Duleep Trophy 2023: ಕನ್ನಡಿಗರ ಮಾರಕ ಬೌಲಿಂಗ್: ಪಶ್ಚಿಮ ವಲಯವನ್ನು ಮಣಿಸಿ ಟ್ರೋಫಿ ಗೆದ್ದ ದಕ್ಷಿಣ ವಲಯ
ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಕನ್ನಡಿಗರು ಮಿಂಚಿದ್ದಾರೆ, ಕರ್ನಾಟಕ ಆಟಗಾರರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ದಕ್ಷಿಣ ವಲಯ ಫೈನಲ್ನಲ್ಲಿ ಪಶ್ಚಿಮ ವಲಯ ತಂಡದ ವಿರುದ್ಧ 75 ರನ್ಗಳ ಗೆಲುವು ಸಾಧಿಸಿದ್ದು, ಚಾಂಪಿಯನ್ ಆಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪ್ರತಿಷ್ಠಿತ ದುಲೀಪ್ ಟ್ರೋಫಿ 2023 ಫೈನಲ್ ಪಂದ್ಯದಲ್ಲಿ ಕರ್ನಾಟಕದ ಬೌಲರ್ ಗಳು ಮಿಂಚು ಹರಿಸಿದರು. ಟಾಸ್ ಗೆದ್ದ ಪಶ್ಚಿಮ ವಲಯ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ವಲಯ ಮೊದಲ ಇನ್ನಿಂಗ್ಸ್ನಲ್ಲಿ 213 ರನ್ಗಳಿಗೆ ಆಲೌಟ್ ಆಯಿತು. ಮಯಾಂಕ್ ಅಗರ್ವಾಲ್ 28, ತಿಲಕ್ ವರ್ಮಾ 40 ರನ್ ಗಳಿಸಿದರೆ, ನಾಯಕ ಹನುಮ ವಿಹಾರಿ 63 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್ 22 ರನ್ ಗಳಿಸಿದರು. ಪಶ್ಚಿಮ ವಲಯದ ಪರವಾಗಿ ನಾಗಸ್ವಲ್ಲಾ, ಚಿಂತನ್ ಗಜ ಮತ್ತು ಧಮೇಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು. ಶಾಮ್ಸ್ ಮುಲಾನಿ 3 ವಿಕೆಟ್ ಪಡೆದರು.
ವಿದ್ವತ್ ಕಾವೇರಪ್ಪ ಮಾರಕ ಬೌಲಿಂಗ್
ನಂತರ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಪಶ್ಚಿಮ ವಲಯಕ್ಕೆ ವಿದ್ವತ್ ಕಾವೇರಪ್ಪ ಮಾರಕವಾದರು. ಪಶ್ಚಿಮ ವಲಯ ಕೇವಲ 146 ರನ್ಗಳಿಗೆ ಆಲೌಟ್ ಆಯಿತು. ಪೃಥ್ವಿ ಶಾ 65 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ ಗಳು ರನ್ ಗಳಿಸಲು ಪರದಾಡಿದರು. ಕಾವೇರಪ್ಪ 7 ವಿಕೆಟ್ ಪಡೆದು ಮಿಂಚಿದರೆ, ವಾಸುಕಿ ಕೌಶಿಕ್ 1 ವಿಕೆಟ್ ಮತ್ತು ವಿಜಯ್ ಕುಮಾರ್ ವೈಶಾಕ್ 2 ವಿಕೆಟ್ ಪಡೆದು ಮಿಂಚಿದರು.
67 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ವಲಯ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿತು. ಧರ್ಮೇಂದ್ರ ಜಡೇಜಾ 5 ವಿಕೆಟ್ ಪಡೆಯುವ ಮೂಲಕ ದಕ್ಷಿಣ ವಲಯಕ್ಕೆ ಮಾರಕವಾದರು. ಮಯಾಂಕ್ ಅಗರ್ವಾಲ್ 35, ಹನುಮ ವಿಹಾರಿ 42, ರಿಕಿ ಬುಯಿ 37, ವಾಷಿಂಗ್ಟನ್ ಸುಂದರ್ 37, ವಿಜಯ್ ಕುಮಾರ್ ವೈಶಾಕ್ 23 ರನ್ ಗಳಿಸಿ ಆಸರೆಯಾದರು. ಎರಡನೇ ಇನ್ನಿಂಗ್ಸ್ನಲ್ಲಿ ದಕ್ಷಿಣ ವಲಯ 230 ರನ್ಗಳಿಗೆ ಆಲೌಟ್ ಆಗುವ ಮೂಲಕ 294 ರನ್ಗಳ ಮುನ್ನಡೆ ಪಡೆದುಕೊಂಡಿತು.

ಸಾಯಿ ಕಿಶೋರ್, ವಾಸುಕಿ ಕೌಶಿಕ್ ಮೋಡಿ
ಸೂರ್ಯಕುಮಾರ್ ಯಾದವ್, ಪೃಥ್ವಿ ಶಾ, ಚೇತೇಶ್ವರ ಪೂಜಾರ, ಸರ್ಫರಾಜ್ ಖಾನ್ರಂತಹ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದ ಪಶ್ಚಿಮ ವಲಯ 295 ರನ್ಗಳ ಗುರಿಯನ್ನು ಬೆನ್ನತ್ತಿ ಗೆಲ್ಲುವ ವಿಶ್ವಾಸದಲ್ಲಿತ್ತು. ಪೃಥ್ವಿ ಶಾ 7 ರನ್ ಗಳಿಸಿ ಔಟಾದರೆ, ಹಾರ್ವಿಕ್ ದೇಸಾಯಿ 4 ರನ್ ಗಳಿಸಿ ಔಟಾದರು.
ನಂತರ ನಾಯಕ ಪ್ರಿಯಾಂಕ್ ಪಾಂಚಲ್ ಮತ್ತು ಪೂಜಾರ ನಿಧಾನವಾಗಿ ರನ್ ಗಳಿಸುತ್ತಾ ಗೆಲುವಿನ ಭರವಸೆ ಮೂಡಿಸಿದರು. ವಾಸುಕಿ ಕೌಶಿಕ್ ಒಂದೇ ಓವರ್ ನಲ್ಲಿ ಪೂಜಾರ ಮತ್ತು ಸೂರ್ಯಕುಮಾರ್ ಯಾದವ್ ವಿಕೆಟ್ ಪಡೆಯುವ ಮೂಲಕ ದಕ್ಷಿಣ ವಲಯಕ್ಕೆ ಮೇಲುಗೈ ತಂದುಕೊಟ್ಟರು.
ಸರ್ಫರಾಜ್ ಖಾನ್ 48 ರನ್ ಗಳಿಸುವ ಮೂಲಕ ಮತ್ತೆ ಗೆಲುವಿನ ಆಸೆ ಮೂಡಿಸಿದರು. 4ನೇ ದಿನದಾಟದ ಅಂತ್ಯದಲ್ಲಿ ಸಾಯಿ ಕಿಶೋರ್ ಸರ್ಫರಾಜ್ ವಿಕೆಟ್ ಪಡೆದರು. ಭಾನುವಾರ ಆಟ ಮುಂದುವರೆಸಿದ ಪಶ್ಚಿಮ ವಲಯ 222 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ ಸೋಲು ಕಂಡಿತು. ಸರಣಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶಿಸಿದಿ ವಿದ್ವತ್ ಕಾವೇರಪ್ಪ ಪಂದ್ಯ ಶ್ರೇಷ್ಠ ಪ್ರಶಸ್ತಿಯ ಜೊತೆ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡರು.












Click it and Unblock the Notifications