RCB: ಅಭಿಮಾನಿಗಳಿಗೆ ಕನ್ನಡದಲ್ಲೇ ವಿಶೇಷ ಸಂದೇಶ ಕೊಟ್ಟ ಆರ್ಸಿಬಿ ನಾಯಕ ರಜತ್ ಪಟಿದಾರ್
ಐಪಿಎಲ್ 2025ರ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಎಲ್ಲಾ ತಂಡಗಳು ತಮ್ಮ ತವರಿನಲ್ಲಿ ಅಭ್ಯಾಸ ಆರಂಭಿಸಿದೆ. ಆರ್ ಸಿಬಿ ಕೂಡ ಈ ಬಾರಿ ಪಂದ್ಯಾವಳಿಗಾಗಿ ಅಭ್ಯಾಸ ಆರಂಭಿಸಿದ್ದು ಬಹುತೇಕ ಆಟಗಾರರು ಈಗಾಗಲೇ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿಳಿದಿದ್ದಾರೆ. ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಸೇರಿದಂತೆ ಕೆಲವು ಆಟಗಾರರು ಇನ್ನೂ ಬರಬೇಕಿದೆ.
ನಾಯಕ ರಜತ್ ಪಟಿದಾರ್ ಮಾರ್ಚ್ 12ರಂದೇ ತಂಡವನ್ನು ಸೇರಿಕೊಂಡಿದ್ದು ಅಭ್ಯಾಸ ಆರಂಭಿಸಿದ್ದಾರೆ. ಬೆಂಗಳೂರಿಗೆ ಬಂದ ಬಳಿಕ ಕನ್ನಡದಲ್ಲೇ ಮಾತನಾಡಿರುವ ರಜತ್ ಪಟಿದಾರ್ ಅಭಿಮಾನಿಗಳಿಗೆ ವಿಶೇಷ ಸಂದೇಶ ಕೊಟ್ಟಿದ್ದಾರೆ.

ನಾನ್ ಬಂದಿದಿನಿ ನೀವ್ ರೆಡಿ ಆಗಿ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದು ರಜತ್ ಪಟಿದಾರ್ ಆರ್ ಸಿಬಿ ಬಾವುಟ ಹಿಡಿದಿರುವುದನ್ನು ನೋಡಬಹುದು. ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾದ ಹಿನ್ನೆಲೆ ಸಂಗೀತವನ್ನು ನೀಡಲಾಗಿದ್ದು, ರಜತ್ ಪಟಿದಾರ್, ಕನ್ನಡದಲ್ಲಿ ಮಾತನಾಡಿ ನಮಸ್ಕಾರ ಬೆಂಗಳೂರು, ನಾನು ಬಂದಿದಿನಿ ಸಪೋರ್ಟ್ ಮಾಡೋಕೆ ನೀವು ರೆಡಿ ಆಗಿ ಎಂದು ಹೇಳಿದ್ದಾರೆ.
ಮೊದಲ ಪಂದ್ಯದಲ್ಲಿ ಚಾಂಪಿಯನ್ನರಿಗೆ ಸವಾಲು
ಮಾರ್ಚ್ 22ರಂದು ಐಪಿಎಲ್ 2025ರ ಆವೃತ್ತಿಗೆ ಚಾಲನೆ ಸಿಗಲಿದೆ. ಮಾರ್ಚ್ 22 ಶನಿವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು ಆರ್ ಸಿಬಿ ತಂಡವನ್ನು ಎದುರಿಸಲಿದೆ.
ಎರಡೂ ತಂಡಗಳಲ್ಲಿ ಈ ಬಾರಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. 2024ರ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಕೆಕೆಆರ್ ಬಹುತೇಕ ಆಟಗಾರರನ್ನು ಉಳಿಸಿಕೊಂಡಿದೆ. ಆದರೆ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಕೈಬಿಟ್ಟಿದೆ. ಆರ್ ಸಿಬಿ ವಿರಾಟ್ ಕೊಹ್ಲಿ, ರಜತ್ ಪಟಿದಾರ್ ಮತ್ತು ಯಶ್ ದಯಾಳ್ರನ್ನು ಮಾತ್ರ ಉಳಿಸಿಕೊಂಡಿದ್ದ ಉಳಿದಂತೆ ತಂಡವನ್ನು ಬದಲಾಯಿಸಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಆಲ್ರೌಂಡರ್ ಗಳೇ ಇದ್ದು ತಂಡವು ಸಮತೋಲದಿಂದ ಕೂಡಿದೆ. ಫಿಲ್ ಸಾಲ್ಟ್ ಸ್ಪೋಟಕ ಆರಂಭ ಒದಗಿಸಲು ಸಜ್ಜಾಗಿದ್ದರೆ, ವಿರಾಟ್ ಕೊಹ್ಲಿ, ರಜತ್ ಪಟಿದಾರ್, ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಟಿಮ್ ಡೇವಿಡ್ ಬ್ಯಾಟಿಂಗ್ಗೆ ಬಲ ತುಂಬಲಿದ್ದಾರೆ. ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ಸುಯಶ್ ಶರ್ಮಾ ತಂಡದ ಪ್ರಮುಖ ಬೌಲರ್ ಆಗಿದ್ದಾರೆ.
ಜೋಶ್ ಹೇಜಲ್ವುಡ್ ಮತ್ತು ಜೇಕಬ್ ಬೆಥೆಲ್ ಗಾಯಗೊಂಡಿದ್ದು ಈ ಇಬ್ಬರೂ ಐಪಿಎಲ್ನಲ್ಲಿ ಆಡಲಿದ್ದಾರ ಇಲ್ಲವಾ ಎನ್ನುವ ಬಗ್ಗೆ ಅನುಮಾನಗಳಿದೆ. ಇಬ್ಬರೂ ಐಪಿಎಲ್ಗೆ ಅಲಭ್ಯವಾದರೆ ಆರ್ ಸಿಬಿ ಬದಲೀ ಆಟಗಾರರನ್ನು ಹೆಸರಿಸಲಿದೆ.












Click it and Unblock the Notifications