ಪ್ಯಾರಿಸ್ ಒಲಿಂಪಿಕ್ಸ್ಗೆ ಸಿದ್ಧತೆ ಆರಂಭಿಸಿದ ಕ್ರೀಡಾ ಇಲಾಖೆ: ಒಲಿಂಪಿಕ್ಸ್ಗೆ ರಾಜ್ಯದಿಂದ 75 ಕ್ರೀಡಾಪಟುಗಳು?
ಬೆಂಗಳೂರು, ಆ. 20: ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಕ್ರೀಡಾಪಟುಗಳ ಸಾಧನೆ ಆಶಾದಾಯಕವಾಗಿದೆ. ಶ್ರೇಷ್ಟ ಪ್ರದರ್ಶನದ ಮೂಲಕ ಸ್ಪೂರ್ತಿ ತುಂಬಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಅಗ್ರ 10 ಸ್ಥಾನದೊಳಗೆ ಭಾರತ ಇರಬೇಕು. ಅದಕ್ಕೆ ಈಗಿನಿಂದಲೇ ಸಿದ್ದತೆ ಆಗಬೇಕು. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಭಾಷಣದಲ್ಲಿ ಘೋಷಿಸಿದಂತೆ 'ಅಮೃತ ಕ್ರೀಡಾ ದತ್ತು ಯೋಜನೆ'ಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ.
ಕೇಂದ್ರ ಸರ್ಕಾರ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ತರಬೇತಿ ನೀಡುವುದಕ್ಕಾಗಿ' ಖೇಲೋ ಇಂಡಿಯಾ' ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಖೇಲೋ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ವಹಿಸಲಾಗಿದೆ. ಅದೇ ರೀತಿ ರಾಜ್ಯ ಸರ್ಕಾರವೂ ಕ್ರೀಡೆಗೆ ಉತ್ತೇಜನ ನೀಡುವುದರ ಜೊತೆಗೆ ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು 'ಅಮೃತ ಕ್ರೀಡಾ ದತ್ತು' ಯೋಜನೆಯನ್ನು ಜಾರಿಗೆ ತಂದಿದೆ.
2024 ರ ಪ್ಯಾರಿಸ್ ಒಲಿಂಪಿಕ್ಸ್ನ್ನು ಗಮನದಲ್ಲಿರಿಸಿಕೊಂಡೇ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಪದಕ ಪಡೆಯುವ ಸಾಮರ್ಥ್ಯವುಳ್ಳ 75 ಕ್ರೀಡಪಟುಗಳನ್ನು ಆಯ್ಕೆಮಾಡಿ, ಅವರಿಗೆ ಸೂಕ್ತ ತರಬೇತಿ ನೀಡಲಾಗುವುದು.
ಯೋಜನೆಯಡಿ ಕ್ರೀಡಾ ಪಟುಗಳ ಆಯ್ಕೆ ಹೇಗೆ?
ವೈಜ್ಞಾನಿಕವಾಗಿ ಕ್ರೀಡಾ ಪ್ರತಿಭಾನ್ವೇಷಣೆ ಮಾಡಲಾಗುವುದು. ತರಬೇತಿ ಶಿಬಿರಗಳು, ಕ್ರೀಡಾಕೂಟಗಳ ಮೂಲಕ ಕ್ರೀಡಾ ಸಾಮರ್ಥ್ಯ ಗುರುತಿಸಲಾಗುವುದು. ಭಾರತೀಯ ಒಲಿಂಪಿಕ್ಸ್ ಸಂಸ್ಥೆಯಲ್ಲಿ ನೋಂದಾಯಿಸಿದ ಹಾಗೂ ಕರ್ನಾಟಕ ರಾಜ್ಯದ ಸಂಘ-ಸಂಸ್ಥೆಗಳು ಪೋಷಿಸಿರುವ ಅತ್ಯುತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳ ಪೈಕಿ ಶ್ರೇಷ್ಟರನ್ನು ಆಯ್ಕೆ ಮಾಡುವುದು. ಉನ್ನತ ಅಧಿಕಾರ ಸಮಿತಿ ರಚಿಸಿ ಕ್ರೀಡಾ ಪ್ರತಿಭೆಗಳ ಪಟ್ಟಿ ಪರಿಶೀಲನೆ ನಡೆಸಲಿದೆ ಎಂದು ರಾಜ್ಯ ಕ್ರೀಡಾ ಇಲಾಕೆ ಮಾಹಿತಿ ಕೊಟ್ಟಿದೆ.
ಕ್ರೀಡಾ ಪಟುಗಳ ಆಯ್ಕೆಗೆ ಸಮಿತಿ ರಚನೆ!
ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷರು ಸಮಿತಿಯ ಉಪಾಧ್ಯಕ್ಷರಾಗಿರಲಿದ್ದಾರೆ. ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಸದಸ್ಯರಾಗಲಿದ್ದು, ಆಯುಕ್ತರು, ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಕ್ರೀಡಾ ವಿಜ್ಞಾನ ಕೇಂದ್ರದಿಂದ ತಜ್ಞರು, ಅರ್ಜುನ ಪ್ರಶಸ್ತಿ ವಿಜೇತ ಖ್ಯಾತ ಹಾಕಿ ಆಟಗಾರ ವಿ.ಆರ್. ರಘುನಾಥ್, ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಖ್ಯಾತ ಈಜುಪಟು ನಿಹಾರ್ ಅಮಿನ್, ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಅನೂಪ್ ಶ್ರೀಧರ್ ಸಮಿತಿಯ ಸದಸ್ಯರಾಗಿದ್ದಾರೆ.
ಪ್ರತಿಷ್ಠಿತ ಅಕಾಡೆಮಿಗಳಲ್ಲಿ ಗುಣಮಟ್ಟದ ತರಬೇತಿ
ಉನ್ನತ ಅಧಿಕಾರ ಸಮಿತಿ ಆಯ್ಕೆ ಮಾಡಿದ ಕ್ರೀಡಾಪಟುಗಳು ಖೇಲೋ ಇಂಡಿಯಾ ಯೋಜನೆಯಡಿ ಮಾನ್ಯತೆ ಪಡೆದ ಪ್ರತಿಷ್ಠಿತ ಅಕಾಡೆಮಿಗಳಲ್ಲಿ ಗುಣಮಟ್ಟದ ತರಬೇತಿ ಪಡೆದು ಉತ್ತಮ ಸಾಧನೆ ಮಾಡಲು ಅನುಕೂಲವಾಗುವುದಕ್ಕಾಗಿ ರಾಜ್ಯ ಸರ್ಕಾರ ಪ್ರತಿ ಕ್ರೀಡಾಪಟುವಿಗೆ ವಾರ್ಷಿಕ ಗರಿಷ್ಠ ರೂ. 5 ಲಕ್ಷ ದ ವರೆಗೆ ಪ್ರೋತ್ಸಾಹಧನ ನೀಡಲಿದೆ. ಇದಲ್ಲದೆ ಆಕಾಂಕ್ಷ ಪೋರ್ಟಲ್ ಮೂಲಕ ಸಿಎಸ್ಆರ್ ನಿಧಿಯನ್ನು ಅಮೃತ ಕ್ರೀಡಾ ದತ್ತು ಯೋಜನೆಗೆ ಬಳಸುವುದಕ್ಕೂ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ.
ಪ್ಯಾರಿಸ್ ಒಲಿಂಪಿಕ್ಸ್ಗೆ ರಾಜ್ಯದ ಅತಿ ಹೆಚ್ಚು ಕ್ರೀಡಾಪಟುಗಳು
"ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ರಾಜ್ಯಸರ್ಕಾರ ನೀಡುತ್ತಿದೆ. ಪ್ಯಾರಿಸ್ ಒಲಿಂಪಿಕ್ಸ್ಗೆ ರಾಜ್ಯದಿಂದ ಅತಿ ಹೆಚ್ಚು ಕ್ರೀಡಾಪಟುಗಳು ಆಯ್ಕೆಯಾಗಬೇಕು. ಅ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಸಿದ್ದತೆ ಮಾಡಲಾಗಿದೆ. ಕ್ರೀಡಾಪಟುಗಳು ಪರಿಶ್ರಮ ಹಾಗೂ ಶೃದ್ಧೆಯಿಂದ ಸಾಧನೆಯಲ್ಲಿ ತೊಡಗಬೇಕು. 2024ರ ಪ್ಯಾರಿಸ್ ಒಲಿಂಪಿಕ್ಸ್ ಪದಕ ಪಟ್ಟಿಯ ಅಗ್ರ 10 ಸ್ಥಾನದಲ್ಲಿ ಭಾರತವೂ ಇರಬೇಕು. ಅದರಲ್ಲಿ ಅತಿ ಹೆಚ್ಚು ಪದಕ ಗಳಿಸಿದ ಕ್ರೀಡಾಪಟುಗಳು ನಮ್ಮ ರಾಜ್ಯದವರಾಗಿರಬೇಕು ಎಂಬ ಆಶಯದಲ್ಲಿ ಅಮೃತ ಕ್ರೀಡಾ ದತ್ತು ಯೋಜನೆ ಜಾರಿಗೆ ತರುತ್ತಿದ್ದೇವೆ" ಎಂದು ಕ್ರೀಡಾ ಸಚಿವ ಡಾ. ನಾರಾಯಣಗೌಡ ಹೇಳಿದ್ದಾರೆ.