RCB: ಇದಕ್ಕೆ ನೀವು ಕಪ್ ಗೆದ್ದಿಲ್ಲ! ಫ್ರಾಂಚೈಸಿ ವಿರುದ್ಧ ಸಿಟ್ಟಿಗೆದ್ದ ಆರ್ಸಿಬಿ ಅಭಿಮಾನಿಗಳು
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಹಲವು ತಂಡಗಳು ಈಗಾಗಲೇ ಹಲವು ಉತ್ತಮ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿವೆ. ಲಕ್ನೋ ಸೂಪರ್ ಜೈಂಟ್ಸ್ 27 ಕೋಟಿ ರೂಪಾಯಿಗೆ ರಿಷಬ್ ಪಂತ್ರನ್ನು ಖರೀದಿ ಮಾಡಿದರೆ, ಶ್ರೇಯಸ್ ಅಯ್ಯರ್ 26.75 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ.
83 ಕೋಟಿ ರೂಪಾಯಿ ಪರ್ಸ್ ಜೊತೆ ಹರಾಜಿಗೆ ಹೋಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈವರೆಗೂ ಲಿಯಾಮ್ ಲಿವಿಂಗ್ಸ್ಟೋನ್ರನ್ನು 8.75 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಕೆಎಲ್ ರಾಹುಲ್, ಯುಜ್ವೇಂದ್ರ ಚಹಾಲ್, ಮಿಚೆಲ್ ಸ್ಟಾರ್ಕ್, ಡೇವಿಡ್ ಮಿಲ್ಲರ್ ಸೇರಿದಂತೆ ಹಲವು ಆಟಗಾರರಿಗೆ ಬಿಡ್ ಮಾಡುತ್ತದೆ ಎಂದು ನಂಬಲಾಗಿತ್ತು, ಆದರೆ ಆರ್ ಸಿಬಿ ಎಲ್ಲರ ನಿರೀಕ್ಷೆಗಳನ್ನು ಸುಳ್ಳು ಮಾಡಿದೆ.

ಸಿಟ್ಟಿಗೆದ್ದ ಅಭಿಮಾನಿಗಳು
ಕೆಎಲ್ ರಾಹುಲ್ರನ್ನು 14 ಕೋಟಿ ರೂಪಾಯಿಗೆ ಡೆಲ್ಲಿಕ್ಯಾಪಿಟಲ್ಸ್ ಖರೀದಿ ಮಾಡುವಲ್ಲಿ ಯಶಸ್ವಿಯಾಗಿದ್ದು, ಆರ್ ಸಿಬಿ ಅಭಿಮಾನಿಗಳ ಸಿಟ್ಟು ನೆತ್ತಿಗೇರಿತು. ಕನ್ನಡಿಗರನ್ನು ಕಡೆಗಣಿಸುವ ನಿಮ್ಮ ಬುದ್ದಿ ಇನ್ನೂ ಹೋಗಿಲ್ಲ ಇದಕ್ಕೆ ನೀವಿನ್ನೂ ಕಪ್ ಗೆದ್ದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುಜ್ವೇಂದ್ರ ಚಹಾಲ್ಗೂ ಕೂಡ ಆರ್ ಸಿಬಿ ಹೆಚ್ಚಿನ ಆಸಕ್ತಿ ತೋರಿಸಲಿಲ್ಲ. ಜೋಸ್ ಬಟ್ಲರ್ ಗೆ ಬಿಡ್ ಮಾಡದ ಆರ್ ಸಿಬಿ ವೆಂಕಟೇಶ್ ಅಯ್ಯರ್ ಗಾಗಿ 23.50 ಕೋಟಿ ರೂಪಾಯಿಗೆ ಬಿಡ್ ಮಾಡಿದ್ದು ಅಚ್ಚರಿ ಮೂಡಿಸಿತು. ಆಸ್ಟ್ರೇಲಿಯಾ ಸ್ಪೋಟಕ ಆಲ್ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಕೂಡ ಪಂಜಾಬ್ ಪಾಲಾದರೂ, ಆರ್ ಸಿಬಿ ಅವರನ್ನು ಖರೀದಿಸಲು ಧೈರ್ಯ ಮಾಡಲಿಲ್ಲ.
ಪ್ರಮುಖ ಆಟಗಾರರು ಉಳಿದ ತಂಡಗಳ ಪಾಲಾಗುತ್ತಿದ್ದರು, ಆರ್ ಸಿಬಿ ಮಾತ್ರ ಯಾರಿಗೂ ಹೆಚ್ಚಿನ ಪೈಪೋಟಿ ಮಾಡದೇ ಇರುವುದು ನೋಡಿ, ಇವರು ಹಣ ಉಳಿಸಿ ಮ್ಯೂಚುಯಲ್ ಫಂಡ್ಸ್ನಲ್ಲಿ ಇನ್ವೆಸ್ಟ್ ಮಾಡಲಿದ್ದಾರೆ ಎಂದು ವ್ಯಂಗ್ಯವಾಡುತ್ತಿದ್ದಾರೆ. ಇನ್ನೂ ಕೆಲವರು ಕಡಲೆ ಕಾಯಿ ಪರಿಷೆಯಲ್ಲಿ ಖರ್ಚು ಮಾಡಲು ಉಳಿಸಿಕೊಂಡಿದ್ದಾರೆ ಎಂದು ಕಾಲೆಳೆಯುತ್ತಿದ್ದಾರೆ.
ವಿಕೆಟ್ ಕೀಪರ್, ಬೌಲರ್, ನಾಯಕನ ಹುಡುಕಾಟದಲ್ಲಿರುವ ಆರ್ ಸಿಬಿ ಪ್ರಮುಖ ಆಟಗಾರರು ಹರಾಜಾಗುವವರೆಗೆ ಸುಮ್ಮನಿದೆ. ಇನ್ನು ಯಾವ ರೀತಿಯ ತಂಡ ಕಟ್ಟುವ ಆಲೋಚನೆ ಇದೆ ಎನ್ನುವುದು ಅಭಿಮಾನಿಗಳಿಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.












Click it and Unblock the Notifications