Robin Uthappa: ತಮ್ಮ ವಿರುದ್ಧದ ವಂಚನೆ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಕನ್ನಡಿಗ ರಾಬಿನ್ ಉತ್ತಪ್ಪ
ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರುದ್ಧ ಪಿಎಫ್ ಹಣ ವಂಚನೆ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕರ್ನಾಟಕದ ಕ್ರಿಕೆಟಿಗನ ಮೇಲೆ ವಾರೆಂಟ್ ಕೂಡ ಜಾರಿಯಾಗಿದೆ. ತಮ್ಮ ವಿರುದ್ಧದ ಆರೋಪಗಳಿಗೆ ಸ್ವತಃ ರಾಬಿನ್ ಉತ್ತಪ್ಪ ಸ್ಪಷ್ಟನೆ ನೀಡಿದ್ದು, ಈ ಪ್ರಕರಣದಲ್ಲಿ ನನ್ನ ಪಾತ್ರವೇನೂ ಇಲ್ಲ ಎನ್ನುವ ಮೂಲಕ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸುದೀರ್ಘ ಟಿಪ್ಪಣಿಯನ್ನು ಹಂಚಿಕೊಂಡಿರುವ ಅವರು, ವಿವಾದದ ಬಗ್ಗೆ ಸ್ಪಷ್ಟನೆ ನೀಡಿದರು. ಪಿಎಫ್ ವಂಚನೆ ಆರೋಪ ಎದುರಿಸುತ್ತಿರುವ ಕಂಪನಿಯಲ್ಲಿ ತಾಮ್ಮ ಪಾತ್ರ ಎಷ್ಟಿದೆ ಎನ್ನುವ ಬಗ್ಗೆ ವಿವರಣೆ ನೀಡಿದ್ದು ತಾನು ಯಾವುದೇ ವಂಚನೆ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ.

ನನ್ನ ವಿರುದ್ಧದ ಪಿಎಫ್ ಪ್ರಕರಣದ ಆರೋಪ ಕೇಳಿ ಬಂದಿರುವುದರಿಂದ ನಾನು ಸ್ಪಷ್ಟೀಕರಣ ನೀಡಲು ಬಯಸುತ್ತೇನೆ ಎಂದು ಪತ್ರವನ್ನು ಆರಂಭಿಸಿರುವ ಅವರು, ಸ್ಟ್ರಾಬೆರಿ ಲೆನ್ಸೆರಿಯಾ ಪ್ರೈ.ಲಿ., , ಸೆಂಟಾರಸ್ ಲೈಫ್ಸ್ಟೈಲ್ ಬ್ರಾಂಡ್ಸ್ ಪ್ರೈ. ಲಿ., ಬೆರ್ರಿಜ್ ಫ್ಯಾಶನ್ ಹೌಸ್ ಕಂಪನಿಯಲ್ಲಿ 2018-19ರಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ್ದೇನೆ. ಈ ಸಂಸ್ಥೆಗಳ ಜೊತೆ ಸಾಲದ ರೂಪದಲ್ಲಿ ಅವರ ಹಣಕಾಸಿನ ಕೊಡುಗೆಗಳನ್ನು ಮಾತ್ರ ಆಧರಿಸಿದೆ ಎಂದು ಹೇಳಿದ್ದಾರೆ.
2048-19ರಲ್ಲಿ ನಾನು ಈ ಕಂಪನಿಗಳಿಗೆ ಸಾಲದ ರೂಪದಲ್ಲಿ ಹಣಕಾಸಿನ ಕೊಡುಗೆ ನೀಡಿದ್ದರಿಂದ ನಿರ್ದೇಶಕನಾಗಿ ನೇಮಗೊಂಡಿದ್ದೆ. ಆದರೆ ಈ ಕಂಪನಿಯಲ್ಲಿ ನಾನು ಸಕ್ರಿಯ ಕಾರ್ಯನಿರ್ವಾಹಕನಾಗಿ ಕೆಲಸ ಮಾಡಿಲ್ಲ. ಅಥವಾ ಕಂಪನಿಯ ವ್ಯವಹಾರಗಳಲ್ಲಿ ನಾನು ಭಾಗಿಯಾಗಿಲ್ಲ. ಕ್ರಿಕೆಟಿಗನಾಗಿ, ಟಿವಿ ನಿರೂಪಕನಾಗಿ ನಾನು ಕೆಲಸ ಮಾಡುತ್ತಿರುವ ಕಾರಣ ಆ ಕಂಪನಿಯ ವ್ಯವಹಾರದಲ್ಲಿ ಪಾಲ್ಗೊಳ್ಳಲು ನನಗೆ ಸಮಯವೇ ಇರಲಿಲ್ಲ. ನಾನು ಸಾಲ ನೀಡಿದ ಯಾವುದೇ ಕಂಪನಿಗಳಲ್ಲಿ ಕಾರ್ಯನಿರ್ವಾಹಕ ಪಾತ್ರವನ್ನು ವಹಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಏನಿದು ಪ್ರಕರಣ?
ಭವಿಷ್ಯ ನಿಧಿ (ಪಿಎಫ್) ಪ್ರಾದೇಶಿಕ ಆಯುಕ್ತ ಷಡಕ್ಷರಿ ಗೋಪಾಲ್ ರೆಡ್ಡಿ ಹೊರಡಿಸಿರುವ ಬಂಧನ ವಾರೆಂಟ್ ವಿವಾದಕ್ಕೆ ಕಾರಣವಾಗಿದೆ. ರಾಬಿನ್ ಉತ್ತಪ್ಪ ಅವರಿಗೆ ಸಂಬಂಧಿಸಿದ ಖಾಸಗಿ ಸಂಸ್ಥೆ ಸೆಂಟಾರಸ್ ಲೈಫ್ಸ್ಟೈಲ್ ಬ್ರಾಂಡ್ಸ್ ಪ್ರೈವೇಟ್ ಲಿ. ಲಿಮಿಟೆಡ್ ತನ್ನ ನೌಕರರ ಸಂಬಳದಿಂದ ಪಿಎಫ್ ಕೊಡುಗೆ ಕಡಿಮೆ ಮಾಡಿದ್ದು, ಅವರುಗಳನ್ನು ಠೇವಣಿ ಮಾಡುವಲ್ಲಿ ವಿಫಲವಾಗಿದ್ದರಿಂದ 23-24 ಲಕ್ಷ ರೂಪಾಯಿ ವಂಚನೆಯಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ನನ್ನ ಮೇಲಿನ ಆರೋಪಗಳಿಗೆ ನಾನೂ ಕಾನೂನು ಪ್ರಕಾರವೇ ಉತ್ತರ ನೀಡಿದ್ದೇನೆ. ಇದರಲ್ಲಿ ತನ್ನ ಪಾತ್ರ ಏನೂ ಇಲ್ಲ ಎನ್ನುವುದಕ್ಕೆ ಸಾಕ್ಷಿಗಳನ್ನು ಕೂಡ ನೀಡಿದ್ದೇನೆ. ಅಧಿಕಾರಿಗಳು ಕೇಳಿರುವ ದಾಖಲೆಗಳನ್ನು ಒದಗಿಸಲಾಗಿದೆ ಎಂದು ಹೇಳಿದ್ದಾರೆ. ದಾಖಲೆಗಳನ್ನು ಸಲ್ಲಿಸಿದ್ದರೂ ಅಧಿಕಾರಿಗಳು ತಮ್ಮ ವಿಚಾರಣೆಯನ್ನು ಮುಂದುವರೆಸಿದ್ದಾರೆ. ಇದರಿಂದಾಗಿಯೇ ಬಂಧನ ವಾರೆಂಟ್ ಹೊರಡಿಸಲಾಗಿದೆ. ಕಾನೂನು ಮೂಲಕವೇ ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ.
ಭಾರತ ಮತ್ತು ಕರ್ನಾಟಕ ತಂಡಗಳಿಗೆ ಆಡಿರುವ ರಾಬಿನ್ ಉತ್ತಪ್ಪ, ಐಪಿಎಲ್ನಲ್ಲಿ ಕೂಡ ತಮ್ಮದೇ ಛಾಪು ಮೂಡಿಸಿದ್ದರು. ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದು, ಕ್ರೀಡಾ ವಾಹಿನಿಯಲ್ಲಿ ನಿರೂಪಕರಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಆದ ಯೂಟ್ಯೂಬ್ ಚಾನಲ್ ಕೂಡ ಹೊಂದಿದ್ದಾರೆ.












Click it and Unblock the Notifications