Rajat Patidar: 6 ಸಿಕ್ಸರ್, 4 ಬೌಂಡರಿ; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಬ್ಬರಿಸಿದ ರಜತ್ ಪಟಿದಾರ್
ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2024ರ ಪಂದ್ಯಾವಳಿಯಲ್ಲಿ ರಜತ್ ಪಟಿದಾರ್ ಅಬ್ಬರಿಸುತ್ತಿದ್ದಾರೆ. ಆರ್ ಸಿಬಿ ಆಟಗಾರನಿಗೆ ಈ ಬಾರಿ ಮಧ್ಯಪ್ರದೇಶ ತಂಡದ ನಾಯಕತ್ವದ ಜವಾಬ್ದಾರಿ ಕೂಡ ಸಿಕ್ಕಿದ್ದು ಅದಕ್ಕೆ ತಕ್ಕಂತೆ ಪ್ರದರ್ಶನ ಕೂಡ ನೀಡುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಮಧ್ಯಪ್ರದೇಶ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದು, ಭಾನುವಾರ (ಡಿಸೆಂಬರ್ 15) ನಡೆಯಲಿರುವ ಫೈನಲ್ನಲ್ಲಿ ಮುಂಬೈ ತಂಡವನ್ನು ಎದುರಿಸಲಿದೆ. ಸೆಮಿಫೈನಲ್ನಲ್ಲಿ ರಜತ್ ಪಟಿದಾರ್ ಸ್ಫೋಟಕ ಅರ್ಧಶತಕ ಸಿಡಿಸುವ ಮೂಲಕ ದೆಹಲಿ ವಿರುದ್ಧ ಪಂದ್ಯದಲ್ಲಿ ತಮ್ಮ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಮಧ್ಯಪ್ರದೇಶ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿತು. ಪ್ರಿಯಾಂಶ್ ಆರ್ಯ 29 ರನ್, ಅನುಜ್ ರಾವತ್ 34 ರನ್ ಗಳಿಸಿ ದೆಹಲಿಗೆ ನೆರವಾದರು. ವೆಂಕಟೇಶ್ ಅಯ್ಯರ್ 2 ವಿಕೆಟ್ ಪಡೆದುಕೊಂಡರು.

ರಜತ್ ಪಟಿದಾರ್ ಸ್ಫೋಟಕ ಅರ್ಧಶತಕ
147 ರನ್ಗಳ ಸವಾಲಿನ ಗುರಿಯನ್ನು ಬೆನ್ನತ್ತಿದ ಮಧ್ಯಪ್ರದೇಶ 15.4 ಓವರ್ ಗಳಲ್ಲೇ 3 ವಿಕೆಟ್ ಕಳೆದುಕೊಂಡು 152 ರನ್ ಗಳಿಸುವ ಮೂಲಕ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ ಫೈನಲ್ಗೆ ಲಗ್ಗೆಯಿಟ್ಟಿತು. ನಾಯಕ ರಜತ್ ಪಟಿದಾರ್ 29 ಎಸೆತಗಳಲ್ಲಿ 4 ಬೌಂಡರಿ 6 ಸಿಕ್ಸರ್ ಸಹಿತ ಅಜೇಯ 66 ರನ್ ಗಳಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ಹಪ್ರೀತ್ ಸಿಂಗ್ 38 ಎಸೆತಗಳಲ್ಲಿ ಅಜೇಯ 46 ರನ್ ಗಳಿಸಿ ರಜತ್ ಪಟಿದಾರ್ ಗೆ ನೆರವಾದರು.
ಚಿನ್ನಸ್ವಾಮಿ ಕ್ರೀಡಾಂಗಣ ರಜತ್ ಪಟಿದಾರ್ ಗೆ ಹೊಸದೇನಲ್ಲ, ಆರ್ ಸಿಬಿ ತಂಡಕ್ಕಾಗಿ ಆಡುವ ಅವರು ಈ ಮೊದಲು ಇಲ್ಲಿ ಭರ್ಜರಿ ಇನ್ನಿಂಗ್ಸ್ ಆಡಿದ್ದಾರೆ. 2025ರ ಐಪಿಎಲ್ ಮೆಗಾ ಹರಾಜಿಗೆ ಮುನ್ನ ಆರ್ ಸಿಬಿ ರಜತ್ ಪಟಿದಾರ್ ರನ್ನು 11 ಕೋಟಿ ರೂಪಾಯಿ ನೀಡಿ ಉಳಿಸಿಕೊಂಡಿದೆ. 2022ರ ಐಪಿಎಲ್ ಹರಾಜಿನಲ್ಲಿ ಅವರನ್ನು ಮೂಲಬೆಲೆ 20 ಲಕ್ಷ ರೂಪಾಯಿಗೆ ಖರೀದಿ ಮಾಡಿತ್ತು.
2024ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ರಜತ್ ಪಟಿದಾರ್ 9 ಪಂದ್ಯಗಳನ್ನಾಡಿದ್ದು 49.57 ಸರಾಸರಿ ಮತ್ತು 182.63 ಸ್ಟ್ರೈಕ್ರೇಟ್ನಲ್ಲಿ 347 ರನ್ ಗಳಿಸಿದ್ದಾರೆ. ಇದರಲ್ಲಿ 26 ಬೌಂಡರಿ ಇದ್ದರೆ ಬರೋಬ್ಬರಿ 25 ಸಿಕ್ಸರ್ ಸೇರಿವೆ.
2025ರ ಐಪಿಎಲ್ನಲ್ಲಿ ಆರ್ ಸಿಬಿ ತಂಡದ ನಾಯಕನ ಸ್ಥಾನಕ್ಕೆ ಮೊದಲ ಆಯ್ಕೆ ವಿರಾಟ್ ಕೊಹ್ಲಿ ಆಗಿದ್ದಾರೆ, ಒಂದು ವೇಳೆ ಕೊಹ್ಲಿ ನಾಯಕನ ಜವಾಬ್ದಾರಿ ನಿಭಾಯಿಸಲು ಒಪ್ಪದಿದ್ದರೆ ರಜತ್ ಪಟಿದಾರ್ ಗೆ ನಾಯಕತ್ವ ಸಿಗುವ ಸಾಧ್ಯತೆ ಕೂಡ ಇದೆ. ಮಧ್ಯಪ್ರದೇಶ ತಂಡದ ನಾಯಕನಾಗಿ ಯಶಸ್ಸು ಸಿಕ್ಕಿರುವುದು ಅವರಿಗೆ ಸಹಾಯ ಮಾಡಲಿದೆ.












Click it and Unblock the Notifications