ಇನ್ನೂ ಅಂತಿಮ ಹಂತದ ಚರ್ಚೆಯಲ್ಲಿದೆ. ಒಟ್ಟಿನಲ್ಲಿ ಭಾರತೀಯ ಫುಟ್ಬಾಲ್ ದಂತಕಥೆ ಸುನೀಲ್ ಛೆಟ್ರಿ ಬಿಚ್ಚಿಟ್ಟ ಸ್ಪೋಟಕ ವಿಚಾರಗಳು ಇದೀಗ ಭಾರಿ ಚರ್ಚೆಗೆ ಕಾರಣವಾಗಿವೆ.












Click it and Unblock the Notifications