RCB Rajat Patidar: ನಾವು ಈ ಗೆಲುವಿಗೆ ಅರ್ಹರಲ್ಲ: ಮತ್ತೊಮ್ಮೆ ಆರ್ಸಿಬಿ ನಾಯಕ ರಜತ್ ಪಾಟಿದಾರ್ ಅಚ್ಚರಿ ಹೇಳಿಕೆ
RCB Rajat Patidar: ರಾಯ್ಪುರದಲ್ಲಿ ಭಾನುವಾರ (ಮೇ 10) ನಡೆದ ಐಪಿಎಲ್ 2026ರ 54ನೇ ರೋಚಕ ಪಂದ್ಯದಲ್ಲಿ ಆಲ್ರೌಂಡರ್ ಕೃನಾಲ್ ಪಾಂಡ್ಯ ಅವರ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 2 ವಿಕೆಟ್ಗಳಿಂದ ಜಯಭೇರಿ ಬಾರಿಸಿತು. ಪಂದ್ಯದ ಬಳಿಕ ಮಾತನಾಡಿದ ಆರ್ಸಿಬಿ ನಾಯಕ ರಜತ್ ಪಾಟಿದಾರ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಮುಂಬೈ ಇಂಡಿಯನ್ಸ್ ನೀಡಿದ 167 ರನ್ಗಳ ಗುರಿ ಬೆನ್ನಟ್ಟಿದ ರಜತ್ ಪಾಟಿದಾರ್ ನಾಯಕತ್ವದ ಆರ್ಸಿಬಿ ತಂಡವು ಕೇವಲ 5.1 ಓವರ್ಗಳಲ್ಲಿ 39 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜವಾಬ್ದಾರಿಯುತ ಆಟವಾಡಿದ ಕೃನಾಲ್ ಪಾಂಡ್ಯ ಕೇವಲ 46 ಎಸೆತಗಳಲ್ಲಿ 73 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಕ್ರಮಾಂಕಕ್ಕೇರಿದ ಆರ್ಸಿಬಿ
ಕೃನಾಲ್ ಅವರ ವಿಕೆಟ್ ಪತನದ ನಂತರ ಮುಂಬೈ ಇಂಡಿಯನ್ಸ್ ಪಂದ್ಯದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿತು. ಆದರೆ ಪಟ್ಟು ಬಿಡದ ಆರ್ಸಿಬಿ ಆಟಗಾರರು ಕೊನೆಯ ಎಸೆತದವರೆಗೂ ಹೋರಾಟ ಮುಂದುವರಿಸಿದರು. ಪಂದ್ಯ ಗೆಲ್ಲಲು ಕೊನೆಯ ಎಸೆತದಲ್ಲಿ 2 ರನ್ಗಳ ಅಗತ್ಯವಿತ್ತು. ಆರ್ಸಿಬಿ ಯಶಸ್ವಿಯಾಗಿ ಈ ರನ್ ಗಳಿಸುವ ಮೂಲಕ ವಿಜಯವನ್ನು ತನ್ನದಾಗಿಸಿಕೊಂಡು ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಕ್ರಮಾಂಕಕ್ಕೆ ಏರಿತು.
ಕೃನಾಲ್ ಪಾಂಡ್ಯ ಬಗ್ಗೆ ಪಾಟಿದಾರ್ ಮಹತ್ವದ ಹೇಳಿಕೆ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆರ್ಸಿಬಿ ನಾಯಕ ರಜತ್ ಪಾಟಿದಾರ್ ಅವರು, "ಇದೊಂದು ಅತ್ಯಂತ ಜಿದ್ದಾಜಿದ್ದಿನ ಪಂದ್ಯವಾಗಿತ್ತು. ವಿಶೇಷವಾಗಿ ಕೃನಾಲ್ ಪಾಂಡ್ಯ ಬಗ್ಗೆ ಹೇಳಲೇಬೇಕು. ನನ್ನ ಪ್ರಕಾರ ತಂಡಕ್ಕಾಗಿ ಈ ಗೆಲುವನ್ನು ತಂದುಕೊಟ್ಟವರು ಅವರೇ," ಎಂದು ಹೇಳುವ ಮೂಲಕ ಮೆಚ್ಚುಗೆ ಸೂಚಿಸಿದರು. ಕೃನಾಲ್ ಅವರನ್ನು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಕಳುಹಿಸಲಾಗಿತ್ತು. ಈ ನಿರ್ಧಾರ ಯಾರದ್ದು ಎಂದು ಕೇಳಿದಾಗ ನಾಯಕ ಪಾಟಿದಾರ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಕೃನಾಲ್ಗೆ ಸಾಕಷ್ಟು ಅನುಭವವಿದೆ: ರಜತ್ ಪಾಟಿದಾರ್
"ನನ್ನ ಪ್ರಕಾರ ಇದು ನಮ್ಮೆಲ್ಲರ ನಿರ್ಧಾರ. ನಾವು ಈ ಬಗ್ಗೆ ತಂಡದ ಸಭೆಗಳಲ್ಲಿ ಚರ್ಚಿಸಿದ್ದೆವು. ಅವರು ಆಡುವ ರೀತಿ ನಮಗೆ ತಿಳಿದಿದೆ. ಈ ಹಿಂದೆಯೂ ಅವರು ಐದನೇ ಕ್ರಮಾಂಕದಲ್ಲಿ ಆಡಿದ್ದಾರೆ. ಆದರೆ ಅವರಿಗೆ ಐದನೇ ಕ್ರಮಾಂಕದಲ್ಲಿ ಆಡಲು ಈ ಬಾರಿ ಹೆಚ್ಚಿನ ಅವಕಾಶ ನೀಡಲು ನಾವು ಬಯಸಿದ್ದೆವು ಮತ್ತು ಅವರು ಅದನ್ನು ಅತ್ಯುತ್ತಮವಾಗಿ ನಿಭಾಯಿಸಿದರು. ಅವರ ಬಳಿ ಸಾಕಷ್ಟು ಅನುಭವವಿದೆ. ಹಾಗಾಗಿಯೇ ಅಂತಹ ಆಟಗಾರರು ತಂಡ ಒತ್ತಡದಲ್ಲಿರುವಾಗ ಉತ್ತಮವಾಗಿ ಪ್ರದರ್ಶನ ನೀಡುತ್ತಾರೆ. ಅವರ ಆಟ ನಿಜಕ್ಕೂ ಅದ್ಭುತವಾಗಿತ್ತು," ಎಂದು ಶ್ಲಾಘಿಸಿದ್ದಾರೆ.
ಎಂಐ ಬ್ಯಾಟರ್ಗಳಿಗೆ ಸಿಂಹಸ್ವಪ್ನವಾದ ಭುವಿ
ಮೊದಲ ಇನ್ನಿಂಗ್ಸ್ನಲ್ಲಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರು ಉತ್ತಮ ಬೌಲಿಂಗ್ ದಾಳಿ ಮಾಡಿದರು. ಅವರು ಕೇವಲ 23 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಅದ್ಭುತ ಪ್ರದರ್ಶನ ನೀಡಿದರು. ಈ ಮೂಲಕ ಮುಂಬೈ ಇಂಡಿಯನ್ಸ್ ಬ್ಯಾಟರ್ಗಳಿಗೆ ಸಿಂಹಸ್ವಪ್ನವಾದರು. "ಭುವನೇಶ್ವರ್ ಕುಮಾರ್ ಅವರು ಚೆಂಡಿನ ಮೇಲೆ ಹೊಂದಿರುವ ನಿಯಂತ್ರಣ ನಿಜಕ್ಕೂ ಅದ್ಭುತವಾಗಿದೆ. ಈ ಪಿಚ್ ಎರಡು ರೀತಿಯ ವೇಗ ಮತ್ತು ಉತ್ತಮ ಬೌನ್ಸ್ನಿಂದ ಕೂಡಿದ್ದರಿಂದ ಬ್ಯಾಟಿಂಗ್ ಮಾಡುವುದು ಕಷ್ಟಕರವಾಗಿತ್ತು. ಇಂತಹ ಸಂದರ್ಭದಲ್ಲಿ ಅವರನ್ನು ಎದುರಿಸುವುದು ತುಂಬಾ ಕಠಿಣ ಎಂದು ನಾನು ಭಾವಿಸುತ್ತೇನೆ," ಎಂದು ತಿಳಿಸಿದರು. ಈ ಗೆಲುವಿನೊಂದಿಗೆ ಆರ್ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ರಜತ್ ಪಾಟಿದಾರ್ ಅಚ್ಚರಿ ಹೇಳಿಕೆ
"ಸದ್ಯಕ್ಕೆ ನಾವು ಅಂಕಪಟ್ಟಿಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಏಕೆಂದರೆ ಅಂಕಪಟ್ಟಿಯನ್ನು ನೋಡುವುದಕ್ಕಿಂತ ಹೆಚ್ಚಾಗಿ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುವುದು ನಮ್ಮ ಉದ್ದೇಶವಾಗಿದೆ. ನಮ್ಮ ಬೌಲರ್ಗಳು ಅದ್ಭುತವಾಗಿ ಕೆಲಸ ಮಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಎದುರಾಳಿಗಳನ್ನು 166 ರನ್ಗಳಿಗೆ ನಿಯಂತ್ರಿಸಿದ್ದು ದೊಡ್ಡ ವಿಷಯ. ಆ ಗುರಿಯನ್ನು ಸುಲಭವಾಗಿ ಬೆನ್ನಟ್ಟಬಹುದಿತ್ತು. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾವು ಈ ಗೆಲುವಿಗೆ ಅರ್ಹರಲ್ಲ ಎಂದು ನನಗನ್ನಿಸುತ್ತದೆ. ಏಕೆಂದರೆ ನಮ್ಮಲ್ಲಿ ಅತಿ ಹೆಚ್ಚು ಕೌಶಲ್ಯವಿರುವ ಬ್ಯಾಟಿಂಗ್ ವಿಭಾಗವಿದೆ. ಹಾಗಾಗಿ ಪರಿಸ್ಥಿತಿ ಅಥವಾ ಪಿಚ್ ಎಷ್ಟೇ ಕಠಿಣವಾಗಿದ್ದರೂ ಅಂತಹ ಗುರಿಗಳನ್ನು ಸುಲಭವಾಗಿ ಬೆನ್ನಟ್ಟುವ ಸಾಮರ್ಥ್ಯ ನಮಗಿದೆ," ಎಂದು ಹೇಳುವ ಮೂಲಕ ಗಮನ ಸೆಳೆದರು.












Click it and Unblock the Notifications