Ind vs Aus: ಮೆಲ್ಬೋರ್ನ್ ಟೆಸ್ಟ್ ಸೋಲಿನ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದೇನು?
ಮೆಲ್ಬೋರ್ನ್ನಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ಸೋಲನುಭವಿಸಿದೆ. ಈ ಮೂಲಕ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಮುನ್ನಡೆ ಸಾಧಿಸಿದೆ. ಭಾರತ ಕೊನೆಯ ದಿನ ಪೂರ್ತಿ ಬ್ಯಾಟಿಂಗ್ ಮಾಡಿ ಡ್ರಾ ಮಾಡಿಕೊಳ್ಳಲಿದೆ ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಆದರೆ ಆಸ್ಟ್ರೇಲಿಯಾ ಬೌಲಿಂಗ್ ದಾಳಿಗೆ ಸಿಲುಕಿದ ಭಾರತ 155 ರನ್ಗಳಿಗೆ ಆಲೌಟ್ ಆಗುವ ಮೂಲಕ 184 ರನ್ಗಳಿಂದ ಸೋಲನುಭವಿಸಿತು.
ಈ ಪಂದ್ಯ ಸೋತ ಬಳಿಕ ಭಾರತದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ ಮತ್ತಷ್ಟು ಕಠಿಣವಾಗಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಸೋಲು ತನಗೆ ತುಂಬಾ ಬೇಸರ ತರಿಸಿದೆ ಎಂದು ಹೇಳಿದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬ್ಯಾಟಿಂಗ್ ವೈಫಲ್ಯ ಮಾನಸಿಕವಾಗಿ ದೊಡ್ಡ ಸವಾಲು, ಇದು ದೊಡ್ಡ ನಿರಾಸೆ ತಂದಿದೆ. ನಾವು ತಂಡವಾಗಿ ಹಲವು ವಿಚಾರಗಳನ್ನು ನೋಡಬೇಕಿದೆ. ವೈಯಕ್ತಿಕವಾಗಿ ಕೂಡ ಉತ್ತಮ ಪ್ರದರ್ಶನ ನೀಡಬೇಕಿದೆ. ಈ ಪಂದ್ಯ ಡ್ರಾ ಆಗಿದ್ದರೆ ಇನ್ನೂ ಚನ್ನಾಗಿರುತ್ತದೆ ಎಂದು ಹೇಳಿದರು.

ಗಿಲ್ ಕೈಬಿಟ್ಟಿದ್ದಕ್ಕೆ ರೋಹಿತ್ ಸಮರ್ಥನೆ
ಶುಭಮನ್ ಗಿಲ್ರನ್ನು ಪ್ಲೇಯಿಂಗ್ ಇಲೆವೆನ್ನಿಂದ ಹೊರಗಿಟ್ಟ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ನಾನು ಆತನ ಜೊತೆ ಮಾತನಾಡಿದ್ದೇನೆ, ಗಿಲ್ರನ್ನು ತಂಡದಿಂದ ಹೊರಗಿಡಬಾರದು ಎಂದುಕೊಂಡಿದ್ದೆವು. ಆದರೆ ಬೌಲಿಂಗ್ನಲ್ಲಿ ಹೆಚ್ಚಿನ ಆಯ್ಕೆಗಳು ಬೇಕಿದ್ದರಿಂದ ಆಲ್ರೌಂಡರ್ ಅನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ನಮ್ಮ ಪ್ರಮುಖ ಬೌಲರ್ ಗಳು, ಅವರು ಹೆಚ್ಚಿನ ವಿಕೆಟ್ ಪಡೆಯದೇ ಇರುವುದು ದುರದೃಷ್ಟಕರ. ಸಿರಾಜ್ ಪ್ರಾಮಾಣಿಕವಾಗಿ ಶ್ರಮ ಹಾಕಿದ್ದಾದರೆ, ಆಕಾಶ್ ದೀಪ್ ಕೂಡ ಉತ್ತಮವಾಗಿ ಬೌಲಿಂಗ್ ಮಾಡಿದರು. ಆದರೆ ವಿಕೆಟ್ ಪಡೆಯದೇ ಇರುವುದು ದುರದೃಷ್ಟಕರ ಎಂದು ಹೇಳಿದರು.
ನಿತೀಶ್ ರೆಡ್ಡಿ ಶತಕದ ಬಗ್ಗೆ
ಮೊದಲ ಇನ್ನಿಂಗ್ಸ್ನಲ್ಲಿ ಅಮೋಘ ಶತಕ ಸಿಡಿಸಿದ್ದ ನಿತೀಶ್ ಕುಮಾರ್ ರೆಡ್ಡಿ ಭಾರತ ತಂಡಕ್ಕೆ ಆಸರೆಯಾಗಿದ್ದರು. ನಿತೀಶ್ ಬ್ಯಾಟಿಂಗ್ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, ಆತನಲ್ಲಿ ಸಾಮರ್ಥ್ಯವಿದೆ. ಆತ ಇನ್ನೂ ನಾಲ್ಕು ಪಂದ್ಯಗಳನ್ನಷ್ಟೇ ಆಡಿದ್ದಾನೆ, ಆದರೆ ಆತ ಯಶಸ್ವಿಯಾಗಲೂ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾನೆ. ಆತನಲ್ಲಿ ಆ ಛಲವಿದೆ ಎಂದು ಹೇಳಿದರು.
ರಿಷಬ್ ಪಂತ್ ಔಟಾದ ರೀತಿ ಎಲ್ಲರಿಗೂ ಬೇಸರ ತರಿಸಿದೆ. ಆತನಿಗೆ ಯಾರಾದರೂ ಹೇಳುವುದಕ್ಕಿಂತ ಆತನೇ ತನಗೆ ಏನು ಬೇಕು ಎಂದು ಅರ್ಥ ಮಾಡಿಕೊಳ್ಳಬೇಕು. ಅವರು ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ರಿಷಬ್ ಪಂತ್ರನ್ನು ಬಹಳ ಸಮಯದಿಂದ ನೋಡಿದ್ದೇನೆ, ತಂಡಕ್ಕೆ ಏನು ಬೇಕು ಎಂದು ಅವನಿಗೆ ಅರ್ಥವಾಗುತ್ತಿಲ್ಲ, ಅವನಿಗೆ ಏನು ಮಾಡಬೇಕು ಏನು ಮಾಡಬಾರದು ಎಂದು ಅರ್ಥ ಮಾಡಿಕೊಳ್ಳಬೇಕು ಎಂದರು.












Click it and Unblock the Notifications